ನಿಖಿಲ್ ಕುಮಾರ್ ಮುಂದಿನ ಚಿತ್ರಕ್ಕೆ ಕನ್ನಡದವರೇ ಡೈರೆಕ್ಟರ್.!
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ನಿಖಿಲ್ ಕುಮಾರ್ ಸ್ವಲ್ಪ ಸೈಲೆಂಟ್ ಆದರು. 'ಸೀತಾರಾಮ ಕಲ್ಯಾಣ' ಸಿನಿಮಾದ ಬಳಿಕ ಯಾವ ಹೊಸ ಚಿತ್ರಕ್ಕೂ ನಿಖಿಲ್ ಸಹಿ ಮಾಡಿಲ್ಲ. ಆದರೆ, ರಜನಿಕಾಂತ್ ಅವರ '2.0' ಚಿತ್ರ ನಿರ್ಮಿಸಿದ್ದ ಲೈಕಾ ಪ್ರೊಡಕ್ಷನ್ ಜೊತೆ ಹೊಸ ಪ್ರಾಜೆಕ್ಟ್ ಮಾಡ್ತಾರೆ ಎಂಬ ಸುದ್ದಿ ಇದೆ.
ಈ ಚಿತ್ರವನ್ನ ತೆಲುಗಿನ ಸ್ಟಾರ್ ನಿರ್ದೇಶಕರೊಬ್ಬರು ಮಾಡಲಿದ್ದಾರೆ ಎಂಬ ಸುದ್ದಿಯೂ ವೈರಲ್ ಆಗಿತ್ತು. ತೆಲುಗು ನಿರ್ದೇಶಕ ಮತ್ತು ತಂತ್ರಜ್ಞರ ಮೇಲೆ ನಿಖಿಲ್ ಮತ್ತು ಕುಮಾರಸ್ವಾಮಿ ಅವರಿಗೆ ಹೆಚ್ಚು ಒಲವು ಇದೆ. ಹಾಗಾಗಿ, ಅವರಿಗೆ ಮೊದಲ ಆಧ್ಯತೆ ಕೊಡ್ತಾರೆ ಎನ್ನಲಾಗಿತ್ತು.
ಆದರೆ, ಆ ಸುದ್ದಿಯನ್ನ ನಿಖಿಲ್ ಕುಮಾರ್ ತಳ್ಳಿಹಾಕಿದ್ದಾರೆ. ನಿನ್ನೆ ಕುರುಕ್ಷೇತ್ರ ಚಿತ್ರಕ್ಕೆ ಡಬ್ಬಿಂಗ್ ಮಾಡಲು ಆಗಮಿಸಿದ್ದ ನಿಖಿಲ್, ತಮ್ಮ ಮುಂದಿನ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಸ್ವತಃ ನಿಖಿಲ್ ಮಾತನಾಡಿದ್ದು, ಮುಂದಿನ ಚಿತ್ರಕ್ಕೆ ಕನ್ನಡದವರೇ ಡೈರೆಕ್ಟರ್ ಎಂದಿದ್ದಾರೆ. ಹಾಗಿದ್ರೆ, ಯಾರು ಆ ಡೈರೆಕ್ಟರ್?

ನನ್ನ ಮುಂದಿನ ಚಿತ್ರಕ್ಕೆ ನಮ್ಮವರೇ ನಿರ್ದೇಶನ.!
ಲೈಕಾ ಪ್ರೊಡಕ್ಷನ್ ಜೊತೆ ನಿಖಿಲ್ ಕುಮಾರ್ ಸಿನಿಮಾ ಮಾಡುವುದು ಬಹುತೇಕ ಖಚಿತ. ಆದರೆ, ಈ ಚಿತ್ರವನ್ನ ಯಾರು ನಿರ್ದೇಶನ ಮಾಡ್ತಾರೆ ಎಂಬುದು ಕುತೂಹಲ. ಈ ಹಿಂದಿನ ವರದಿಗಳ ಪ್ರಕಾರ ತೆಲುಗಿನ ಸ್ಟಾರ್ ಡೈರೆಕ್ಟರ್ ಒಬ್ಬರು ಪಕ್ಕಾ ಆಗಿದ್ದಾರೆ ಎನ್ನಲಾಗಿತ್ತು. ಈ ಸುದ್ದಿಯನ್ನ ನಿರಾಕರಿಸಿರುವ ನಿಖಿಲ್, ಇಲ್ಲ ಕನ್ನಡದವರೇ ನಿರ್ದೇಶನ ಮಾಡ್ತಾರೆ ಎಂದು ಖಚಿತ ಪಡಿಸಿದ್ದಾರೆ. ಆದರೆ, ಅವರು ಯಾರು ಎಂದು ತಿಳಿಸಿಲ್ಲ.

ಭೇಟಿ ಆಗಿದ್ದ ತಕ್ಷಣ ಊಹೆ ತಪ್ಪು
''ನಾವು ಎಲ್ಲ ಕಡೆಯೂ ಹೋಗ್ತಾ ಇರ್ತೀವಿ. ಮಾತಾಡಿದಕ್ಷಣ ಅವರ ಜೊತೆ ಸಿನಿಮಾ ಮಾಡ್ತೀವಿ ಎನ್ನುವುದು ಹೇಳುವುದಕ್ಕೆ ಸಾಧ್ಯವಿಲ್ಲ. ನಮ್ಮಲ್ಲಿ ಪ್ರತಿಭಾನ್ವಿತ ತಂತ್ರಜ್ಞರು, ನಿರ್ದೇಶಕರು ಇದ್ದಾರೆ. ಹಾಗಾಗಿ, ಪರಭಾಷೆಯವರನ್ನ ಕರೆತರುವ ಪ್ರಶ್ನೆ ಇಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.

ಎರಡು ತಿಂಗಳಲ್ಲಿ ಶೂಟಿಂಗ್.!
''ಸದ್ಯಕ್ಕೆ ಎಲ್ಲ ತಯಾರಿ ನಡೆಯುತ್ತಿದೆ. ಇಷ್ಟು ದಿನ ಚುನಾವಣೆ ಅಂತ ಕೆಲಸ ಜಾಸ್ತಿ ಇತ್ತು. ಈಗ ರಾಜ್ಯ ಯುವ ಘಟಕದ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಜವಾಬ್ದಾರಿ ಹೆಚ್ಚಿದೆ. ಬಿಡುವು ಮಾಡಿಕೊಂಡು ಸಿನಿಮಾ ಮಾಡ್ತೀನಿ. ಇನ್ನೆರಡು ತಿಂಗಳಲ್ಲಿ ಚಿತ್ರೀಕರಣಕ್ಕೆ ಚಾಲನೆ ಕೊಡ್ತೀವಿ'' ಎಂದು ನಿಖಿಲ್ ತಿಳಿಸಿದ್ದಾರೆ.

ಸ್ವಂತ ಸಂಸ್ಥೆಯಲ್ಲಿ ಸಿನಿಮಾ ಮಾಡಲ್ಲ
ಮುಂದಿನ ದಿನಗಳಲ್ಲಿ ನನ್ನ ಚಿತ್ರಗಳನ್ನು ಸ್ವಂತ ಬ್ಯಾನರ್ ನಲ್ಲಿ ಮಾಡುವುದಿಲ್ಲ ಎಂದು ನಿಖಿಲ್ ಸ್ಪಷ್ಟಪಡಿಸಿದ್ದಾರೆ. ಜಾಗ್ವಾರ್ ಮತ್ತು ಸೀತಾರಾಮ ಕಲ್ಯಾಣ ಎರಡೂ ಚಿತ್ರಗಳು ಚೆನ್ನಾಂಭಿಕ ಫಿಲಂಸ್ ಅಡಿಯಲ್ಲಿ ಅನಿತಾ ಕುಮಾರಸ್ವಾಮಿ ನಿರ್ಮಿಸಿದ್ದರು. ಮುಂದಿನ ದಿನದಲ್ಲಿ ಬೇರೆ ಸಂಸ್ಥೆಗಳ ಜೊತೆ ಸಿನಿಮಾ ಮಾಡ್ತೀನಿ ಎಂದಿದ್ದಾರೆ.


Click it and Unblock the Notifications











