ಯಶ್ ವರ್ಲ್ಡ್ ಕಪ್, ಸುದೀಪ್ CCL, ರಕ್ಷಿತ್ ರಿಟೈರ್ಡ್ ಹರ್ಟ್; ಇಂಡಸ್ಟ್ರಿ ಕಥೆ ಗೋವಿಂದ!
ಕನ್ನಡ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದೆ. ಪದೇ ಪದೆ ಇಂತಾದೊಂದು ಕೂಗು ಕೇಳಿ ಬರೋದು, ಬಳಿಕ ಒಂದೆರಡು ಸಿನಿಮಾ ಗೆದ್ದಾಗ ಎಲ್ಲಾ ಮರೆತು ಸುಮ್ಮನಾಗುವಂತಾಗಿದೆ. ಇತ್ತೀಚೆಗೆ ನೆಟ್ಟು ಬೋಲ್ಟು ವಿಚಾರ ಚಿತ್ರರಂಗಕ್ಕೆ ಸದ್ದು ಮಾಡಿದ್ದು ಗೊತ್ತೇಯಿದೆ.
ಚಿತ್ರರಂಗದಲ್ಲಿ ಏರಿಳಿತ ಸರ್ವೇ ಸಾಮಾನ್ಯ. ಆದರೆ ಕನ್ನಡ ಚಿತ್ರರಂಗ ದೊಡ್ಡದಾಗಿ ಎದ್ದು ಬರುತ್ತಲೇ ಇಲ್ಲ. ಆಗೊಮ್ಮೆ ಈಗೊಮ್ಮೆ ಒಂದೆರಡು ಸಿನಿಮಾ ಗೆದ್ದರೆ ಮತ್ತೆ ಎಲ್ಲಾ ಮರೆತು ಬಿಡುತ್ತಿದ್ದಾರೆ. ಕನ್ನಡ ಸಿನಿಮಾಗಳನ್ನು ಓಟಿಟಿ ಮಂದಿ ಕೇಳ್ತಿಲ್ಲ, ಸಣ್ಣ ಸಿನಿಮಾಗಳನ್ನು ನೋಡಲು ಜನ ಚಿತ್ರಮಂದಿರಗಳಿಗೆ ಬರ್ತಿಲ್ಲ. ಯಶ್, ಸುದೀಪ್, ಶಿವಣ್ಣ, ಉಪೇಂದ್ರ, ದರ್ಶನ್ ಬಿಟ್ಟರೆ ದೊಡ್ಡ ಸ್ಟಾರ್ಗಳು ಇಲ್ಲ. 2ನೇ ಹಂತದ ಹೀರೋಗಳ ಸಿನಿಮಾಗಳು ಕೂಡ ದೊಡ್ಡದಾಗಿ ಗೆಲ್ಲುತ್ತಿಲ್ಲ.

ಕನ್ನಡ ಚಿತ್ರರಂಗ ಗೊಂದಲದ ಗೂಡಾಗಿದೆ. ಯಜಮಾನನಿಲ್ಲದ ಮನೆಯಂತಾಗಿದೆ. 6 ಸಾವಿರಕ್ಕೂ ಹೆಚ್ಚು ಜನ ಸಿನಿಮಾ ನಂಬಿ ಬದುಕುತ್ತಿದ್ದಾರೆ. 600ಕ್ಕೂ ಅಧಿಕ ಚಿತ್ರಮಂದಿರಗಳು, ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಇದ್ದಾರೆ. ಕರ್ನಾಟಕದಲ್ಲಿ ಪರಭಾಷಾ ಸಿನಿಮಾಗಳ ಆರ್ಭಟ ಜೋರಾಗಿದೆ. ತೆಲುಗು, ತಮಿಳಿನ ದೊಡ್ಡ ಸಿನಿಮಾಗಳನ್ನು ನೋಡಿ ನೋಡಿ ಜನ ನಮ್ಮ ಸಿನಿಮಾಗಳನ್ನು ಅದರೊಟ್ಟಿಗೆ ಹೋಲಿಸಿ ನೋಡುವಂತಾಗಿದೆ.
ಸ್ಟಾರ್ ನಟರು ಹೆಚ್ಚು ಹೆಚ್ಚು ಸಿನಿಮಾ ಮಾಡದೇ ಚಿತ್ರರಂಗ ಸೊರಗುತ್ತಿದೆ ಎನ್ನುವ ಆರೋಪ ಪದೇ ಪದೆ ಕೇಳಿಬರುತ್ತದೆ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದ ಬಳಿಕ ದೊಡ್ಡ ಸಿನಿಮಾಗಳ ನಿರ್ಮಾಣ ತಡವಾಗುತ್ತಿದೆ. ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. 4 ವರ್ಷಕ್ಕೆ ಬರುವ ಕ್ರಿಕೆಟ್ ವರ್ಲ್ಡ್ ಕಪ್ ರೀತಿ 4 ವರ್ಷಕ್ಕೆ ಅವರ ಒಂದು ಸಿನಿಮಾ ಬಿಡುಗಡೆ ಆಗ್ತಿದೆ. ಇದಕ್ಕೆ ಕಾರಣಗಳು ಏನೇ ಇದ್ದರೂ ಪ್ರೇಕ್ಷಕರು ರೋಸಿ ಹೋಗುತ್ತಿದ್ದಾರೆ.
ಮೊದಲಿನಿಂದಲೂ ಸಿನಿಮಾಗಳಿಗೆ ಕ್ರಿಕೆಟ್ ಎದುರಾಳಿ ಎನ್ನುವಂತಹ ಮಾತಿದೆ. ವರ್ಲ್ಡ್ ಕಪ್, ಐಪಿಎಲ್ ರೀತಿಯ ಕ್ರಿಕೆಟ್ ಟೂರ್ನಿಗಳ ಸಮಯದಲ್ಲಿ ಜನ ಚಿತ್ರಮಂದಿರಕ್ಕೆ ಬರಲ್ಲ ಎನ್ನುವ ಅಪವಾದವಿದೆ. ಆದರೆ ಇದೀಗ ಸಿನಿಮಾ ತಾರೆಯರೇ ಕ್ರಿಕೆಟ್ ಆಡುವುದರಲ್ಲಿ ಮಗ್ನರಾಗುತ್ತಿದ್ದಾರೆ. ಸಿಸಿಎಲ್ ಸಾಲದು ಎಂದು ಸುದೀಪ್ ಕೆಸಿಸಿ ಕ್ರಿಕೆಟ್ ಟೂರ್ನಿ ಶುರು ಮಾಡಿದ್ದಾರೆ. ಇತ್ತೀಚೆಗೆ ಸುದೀಪ್ ಕ್ರಿಕೆಟ್ ಮೈದಾನದಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಹಾಗಾಗಿ ಅವರು ಸಿನಿಮಾ ಮಾಡುವ ವೇಗ ಕಮ್ಮಿ ಆಗ್ತಿದೆ.

ಸುದೀಪ್ ತಾವು ಆಡುವುದು ಮಾತ್ರವಲ್ಲ, ಕೆಲ ಕಲಾವಿದರನ್ನು ತಮ್ಮೊಟ್ಟಿಗೆ ಸೇರಿಸಿಕೊಳ್ಳುತ್ತಿದ್ದಾರೆ. ಕ್ರಿಕೆಟ್ ಅನ್ನು ಚಿತ್ರರಂಗದಲ್ಲಿ ಕಮರ್ಷಿಯಲ್ ಮಾಡುತ್ತಿದ್ದಾರೆ, ಇದು ಬೇಕಿರಲಿಲ್ಲ. ಜನ ನಿಮ್ಮ ಕ್ರಿಕೆಟ್ ನೋಡಬೇಕೋ, ಅದೇ ಸಮಯದಲ್ಲಿ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಬೇಕಾ? ಎಂದು ಇತ್ತೀಚೆಗೆ ನಿರ್ದೇಶಕ ಗುರುದೇಶ್ಪಾಂಡೆ ಸಂದರ್ಶನವೊಂದರಲ್ಲಿ ಹೇಳಿದ್ದರು.
ಯಶ್ ಹಾಗೂ ಸುದೀಪ್ ಕಥೆ ಇದಾದರೆ ರಕ್ಷಿತ್ ಶೆಟ್ಟಿ ಅವರದ್ದು ಮತ್ತೊಂದು ಕಥೆ. 'ಸಪ್ತಸಾಗರದಾಚೆ ಎಲ್ಲೋ' ಸರಣಿ ಸಿನಿಮಾಗಳ ಬಳಿಕ ಸಿಂಪಲ್ ಸ್ಟಾರ್ ಸೈಲೆಂಟ್ ಆಗಿಬಿಟ್ಟಿದ್ದಾರೆ. ಒಂದರ್ಥದಲ್ಲಿ ರಿಟೈರ್ಡ್ ಹರ್ಟ್ ಆಗಿ ವಿಶ್ರಾಂತಿ ಪಡೆಯುತ್ತಿದ್ದು ಯಾವಾಗ ಸಿನಿಮಾ ಮಾಡ್ತಾರೆ ಎನ್ನುವುದು ಗೊತ್ತಿಲ್ಲ. 'ರಿಚರ್ಡ್ ಆಂಟನಿ' ಸಿನಿಮಾ ಘೋಷಣೆ ಆಗಿ 3 ವರ್ಷ ಕಳೀತು. ಆ ಬಳಿಕ ಅದರ ಅಪ್ಡೇಟ್ ಇಲ್ಲ. ಯಾವಾಗ ಸಿಗುತ್ತದೆ ಎನ್ನುವುದು ಗೊತ್ತಿಲ್ಲ. 'ಉಳಿದವರು ಕಂಡಂತೆ' ಸಿನಿಮಾ 10 ವರ್ಷ ಪೂರೈಸಿದ ಸಮಯದಲ್ಲಿ ಅಪ್ಡೇಟ್ ಸಿಗುತ್ತದೆ ಎಂದು ಕಾದಿದ್ದವರಿಗೆ ನಿರಾಸೆಯಾಗಿತ್ತು.
ಸದ್ಯ 'ಉಳಿದವರು ಕಂಡಂತೆ' ಸಿನಿಮಾ ಇವತ್ತು(ಮಾರ್ಚ್ 28) 11 ವರ್ಷ ಪೂರೈಸಿದೆ. ಈ ಬಗ್ಗೆ ರಕ್ಷಿತ್ ಶೆಟ್ಟಿ ಪೋಸ್ಟ್ ಮಾಡಿದ್ದಾರೆ. ಆದರೆ 'ರಿಚರ್ಡ್ ಆಂಟನಿ' ಸಿನಿಮಾ ಬಗ್ಗೆ ಮಾತ್ರ ಯಾವುದೇ ಸುಳಿವು ಕೊಟ್ಟಿಲ್ಲ. ಇದು ಸಹಜವಾಗಿಯೇ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಕಾಮೆಂಟ್ ಬಾಕ್ಸ್ನಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ರಿಷಬ್ ಶೆಟ್ಟಿ ಕೂಡ 'ಕಾಂತಾರ' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ಈಗ ಅವರನ್ನು ಬೇಗ ಸಿನಿಮಾ ಮಾಡಿ ಎಂದು ಕೇಳುವಂತೆ ಇಲ್ಲ ಎನಿಸುತ್ತದೆ. ಈಗಾಗಲೇ ಪರಭಾಷಾ ಸಿನಿಮಾಗಳತ್ತ ಅವರು ಮುಖ ಮಾಡಿದ್ದಾರೆ.
ಒಟ್ಟಾರೆ ಪ್ಯಾನ್ ಇಂಡಿಯಾ ಬಿಟ್ಟು ಸಣ್ಣ ಸಿನಿಮಾ ಅಥವಾ ಕನ್ನಡದಲ್ಲಿ ಮಾತ್ರ ಸಿನಿಮಾ ಮಾಡಿದರೆ ಪ್ರೇಕ್ಷಕರು ನೋಡಲ್ಲ, ಮಾಡಿದರೆ ದೊಡ್ಡ ಸಿನಿಮಾನೇ ಮಾಡಬೇಕು ಎಂದು ಸ್ಟಾರ್ ನಟರು ನಿರ್ಧರಿಸಿದಂತಿದೆ. ದೊಡ್ಡ ಸಿನಿಮಾ ಮಾಡೋಕೆ ಹೆಚ್ಚು ಸಮಯ ಬೇಕು ಎನ್ನುವ ಲೆಕ್ಕಾಚಾರಕ್ಕೆ ಬಂದುಬಿಟ್ಟಿದ್ದಾರೆ. ಆದರೆ ಕಳೆದ ವರ್ಷ ಹಿಟ್ ಲಿಸ್ಟ್ ಸೇರಿದ ಸಿನಿಮಾಗಳೇ ಕನ್ನಡ ಸಿನಿಮಗಳೇ. ಜನ ಸಾಗರದಂತೆ ಬಂದು ಸಿನಿಮಾ ನೋಡಿ ಗೆಲ್ಲಿಸಿದರು.
'ಭೀಮ', 'ಕೃಷ್ಣಂ ಪ್ರಣಯ ಸಖಿ', 'ಬಘೀರ, 'ಭೈರತಿ ರಣಗಲ್', 'ಯುಐ' ಹಾಗೂ 'ಮ್ಯಾಕ್ಸ್' ಎಲ್ಲವೂ ಕನ್ನಡ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಸಿನಿಮಾಗಳು. ಕನ್ನಡ ಪ್ರೇಕ್ಷಕರೇ ನೋಡಿ ಗೆಲ್ಲಿಸಿದರು. ಪರಭಾಷೆಗೆ ಡಬ್ ಆಗಿ ಬಿಡುಗಡೆ ಆದರೂ ದೊಡ್ಡದಾಗಿ ಸದ್ದು ಮಾಡಲಿಲ್ಲ. ಸ್ಟಾರ್ ನಟರು ಒಳ್ಳೆ ಸಿನಿಮಾ ಮಾಡಿದರೆ ಜನ ಬರ್ತಾರೆ. ದೊಡ್ಡ ಸಿನಿಮಾಗಳ ನಡುವೆ ಸಣ್ಣ ಸಿನಿಮಾಗಳು ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ಳುತ್ತವೆ. ನಿಯಮಿತವಾಗಿ ಒಳ್ಳೆ ಸಿನಿಮಾಗಳನ್ನು ಕೊಡದೇ ಕೊನೆಗೊಂದು ದಿನ ಎಂತಹ ಒಳ್ಳೆ ಸಿನಿಮಾ ಬಂದರೂ ಜನ ನೋಡೋಕೆ ಹಿಂದೇಟು ಹಾಕುವಂತಾಗಿಬಿಡುತ್ತದೆ.
ಉಪೇಂದ್ರ, ದರ್ಶನ್ ಹಾಗೂ ಶಿವಣ್ಣ ಮಾತ್ರ ಇನ್ನು ಪ್ಯಾನ್ ಇಂಡಿಯಾ ನಶೆ ಏರಿಸಿಕೊಂಡಿಲ್ಲ. ಕನ್ನಡದಲ್ಲಿ ಮಾತ್ರ ಸಿನಿಮಾ ಮಾಡುತ್ತೇವೆ ಎನ್ನುತ್ತಿದ್ದಾರೆ. ಶಿವಣ್ಣದ ಕೈಯಲ್ಲಿ ಸದಾ ನಾಲ್ಕೈದು ಸಿನಿಮಾಗಳಿರುತ್ತವೆ. ಇತ್ತೀಚೆಗೆ ಕ್ಯಾನ್ಸರ್ ಚಿಕಿತ್ಸೆ ಪಡೆದು ಬಂದು 2 ತಿಂಗಳಲ್ಲಿ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ. ಅಷ್ಟರಮಟ್ಟಿಗೆ ಕೆಲಸದ ಮೇಲಿನ ಬದ್ಧತೆ ಪ್ರದರ್ಶಿಸಿದ್ದಾರೆ. ಇದು ಎಲ್ಲಾ ನಟರಿಗೆ ಆದರ್ಶವಾಗಬೇಕಿದೆ.
ಕನ್ನಡದಲ್ಲಿ ಎರಡನೇ ಹಂತದ ನಾಯಕರನ್ನು ಹೆಚ್ಚು ಬೆಳೆಸುತ್ತಿಲ್ಲ. ಗಣೇಶ್, ವಿಜಯ್, ಶ್ರೀಮುರಳಿ, ಧನಂಜಯ್, ಧ್ರುವ ಸರ್ಜಾ ರೀತಿಯ ನಟರ ಸಿನಿಮಾಗಳನ್ನು ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಗೆಲ್ಲಿಸಬೇಕಿದೆ. "ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸದೇ ಇರುವ ಮೂರ್ನಾಲ್ಕು ಜನರಿಗೆ ಹೆಚ್ಚು ಹೆಚ್ಚು ಸಿನಿಮಾ ಮಾಡಿ ಅನ್ನೋದು ಮಾಡಿದ ಮೇಲೆ ಕ್ವಾಲಿಟಿ ಇಲ್ಲ ಅಂತ ಹೇಳೋದು ತಪ್ಪಾಗುತ್ತದೆ" ಎಂದು ನಟ ಯಶ್ ಒಮ್ಮೆ ಹೇಳಿದ್ದರು. ಹಾಗಾಗಿ ಹೊಸ ಹೊಸ ಕಲಾವಿದರು, ತಂತ್ರಜ್ಞರ ಸಿನಿಮಾಗಳನ್ನು ಜನ ನೋಡಿ ಗೆಲ್ಲಿಸಬೇಕಿದೆ.
ಮುಖ್ಯವಾಗಿ ಕನ್ನಡದಲ್ಲಿ ಒಳ್ಳೆ ಕಥೆಗಳು ಸಿಗುತ್ತಿಲ್ಲ ಎನ್ನುವ ಆರೋಪ ಕೇಳಿಬರ್ತಿದೆ. ನಮ್ಮ ಕಲಾವಿದರು ನಿಧಾನವಾಗಿ ಪರಭಾಷಾ ಕಡೆ ನೋಡುವಂತಾಗಿದೆ. 'ಟಾಕ್ಸಿಕ್' ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಕಥೆ ಬರೆದು ಆಕ್ಷನ್ ಕಟ್ ಹೇಳ್ತಿದ್ದಾರೆ. 'ಮ್ಯಾಕ್ಸ್' ಚಿತ್ರ ಕಟ್ಟಿಕೊಟ್ಟಿದ್ದು ತಮಿಳು ನಿರ್ದೇಶಕ. ರಿಷಬ್ ಶೆಟ್ಟಿ ಮುಂದೆ ಒಂದು ತೆಲುಗು ಹಾಗೂ ಒಂದು ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಕಥೆಗಾರರನ್ನು ಕನ್ನಡ ಚಿತ್ರರಂಗದಲ್ಲಿ ಯಾರು ಬೆಳೆಸಲಿಲ್ಲ. ಬರಹಗಾರರಿಗೆ ಸರಿಯಾದ ಸಂಭಾವನೆ ಸಿಗಲ್ಲ. ನಟ, ನಟಿಯರಿಗೆ ಕೋಟಿ ಕೋಟಿ ಹಣ ಕೊಡ್ತಾರೆ, ಒಂದು ಹಾಡಿಗೆ ಕೋಟಿ ಕೋಟಿ ಸುರಿದು ಚಿತ್ರೀಕರಣ ಮಾಡುತ್ತಾರೆ. ಆದರೆ ಬರಹಗಾರರಿಗೆ ಹಣ ಕೊಡಲು ಹಿಂದೇಟು ಹಾಕುತ್ತಾರೆ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಾರೆ. ಇದೆಲ್ಲಾ ಹೀಗೆ ಮುಂದುವರೆದರೆ ಕನ್ನಡ ಚಿತ್ರರಂಗಕ್ಕೆ ಉಳಿಗಾಲವಿಲ್ಲ ಎಂದು ಮಾತನಾಡುವವರು ಇದ್ದಾರೆ.


Click it and Unblock the Notifications











