ಆತ ಕಾನೂನಿನ ಮೇಲೆ ಪ್ರಭಾವ ಬೀರಬಹುದು; ಮಹಿಳಾ ರೆಸ್ಲರ್ ಎಳೆದಾಟಕ್ಕೆ ಸಿಂಪಲ್ ಸುನಿ ಅಸಮಾಧಾನ!

ಮೇ 28ರ ಭಾನುವಾರದಂದು ದೆಹಲಿಯಲ್ಲಿ ನೂತನ ಸಂಸತ್ ಭವನದ ಉದ್ಘಾಟನಾ ಕಾರ್ಯಕ್ರಮ ಜರುಗಿತು. ದೇಶದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂದಾಜು 862 ಕೋಟಿ ವೆಚ್ಚದಲ್ಲಿ ತಯಾರಾದ ಈ ಭವ್ಯ ಕಟ್ಟಡವನ್ನು ಉದ್ಘಾಟಿಸಿದರು.
ಈ ಮಹಾ ಕಾರ್ಯಕ್ರಮಕ್ಕೆ ದೇಶದ ವಿವಿಧ ಕ್ಷೇತ್ರಗಳ ನಾಯಕರು ಹಾಗೂ ಗಣ್ಯರು ಆಗಮಿಸಿದ್ದರು. ಹೀಗೆ ಒಂದೆಡೆ ನೂತನ ಸಂಸತ್ ಉದ್ಘಾಟನೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿದರೆ ಮತ್ತೊಂದೆಡೆ ಇದೇ ಕಾರ್ಯಕ್ರಮದ ವೇಳೆ ಸಂಸತ್ ಮುಂದೆ ಮಹಿಳಾ ಪಂಚಾಯತ್ ನಡೆಸಲು ತೀರ್ಮಾನಿಸಿದ್ದ ದೇಶದ ಕುಸ್ತಿಪಟುಗಳನ್ನು ದೆಹಲಿಯ ಜಂತರ್ ಮಂತರ್ನಲ್ಲಿ ಪೊಲೀಸರು ತಡೆಯಲು ಯತ್ನಿಸಿದಾಗ ಎಳೆದಾಟ ಉಂಟಾದ ಹೀನಾಯ ಘಟನೆ ಸಂಭವಿಸಿದೆ.
ಹೌದು, ರೆಸ್ಲರ್ ಫೆಡರೇಶನ್ ಆಫ್ ಇಂಡಿಯಾ ( WFI ) ಅಧ್ಯಕ್ಷರಾದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ರೆಸ್ಲರ್ಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ . ಓರ್ವ ಅಪ್ರಾಪ್ತೆಯೂ ಸೇರಿದಂತೆ ಒಟ್ಟು ಏಳು ಮಹಿಳೆಯರು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಆರೋಪ ಮಾಡಿ ದೂರು ದಾಖಲಿಸಿದ್ದಾರೆ.
ಇದೇ ರೀತಿ ಈ ಹಿಂದೆ ದೂರು ನೀಡಿದ್ದರೂ ಸಹ ಯಾವುದೇ ರೀತಿಯ ತನಿಖೆ ಆರಂಭವಾಗದ ಕಾರಣ ಸಿಟ್ಟುಗೊಂಡ ರೆಸ್ಲರ್ಗಳು ಈ ಬಾರಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಬಂಧನವಾಗಲೇಬೇಕು, ಅಲ್ಲಿಯವರೆಗೆ ನಾವು ಧರಣಿ ಕೂರುತ್ತೇವೆ ಎಂದು ಹೇಳಿ ದೆಹಲಿಯ ಜಂತರ್ ಮಂತರ್ನಲ್ಲಿ ಕಳೆದ ಎರಡು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ.
ಹೀಗೆ ಸತತವಾಗಿ ಧರಣಿ ನಡೆಸುತ್ತಿದ್ದ ಕ್ರೀಡಾಪಟುಗಳು ಸಂಸತ್ ಉದ್ಘಾಟನೆಯ ದಿನ ಸಂಸತ್ ಮುಂದೆ ಮಹಿಳಾ ಪಂಚಾಯತ್ ಎಂಬ ಮೌನ ಧರಣಿ ನಡೆಸಲು ಘೋಷಿಸಿ, ಆಗಲಾದರೂ ತಮ್ಮ ಕೂಗು ಮೋದಿ ಸೇರಿದಂತೆ ಸಂಬಂಧಪಟ್ಟ ನಾಯಕರುಗಳಿಗೆ ಕೇಳಿಸಬಹುದೆಂಬ ಪ್ರಯತ್ನಪಟ್ಟಿದ್ದರು.
ಆದರೆ ರೆಸ್ಲರ್ಗಳ ಈ ಯೋಜನೆಗೆ ದೆಹಲಿ ಪೊಲೀಸರು ಬ್ರೇಕ್ ಹಾಕಿದ್ದರು. ಜಂತರ್ ಮಂತರ್ ಮೈದಾನದಲ್ಲಿಯೇ ರೆಸ್ಲರ್ಗಳನ್ನು ತಡೆದಿದ್ದರು. ಈ ವೇಳೆ ತಳ್ಳಾಟ ಉಂಟಾಗಿ ಮಹಿಳಾ ರೆಸ್ಲರ್ಗಳನ್ನು ಪೊಲೀಸರು ಎಳೆದಾಡಿದ ದೃಶ್ಯಗಳು ಕಂಡುಬಂದವು. ದೇಶಕ್ಕಾಗಿ ಹಗಲಿರುಳು ಶ್ರಮಿಸಿ ಚಿನ್ನ, ಬೆಳ್ಳಿ ಗೆದ್ದ ಕುಸ್ತಿಪಟುಗಳನ್ನು ಈ ಸ್ಥಿತಿಯಲ್ಲಿ ಕಂಡ ಅನೇಕರು ಬೇಸರ ವ್ಯಕ್ತಪಡಿಸಿದ್ದರು ಹಾಗೂ ಇವರ ಬೇಡಿಕೆಯನ್ನು ಆಲಿಸದ ರಾಜಕಾರಣಿಗಳ ವಿರುದ್ಧ ಕಿಡಿಕಾರಿದ್ದರು.
ಅದೇ ರೀತಿ ಕನ್ನಡ ಚಲನಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಸಿಂಪಲ್ ಸುನಿ ಸಹ ಈ ಸಂಬಂಧ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ ರೆಸ್ಲರ್ಗಳ ಬೆಂಬಲಕ್ಕೆ ನಿಂತಿದ್ದಾರೆ ಹಾಗೂ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕಿಡಿಕಾರಿದ್ದಾರೆ.
" "NOT GUILTY UNTILL PROVEN"
ದೇಶಕ್ಕೆ "ಕೀರ್ತಿ" "ಪದಕ" ತಂದ ಕ್ರೀಡಾ"ಪಟು"ಗಳನ್ನು ಈ ರೀತಿ ಎಳೆದೊಯ್ಯೋವುದನ್ನು ನೋಡಲು ಬೇಸರ ತರುತ್ತದೆ....
ವಿಷಯ ಇಷ್ಟು ಗಂಭೀರವಾದಮೇಲೆ 'ದೊಡ್ಡವರು' ಹೋಗಿ ಮಾತನಾಡುವುದು ಉತ್ತಮ...
ಕಂಪ್ಲೇಂಟ್ ಆಗಿದೆ ಕೋರ್ಟ್ ಅಲ್ಲಿದೆ.. ನ್ಯಾಯಲಯದ ನಂಬಿಕೆ ಇಡಲೇಬೇಕು...
ಆದರೆ
#BrijBhushanSharanSingh
ಆತ ಮಾಡಿದ್ದಾನೋ ಇಲ್ಲವೋ..ಆತನ ಹಿಂದಿನ ಚಟುವಟಿಕೆ ಗಳನ್ನು ನೋಡಿದರೆ
( ಮರ್ಡರ್ ಮಾಡಿರುವುದನ್ನು ಹೇಳಿದ್ದು... Dawood ಗೆ help ಮಾಡಿರುವುದಕ್ಕೆ ಸಜೆ )
ಅಷ್ಟು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು ಆತ ಈ ರೀತಿ (president of wrestling federation of india) post ನಲ್ಲಿ ಇದ್ದಾರೆ ಎಂದರೆ... ಆತ ಕಾನೂನು ಮೇಲೆ ಪ್ರಭಾವ ಬೀರಿದರು ಆಶ್ಚರ್ಯವಿಲ್ಲ.." ಎಂದು ಬರೆದುಕೊಂಡಿರುವ ಸಿಂಪಲ್ ಸುನಿ ವಿಷಯ ಗಂಭೀರವಾಗಿದ್ದು ದೊಡ್ಡವರು ಮಾತನಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications











