ಯೋಗರಾಜ್ ಭಟ್ರ ಕ್ಯಾಂಪ್ ಸೇರಿದ ಅನುರಾಗ್ ಕಶ್ಯಪ್, ಜೊತೆಯಾಗಿ ಸಿನಿಮಾ ಮಾಡ್ತಾರಾ ಇಬ್ಬರು ?
ಒಂದ್ಕಾಲದಲ್ಲಿ ಮುತ್ತಿನಂಥ ಮಾತುಗಳನ್ನು ಪೋಣಿಸಿಯೇ ಕರುನಾಡಿನ ಮನ ಗೆದ್ದವರು ಯೋಗರಾಜ್ ಭಟ್. ಮುಂಗಾರು ಮಳೆ.. ಗಾಳಿಪಟ.. ಮನಸಾರೆ.. ಪಂಚರಂಗಿ.. ಪರಮಾತ್ಮ.. ಹೀಗೆ ಎಲ್ಲವೂ ಒಂದಕ್ಕಿಂತ ಒಂದು ಚೆಂದದ ಚಿತ್ರಗಳನ್ನು ಕನ್ನಡಿಗರ ಮಡಿಲಿಗೆ ಹಾಕಿದ ಹೆಗ್ಗಳಿಕೆ ಇವರದ್ದು. ಇನ್ನು.. ಇವರ ಲೇಖನಿಯಲ್ಲಿ ಕೇವಲ ಹತ್ತು ನಿಮಿಷದಲ್ಲಿ ಹೊರ ಬಂದ ಅದೆಷ್ಟೋ ಹಾಡುಗಳು ಇವತ್ತು ಕೂಡ ಹಲವರ ನೆಚ್ಚಿನ ಗೀತೆಗಳು.
ಇಂಥಾ ಯೋಗರಾಜ್ ಭಟ್ ಅದ್ಯಾಕೋ ಕಳೆದ ಕೆಲ ದಿನಗಳಿಂದ ಮಂಕಾಗಿದ್ದಾರೆ. ಪ್ರೇಕ್ಷಕರ ನಿರೀಕ್ಷೆಯನ್ನು ತಲುಪುವಲ್ಲಿ ಎಡವುತ್ತಿದ್ದಾರೆ. ಸಹಜವಾಗಿ ಯೋಗರಾಜ್ ಭಟ್ ಅವರ ಈ ಸೋಲು ಕೇವಲ ಅವರಿಗಷ್ಟೇ ಅಲ್ಲ ಇಡೀ ಗಾಂಧಿನಗರದ ಚಿಂತೆಗೆ ಕಾರಣವಾಗಿದೆ. ಪ್ಯಾನ್ ಇಂಡಿಯಾ ಯುಗದಲ್ಲಿ ಭಟ್ರು ಆತ್ಮ ವಿಮರ್ಶೆಯನ್ನು ಮಾಡಿಕೊಳ್ಳಬೇಕಿದೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಹೀಗಿರುವಾಗ ಅನುರಾಗ್ ಕಶ್ಯಪ್ ಜೊತೆ ಯೋಗರಾಜ್ ಭಟ್ ಕಾಣಿಸಿಕೊಂಡಿದ್ದಾರೆ. ಭಟ್ರ ಈ ನಡೆ ಸದ್ಯ ಕುತೂಹಲಕ್ಕೆ ಕಾರಣವಾಗಿದೆ.

ಹೌದು, ಪಾಂಚ್, ಬ್ಲ್ಯಾಕ್ ಫ್ರೈಡೇ, ಗುಲಾಲ್, ದೇವ್ ಡಿ, ಗ್ಯಾಂಗ್ಸ್ ಆಫ್ ವಸೈಪುರ್, ಹೀಗೆ ಒಂದಕ್ಕಿಂತೊಂದು ಭಿನ್ನ-ವಿಭಿನ್ನ ಚಿತ್ರಗಳನ್ನು ಮಾಡಿ ಪ್ರೇಕ್ಷಕರನ್ನು ಸೆಳೆದ ಅನುರಾಗ್ ಕಶ್ಯಪ್ ಬಾಲಿವುಡ್ ನ ಕ್ರಿಯೇಟಿವ್ ಡೈರೆಕ್ಟರ್ ಗಳಲ್ಲೊಬ್ಬರು.
ಬಣ್ಣದ ಬದುಕಿನಾಚೆ, ರಾಜಕೀಯ ಪ್ರಪಂಚದಲ್ಲಿ ಕೆಲ ಕಾಲ ಸದ್ದು ಮಾಡಿ.. ಸುದ್ದಿಯಾಗಿ.. ಆ ನಂತರ ವಿವಾದಗಳನ್ನ ಮೈಮೇಲೆ ಎಳೆದುಕೊಂಡಿದ್ದ ಅನುರಾಗ್ ಕಶ್ಯಪ್ ಸದ್ಯಕ್ಕೆ ಪೊಲಿಟಿಕಲ್ ಮ್ಯಾಚ್ ನಲ್ಲಿ ರಿಟೈರ್ಡ್ ಹರ್ಟ್ ಆಗಿದ್ದಾರೆ. ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ.
ತೀರಾ ಇತ್ತೀಚೆಗಷ್ಟೇ ಮುಂಬೈ ಸಹವಾಸವೇ ಬೇಡ ಎಂದು ಬದುಕು ಕಲ್ಪಿಸಿದ ಮಾಯಾನಗರಿಗೆ ದೀರ್ಘದಂಡ ನಮಸ್ಕಾರ ಹಾಕಿ ಬೆಂಗಳೂರಿಗೆ ಬಂದಿದ್ದಾರೆ. ಸುಜಯ್ ಶಾಸ್ತ್ರೀ ನಿರ್ದೇಶನದ ಕನ್ನಡದ ಚಿತ್ರ '8'ರಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡುತ್ತಿದ್ದಾರೆ.
ಇಂಥಾ ಅನುರಾಗ್ ಕಶ್ಯಪ್ ಮತ್ತು ಯೋಗರಾಜ್ ಭಟ್ ಸದ್ಯ ಒಟ್ಟಿಗೆ ಕ್ಯಾಮರಾಗೆ ಫೋಸ್ ನೀಡಿದ್ದಾರೆ. ಈ ಫೋಟೊಗಳು ಈಗ ಹಲವು ಪ್ರಶ್ನೆಗಳಿಗೆ ಕಾರಣವಾಗಿವೆ. ಸಾಲದಕ್ಕೆ ಭಟ್ರು ''ನಮಸ್ತೆ.. ವಿಶೇಷ ವ್ಯಕ್ತಿ.. ವಿಶೇಷ ಸ್ನೇಹಜೀವಿ.. ಅದ್ಭುತ ಭೇಟಿ.. ಹೆವಿ ಕೆಲಸವೊಂದಕ್ಕೆ ನಾಂದಿ.. ಜೈ ಅನುರಾಗ್ ಕಶ್ಯಪ್.. ಜೈ ಸ್ನೇಹ.. ಜೈ ಸಿನಿಮಾ.. ಜೈ ಜನತೆ''.. ಎಂಬೆಲ್ಲಾ ಸಾಲುಗಳನ್ನು ಬರೆದುಕೊಂಡಿದ್ದಾರೆ.

ಹೀಗಾಗಿ ಅನುರಾಗ್ ಕಶ್ಯಪ್ ಮತ್ತು ಯೋಗರಾಜ್ ಭಟ್ ಚಿತ್ರವೊಂದಕ್ಕೆ ಕೈ ಜೋಡಿಸಿದ್ದಾರೆ ಎನ್ನುವ ಮಾತು ಸದ್ಯ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಅಂದ್ಹಾಗೇ ಈ ಸೋಮವಾರ { ಜುಲೈ 14 } ಯೋಗರಾಜ್ ಭಟ್ ಮತ್ತು ಜಯಂತ್ ಕಾಯ್ಕಿಣಿ ಜೋಡಿಯ ಮತ್ತೊಂದು ಹಾಡು ''ನೀ ಹೋದ ಮೇಲೆ'' ಬಿಡುಗಡೆಯಾಗಲಿದೆ. ಈ ಹಾಡು ಬಿಡುಗಡೆಯ ಸಂದರ್ಭದಲ್ಲಿ ಈ ಕುರಿತು ಪ್ರಶ್ನೆಗಳು ಯೋಗರಾಜ್ ಭಟ್ರಿಗೆ ಎದುರಾಗುವ ಸಾಧ್ಯತೆಗಳಿವೆ. ಆಗ ಅನುರಾಗ್ ಕಶ್ಯಪ್ ಭೇಟಿಯ ಹಿಂದಿನ ರಹಸ್ಯ ಹೊರ ಬಿದ್ದರು ಬೀಳಬಹುದು.
ಇನ್ನುಳಿದಂತೆ ಯೋಗರಾಜ್ ಭಟ್ ಕೊನೆಯದಾಗಿ ಮನದ ಕಡಲು ಚಿತ್ರವನ್ನು ನಿರ್ದೇಶಿಸಿದ್ದರು. ಇನ್ನು ಅನುರಾಗ್ ಕಶ್ಯಪ್ ಸದ್ಯ ತಮ್ಮ ಗಮನವನ್ನು ನಿರ್ದೇಶನದಕ್ಕಿಂತ ಅಭಿನಯದತ್ತ ವಹಿಸಿರುವಂತೆ ಇದೆ. ಹೀಗಾಗಿ ಭಟ್ರ ನಿರ್ದೇಶನದಲ್ಲಿ ಅನುರಾಗ್ ಕಶ್ಯಪ್ ಪ್ರಮುಖ ಪಾತ್ರಧಾರಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವ ಗುಮಾನಿ ಕೂಡ ಸದ್ಯ ಹಲವರನ್ನು ಕಾಡುತ್ತಿದೆ.


Click it and Unblock the Notifications











