ಕನ್ನಡ ಬಾವುಟ ಸುಟ್ಟವರ ವಿರುದ್ಧ ಕನ್ನಡ ಕಲಾವಿದರ ಆಕ್ರೋಶ!
ಕನ್ನಡ ಬಾವುಟವನ್ನು ಸುಟ್ಟು ವಿಕೃತಿ ಮೆರೆದವರ ವಿರುದ್ಧ ಕನ್ನಡ ಸಿನಿಮಾ ಕಲಾವಿದರು ರೊಚ್ಚಿಗೆದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಆಕ್ರೋಶ ಹೊರ ಹಾಕುತ್ತಿದ್ದಾರೆ. ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಈ ನಡೆಯನ್ನು ಖಂಡಿಸುತ್ತಿದ್ದಾರೆ.
ಕನ್ನಡದ ಪರ ಹೋರಾಟಗಾರರು ಎಂಇಎಸ್ ಮುಖಂಡ ದೀಪಕ್ ದಳವಿಗೆ ಡಿಸೆಂಬರ್ 13 ರಂದು ಘೇರಾವ್ ಹಾಕಿ ಮುಖಕ್ಕೆ ಮಸಿ ಬಳಿದರು. ಇದನ್ನು ಖಂಡಿಸಿ ಎಂಇಎಸ್ನವರು ಪ್ರತಿಭಟನಾ ರ್ಯಾಲಿ ಮಾಡಿ ತಿಲಕ್ವಾಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ದೂರು ದಾಖಲಿಸಿದರು. ಪೊಲೀಸರು ಅಂತೆಯೇ ದೂರು ಸ್ವೀಕರಿಸಿ, ಕನ್ನಡಪರ ಹೋರಾಟಗಾರ ಸಂಪತ್ಕುಮಾರ್ ಹಾಗೂ ಇನ್ನಿಬ್ಬರನ್ನು ಬಂಧಿಸಿದ್ದಾರೆ.
ಎಂಇಎಸ್ ಮುಖಂಡ ದೀಪಕ್ ದಳವಿ ಮುಖಕ್ಕೆ ಮಸಿ ಬಳಿದಿದ್ದನ್ನು ಖಂಡಿಸಿ ಎಂಇಎಸ್ನ ಕೆಲವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಪ್ರತಿಭಟನೆ ಮಾಡಿದ್ದು, ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕೆಲವು ಎಂಇಎಸ್ ಬೆಂಬಲಿಗರು, ''ಈಗ ಕನ್ನಡ ಧ್ವಜಕ್ಕೆ ಬೆಂಕಿ ಇಡಲಾಗಿದೆ, ಮುಂದೆ ಕನ್ನಡಿಗರ ಮನೆಗೆ ಬೆಂಕಿ ಇಡುತ್ತೇವೆ'' ಎಂದು ಬರೆದುಕೊಂಡಿದ್ದಾರೆ. ಜಗ್ಗೇಶ್, ಶಿವರಾಜ್ಕುಮಾರ್ ಬಳಿಕ ಗಣೇಶ್, ದುನಿಯಾ ವಿಜಯ್ ಸೇರಿದಂತೆ ಹಲವು ಕಲಾವಿದರು ಆಕ್ರೋಶ ಹೊರ ಹಾಕಿದ್ದಾರೆ.
ಕನ್ನಡಿಗರ ಸ್ವಾಭಿಮಾನದ ಕಿಚ್ಚು ಸುಟ್ಟಿದ್ದಾರೆ: ನಟ ಗಣೇಶ್
ಕನ್ನಡ ಧ್ವಜ ಸುಟ್ಟವರ ವಿರುದ್ಧ ಆಕ್ರೋಶ ಹೊರ ಹಾಕಿದ ನಟ ಗಣೇಶ್, "ಅವರು ಸುಟ್ಟಿದ್ದು ಧ್ವಜವಲ್ಲ, ಕನ್ನಡಿಗರ ಸ್ವಾಭಿಮಾನದ ಕಿಚ್ಚು. ಭುವನೇಶ್ವರಿಯ ಮುಕುಟ ಎಂದೂ ಮುಕ್ಕಾಗದು. ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು. ಜೈ ಕನ್ನಡಾಂಬೆ" ಎಂದು ನಟ ಗಣೇಶ್ ಬರೆದು ಕೊಂಡಿದ್ದಾರೆ.
ನಾಡು,ನುಡಿ,ಭಾಷೆ ನಮ್ಮ ಉಸಿರಾಟದ ಭಾಗ: ನಟ ದುನಿಯಾ ವಿಜಯ್!
ಕನ್ನಡ ಬಾವುಟ ಸುಟ್ಟಿರುವ ವಿಚಾರವಾಗಿ ನಟ ದುನಿಯಾ ವಿಜಯ್ ಕೂಡ ಟ್ವೀಟ್ ಮಾಡಿದ್ದಾರೆ. "ನಾಡು, ನುಡಿ, ಭಾಷೆ ನಮ್ಮ ಉಸಿರಾಟದ ಒಂದು ಭಾಗ. ಕನ್ನಡಕ್ಕೆ ಮಾಡಿದ ಅವಮಾನವನ್ನು ಕನ್ನಡಾಂಬೆಯ ಮಕ್ಕಳಾಗಿ ನಾವ್ಯಾರು ಸಹಿಸೆವು. ನಾಡಧ್ವಜ ಸುಟ್ಟ ದ್ರೋಹಿಗಳನ್ನು ಬಂಧಿಸಿ ನಮ್ಮ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕೆಂದು ಸರ್ಕಾರಕ್ಕೆ ನನ್ನ ಕಳಕಳಿಯ ಮನವಿ". ಎಂದು ಬರೆದು ಕೊಳ್ಳುವ ಮೂಲಕ ಕನ್ನಡ ಪರ ಹೋರಾಗಾರರನ್ನು ಬಿಡುಗಡೆಗೊಳಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹೇಡಿಗಳಿಗೆ ತಕ್ಕ ಶಿಕ್ಷೆ ಆಗಲಿ: ಪ್ರಜ್ವಲ್ ದೇವರಾಜ್!
ನಟ ಪ್ರಜ್ವಲ್ ದೇವರಾಜ್ ಕನ್ನಡ ಧ್ವಜವನ್ನು ಸುಟ್ಟವರನ್ನ ಹೇಡಿಗಳು ಎಂದು ಕರೆದಿದ್ದಾರೆ. " ಕನ್ನಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲಿ ಕನ್ನಡ ಹೋರಾಟಗಾರರನ್ನು ಬಿಡುಗಡೆ ಗೊಳಿಸಿ. ಜೈ ಕನ್ನಡ, ಜೈ ಕರ್ನಾಟಕ" ಎಂದು ಬರೆದುಕೊಂಡು ತಾವು ಭಾಗಿ ಆಗಿದ್ದ ರ್ಯಾಲಿಯ ಫೊಟೋವನ್ನು ಹಂಚಿಕೊಂಡಿದ್ದಾರೆ.
ಸರಿಯಾದದನ್ನು ಮಾಡಿದಾಗ ತಪ್ಪು ಆಗುವುದಿಲ್ಲ: ನಟಿ ಮೇಘನಾ ಗಾವ್ಕಂರ್
ಸಾಮಾಜಿಕ ಜಾಲತಾಣದಲಲ್ಲಿ ಕನ್ನಡದ ಬಾವುಟ ಹಂಚಿಕೊಂಡ ನಟಿ ಮೇಘನಾ ಗಾವ್ಕಂರ್ " ಸರಿಯಾದುದನ್ನು ಮಾಡಿದಾಗ ತಪ್ಪು ಆಗುವುದಿಲ್ಲ'' ಎಂದು ಬರೆದುಕೊಂಡಿದ್ದಾರೆ. ಅಂದರೆ ಕನ್ನಡ ಪರ ಹೋರಾಟಗಾರರು ಮಾಡಿದ್ದು ಸರಿ ಎಂದು ಹೇಳಿದ್ದಾರೆ.

ಬಾವುಟ ಸುಟ್ಟವರಿಗೆ ಶಿಕ್ಷೆ ಆಗಬೇಕು: ವಿನೋದ್ ಪ್ರಭಾಕರ್!
"ಜೈ ಕರ್ನಾಟಕ, ನಮ್ಮ ಕನ್ನಡದ ಬಾವುಟ ನಮ್ಮ ಘನತೆ, ಗೌರವ, ಅಸ್ಮಿತೆಯ ಸಂಕೇತ. ಕನ್ನಡ ಧ್ವಜಕ್ಕೆ ಮಾಡಿದ ಅವಮಾನ ಕನ್ನಡಿಗರಿಗೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಮಾಡುವ ಅವಮಾನ. ಕನ್ನಡ ಧ್ವಜವನ್ನು ಸುಟ್ಟು ಅವಮಾನಿಸಿದ ಕನ್ನಡ ದ್ರೋಹಿಗಳನ್ನು ತಕ್ಷಣ ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳಿ. ಅದೇ ರೀತಿ ಬಂಧಿಸಿರುವ ಕನ್ನಡ ಹೋರಾಟಗಾರರನ್ನು ಬಿಡುಗಡೆ ಗೊಳಿಸಿ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ". ಎಂದು ನಟ ವಿನೋದ್ ಪ್ರಭಾಕರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಹೀಗೆ ಕನ್ನಡ ಸಿನಿಮಾ ತಾರೆಯರು ಒಬ್ಬರಾದ ಬಳಿಕ ಒಬ್ಬರು ಸಾಲು ಸಾಲಾಗಿ ಈ ಘಟನೆಯ ಬಗ್ಗೆ ಆಕ್ರೋಶ ಹೊರ ಹಾಕುತ್ತಿದ್ದಾರೆ. ಕನ್ನಡದ ಬಾವುಟ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.


Click it and Unblock the Notifications











