Don't Miss!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Lifestyle ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಧರೆಗುರುಳಿದ ಚಿತ್ರರಂಗದ ಮಹಾವೃಕ್ಷ ಸಿದ್ದಲಿಂಗಯ್ಯ
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ (78) ಇಂದು ಗುರುವಾರ (ಮಾ.12) ವಿಧಿವಶರಾಗಿದ್ದಾರೆ. ಎಚ್1ಎನ್1ನಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿರನಿದ್ರೆಗೆ ಜಾರಿದರು.
ಸಿದ್ದಲಿಂಗಯ್ಯ ಅವರ ನಿಧನದಿಂದ ಕನ್ನಡ ಚಿತ್ರರಂಗದ ಮಹಾವೃಕ್ಷವೊಂದು ಧರೆಗುರುಳಿದಂತಾಗಿದೆ. ಬೆಂಗಳೂರಿನ ರಾಜಾಜಿನಗರದಲ್ಲಿರುವ ಸುಗುಣ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಜ್ವರದಿಂದ ಆಸ್ಪತ್ರೆಗೆ ದಾಖಲಾಗಿರುವ ಸಿದ್ದಲಿಂಗಯ್ಯ ಅವರಿಗೆ ಎಚ್1 ಎನ್1 ಸೋಂಕು ತಗುಲಿದೆ ಎಂಬ ಸುದ್ದಿಯನ್ನು ಸುಗುಣ ಆಸ್ಪತ್ರೆಯ ವೈದ್ಯರು ಇಷ್ಟು ದಿನ ಧೃಡಪಡಿಸಿರಲಿಲ್ಲ. ['ಬಂಗಾರದ ಮನುಷ್ಯ' ನಿರ್ದೇಶಕ ಸಿದ್ದಲಿಂಗಯ್ಯ ಅಸ್ವಸ್ಥ]
ಸಿದ್ದಲಿಂಗಯ್ಯ ಅವರ ಕುಟುಂಬಿಕರು ಜ್ವರ ಅಂತ ಮಾತ್ರ ಹೇಳಿದ್ದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ 20 ದಿನಗಳಿಂದ ಅವರು ಸುಗುಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅವರು ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರೂ ಕನ್ನಡ ಚಿತ್ರರಂಗದ ಯಾವ ನಟ, ನಟಿ, ನಿರ್ದೇಶಕರು ಒಮ್ಮೆಯೂ ಅತ್ತ ತಲೆ ಹಾಕದಿದ್ದದ್ದು ದುರಂತ. ಅವರ ಆರೋಗ್ಯವನ್ನು ವಿಚಾರಿಸುವ ಕನಿಷ್ಠ ಸೌಜನ್ಯವನ್ನೂ ತೋರಲಿಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಭೇಟಿ ನೀಡಿದ್ದದ್ದು ಒಂಚೂರು ಸಮಾಧಾನದ ಸಂಗತಿ.
ಕನ್ನಡ ಚಿತ್ರರಂಗದಲ್ಲಿ ಅತ್ಯದ್ಭುತ ಚಿತ್ರಗಳನ್ನು ಕೊಟ್ಟತಂಹವರು ಸಿದ್ದಲಿಂಗಯ್ಯನವರು. ನವಜ್ಯೋತಿ ಸ್ಟುಡಿಯೋದಲ್ಲಿ ಲೈಟ್ ಬಾಯ್ ಆಗಿ ಸೇರಿದ ಸಿದ್ಧಲಿಂಗಯ್ಯನವರು ಬೆಳೆದು ಬಂದ ಹಾದಿ ಮಹತ್ವಪೂರ್ಣವಾದುದು. ಮುಂದೆ ಶಂಕರ ಸಿಂಗ್ ಅವರ ಬಳಿ ಸಹಾಯಕ ನಿರ್ದೇಶಕರಾದರು.
ಕನ್ನಡವಲ್ಲದೆ ತಮಿಳು, ತೆಲುಗು ಭಾಷೆಗಳನ್ನೂ ಕಲಿತರು. ವಿಠ್ಠಲಾಚಾರ್ಯ ಅವರ ಸಿನಿಮಾದಲ್ಲಿ ನಟರಾಗ ಹೋಗಿದ್ದರು. ಹಾಸ್ಯನಟ ಬಾಲಕೃಷ್ಣ ಅವರ ಪ್ರೋತ್ಸಾಹದಿಂದ ನಿರ್ದೇಶಕರಾಗಿ ಕೆಲಸ ಮಾಡಿದರು. ದ್ವಾರಕೀಶ್ ನಿರ್ಮಾಪಕರಾದಾಗ ಅವರ ಮೊದಲ ಚಿತ್ರ 'ಮೇಯರ್ ಮುತ್ತಣ್ಣ' ನಿರ್ದೇಶಿಸಿದರು.
ಸುಮಾರು 35 ಸಿನಿಮಾಗಳನ್ನು ನಿರ್ದೇಶಿಸಿರುವ ಸಿದ್ದಲಿಂಗಯ್ಯನವರು ಕನ್ನಡ, ತಮಿಳು, ತೆಲುಗು ಚಿತ್ರರಂಗದ ದಿಗ್ಗಜರೊಂದಿಗೆ ಕೆಲಸ ಮಾಡಿದ್ದಾರೆ. ಬಂಗಾರದ ಮನುಷ್ಯ, ನಮ್ಮ ಸಂಸಾರ, ನ್ಯಾಯವೇ ದೇವರು, ದೂರದ ಬೆಟ್ಟ, ಪ್ರೇಮಪರ್ವ, ನಾರದ ವಿಜಯ, ಕೂಡಿ ಬಾಳಿದರೆ ಸ್ವರ್ಗ ಸುಖ, ಬಿಳಿಗಿರಿಯ ಬನದಲ್ಲಿ ಮುಂತಾದವು.
ವರನಟ ರಾಜ್ ಕುಮಾರ್, ಎನ್.ಟಿ. ರಾಮರಾವ್, ವಿಷ್ಣುವರ್ಧನ್ ಅಂತಹವರಿಗೆ ಉತ್ತಮ ಪಾತ್ರಗಳ ಚಿತ್ರಗಳನ್ನು ನೀಡಿ ಅವರ ತಾರಾಮೌಲ್ಯವನ್ನು ಬೆಳಗಿಸಿದವರು ಸಿದ್ದಲಿಂಗಯ್ಯನವರು. ಲೋಕೇಶ್, ಚರಣ್ ರಾಜ್, ಮುರಳಿ, ಶ್ರೀನಿವಾಸಮೂರ್ತಿ ಅಂತಹ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪ್ರಧಾನ ವಾಗಿ ಪರಿಚಯಿಸಿದ್ದು ಸಹಾ ಸಿದ್ದಲಿಂಗಯ್ಯನವರು ಎಂಬುದು ವಿಶೇಷ.
ಮುಖ್ಯಮಂತ್ರಿ ಸಂತಾಪ: ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು ನಂತಹ ಅದ್ಭುತ ಚಿತ್ರಗಳನ್ನು ನಿರ್ದೇಶಿಸಿ ಕನ್ನಡ ಚಿತ್ರ ರಸಿಕರಿಗೆ ಅರ್ಪಿಸಿ ಜನಪ್ರಿಯತೆ ಗಳಿಸಿದ್ದ ಸಿದ್ದಲಿಂಗಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಬೆಳಕಿನ ಹುಡುಗನಾಗಿ (ಲೈಟ್ ಬಾಯ್) ಪ್ರವೇಶಿಸಿ, ನಂತರ ಇಡೀ ಕನ್ನಡ ಚಿತ್ರರಂಗಕ್ಕೇ ಬೆಳಕಾದ ಸಿದ್ದಲಿಂಗಯ್ಯ ಅವರ ಯಶೋಗಾಥೆ ದಾಖಲಾರ್ಹ. ಸಿದ್ದಲಿಂಗಯ್ಯ ಅವರು ನಿರ್ದೇಶಿಸಿದ್ದ ಚಿತ್ರಗಳೆಲ್ಲವೂ ಭಾವನಾತ್ಮಕ ಅಂಶಗಳಿಂದ ಕೂಡಿ, ಎಲ್ಲರ ಹೃನ್ಮನಗಳನ್ನು ಸೆಳೆಯುತ್ತಿದ್ದವು.
ಪ್ರತಿಭಾವಂತ ನಿರ್ದೇಶಕ ಸಿದ್ದಲಿಂಗಯ್ಯ ಅವರ ನಿಧನದಿಂದ ಕನ್ನಡ ಚಿತ್ರರಂಗದ ಪ್ರಭೆ ಕಳೆಗುಂದಿದಂತಾಗಿದೆ ಎಂದು ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ಬಣ್ಣಿಸಿದ್ದಾರೆ. (ಫಿಲ್ಮಿಬೀಟ್ ಕನ್ನಡ)