ನಿರ್ದೇಶಕ ಡಿ. ರಾಜೇಂದ್ರ ಬಾಬು ವಿಧಿವಶ
ಖ್ಯಾತ ನಿರ್ದೇಶಕ ಡಿ. ರಾಜೇಂದ್ರ ಬಾಬು ಅವರು ಭಾನುವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ಅವರು ಕೆಲಕಾಲದಿಂದ ಅಸ್ವಸ್ಥರಾಗಿದ್ದರು. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 62 ವರ್ಷ ವಯಸ್ಸಾಗಿತ್ತು. ಪತ್ನಿ ಬಹುಭಾಷಾ ನಟಿ ಸುಮಿತ್ರಾ ಹಾಗೂ ಇಬ್ಬರು ಮಕ್ಕಳನ್ನು ಮೃತರು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಚಾಮರಾಜಪೇಟೆಯ ಚಿತಾಗಾರದಲ್ಲಿ ನೆರವೇರಿಸಲಾಗಿದೆ.
ರಾಮಾಚಾರಿ, ಹಾಲುಂಡ ತವರು, ಸ್ವಾಭಿಮಾನ, ದಿಗ್ಗಜರು, ಯುಗಪುರುಷ, ಒಲವಿನ ಉಡುಗೊರೆ, ನಾನು ನನ್ನ ಹೆಂಡತಿ, ಜೀವನದಿ, ಯಾರೇ ನೀನು ಚೆಲುವೆ, ಪ್ರೀತ್ಸೆ, ಸ್ವಾತಿಮುತ್ತು, ಬಿಂದಾಸ್ ಸೇರಿದಂತೆ 50ಕ್ಕೂ ಚಿತ್ರಗಳನ್ನು ರಾಜೇಂದ್ರ ಬಾಬು ನಿರ್ದೇಶಿಸಿದ್ದರು. ಸದ್ಯಕ್ಕೆ ಶಿವರಾಜ್ ಕುಮಾರ್ ಹಾಗೂ ರಮ್ಯಾ ಅಭಿನಯದ ಆರ್ಯನ್ ಚಿತ್ರವನ್ನು ನಿರ್ದೇಶಿಸುತ್ತಿದ್ದರು. ಕೆಲವು ತೆಲಗು, ಮಲೆಯಾಳಂ ಹಾಗೂ ಹಿಂದಿ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

ಮಾ.30, 1951ರಲ್ಲಿ ಜನಿಸಿದ ರಾಜೇಂದ್ರ ಬಾಬು ಅವರು ಚಿತ್ರಕಥೆಗಾರ ನಿರ್ದೇಶಕರಾಗಿ ಖ್ಯಾತಿ ಗಳಿಸುವುದಕ್ಕೂ ಮುನ್ನ 80ರ ದಶಕದಲ್ಲಿ ನಟನಾಗಿ ಕಾಣಿಸಿಕೊಂಡಿದ್ದರು. ನಂತರ ರಾಜೇಂದ್ರ ಸಿಂಗ್ ಬಾಬು, ಕೆಎಸ್ ಆರ್ ದಾಸ್ ಹಾಗೂ ವಿ ಸೋಮಶೇಖರ್ ಅವರಿಗೆ ಸಹಾಯಕ ನಿರ್ದೇಶಕರಾಗಿ ದುಡಿದರು.
ಬಹುತೇಕ ರಿಮೇಕ್ ಚಿತ್ರಗಳನ್ನು ನೀಡಿ ಯಶಸ್ಸು ಪಡೆದಿದ್ದ ರಾಜೇಂದ್ರ ಬಾಬು ಅವರು ಮೊದಲಿಗೆ ಟೈಗರ್ ಪ್ರಭಾಕರ್ ಹಾಗೂ ಜಯಮಾಲ ಅಭಿನಯದ 'ಜಿದ್ದು' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕ ಎನಿಸಿದರು. ಕುಟುಂಬದವರೆಲ್ಲರನ್ನು ಚಿತ್ರಮಂದಿರದತ್ತ ಆಕರ್ಷಿಸಬಲ್ಲ ಕೌಟುಂಬಿಕ ಚಿತ್ರಗಳನ್ನು ನೀಡಿದ ಪ್ರತಿಭಾವಂತರೆನಿಸಿದ್ದರು.
ಪತ್ನಿ ಸುಮಿತ್ರಾ ಅಲ್ಲದೆ ಮಕ್ಕಳಾದ ಉಮಾಶಂಕರಿ ಹಾಗೂ ನಕ್ಷತ್ರ ಅವರು ಕೂಡಾ ತಮಿಳು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. 2011ರಲ್ಲಿ ಕರ್ನಾಟಕದ ರಾಜ್ಯದಿಂದ ಜೀವಮಾನ ಸಾಧನೆ ಪ್ರಶಸ್ತಿ, ಹಬ್ಬ ಚಿತ್ರಕ್ಕಾಗಿ ಶ್ರೇಷ್ಠ ಚಿತ್ರಕಥೆ ಪ್ರಶಸ್ತಿ, 2012ರಲ್ಲಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಪಡೆದಿದ್ದರು. ರಾಜೇಂದ್ರ ಬಾಬು ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


Click it and Unblock the Notifications











