"ದುರಂತ ಅಂತ್ಯ ಕಂಡ ಕನ್ನಡಿಗರಿಬ್ಬರ ಕಥೆ ಹೇಳುತ್ತಿದೆ ಈ ಎರಡು ಕಟ್ಟಡ": ಕವಿರಾಜ್
ಕಾಫಿ ದೊರೆ, ಮಲೆನಾಡಿನ ಹೆಮ್ಮೆಯ ಪುತ್ರ ವಿ ಜಿ ಸಿದ್ಧಾರ್ಥ ನಿಧನಕ್ಕೆ ಇಡೀ ಕರುನಾಡೆ ಕಂಬನಿ ಮಿಡಿದಿದೆ. ಮಲೆನಾಡಿನಲ್ಲಿ ಹುಟ್ಟಿ, ಕಾಫಿ ಘಮವನ್ನು ಇಡೀ ವಿಶ್ವಕ್ಕೆ ಪರಿಚಯಿಸಿ ಯಶಸ್ವಿ ಉದ್ಯಮಿ ಎನಿಕೊಂಡಿರುವ ಸಿದ್ಧಾರ್ಥ ಅವರ ದುರಂತ ಅಂತ್ಯ, ಇಡೀ ಕಾಫಿ ನಾಡಿನ ಜನರಿಗೆ ಬರಸಿಡಿಲು ಬಡಿದಂತಾಗಿದೆ.
ಸಿದ್ಧಾರ್ಥ ನಿಧನಕ್ಕೆ ಉದ್ಯಮಿಗಳು, ರಾಜಕಾರಣಿಗಳು, ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಅದರಲ್ಲು ಕನ್ನಡ ಚಿತ್ರರಂಗದ ಪಾಲಿಗೆ ಸಿದ್ಧಾರ್ಥ ಅವರ ಕೆಫೆ ಕಾಫಿ ಡೇ ತುಂಬನೆ ವಿಶೇಷವಾಗಿತ್ತು. ಯಾಕಂದ್ರೆ ಅನೇಕ ಸಿನಿಮಾಗಳ ಹುಟ್ಟಿಗೆ ಕಾರಣವಾಗಿತ್ತು ಕಾಫಿ ಡೇ ಎನ್ನುವ ಜಾಗ. ಅದೆ ಕಾಫಿ ಡೇ ಮಾಲಿಕ ಇವತ್ತು ಬದುಕಿನ ಪಯಣಕ್ಕೆ ಗುಡ್ ಬೈ ಹೇಳಿ ಬಾರದ ಲೋಕಕ್ಕೆ ಹೊರಟಿದ್ದಾರೆ.

ಸಿದ್ಧಾರ್ಥ ನಿಧನದ ಈ ಸಮಯದಲ್ಲಿ ಕನ್ನಡ ಖ್ಯಾತ ಚಿತ್ರ ಸಾಹಿತಿ ಮತ್ತು ನಿರ್ದೇಶಕ ಕವಿರಾಜ್ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ.
"ಒಂದೇ ಫ್ರೇಮಿನಲ್ಲಿ ಸಿಗುವಂತಿರುವ ಈ ಎರಡೂ ಕಟ್ಟಡಗಳು ಇದೀಗ ತಮ್ಮದೇ ಬೃಹತ್ ಉದ್ಯಮ ಸಾಮ್ರಾಜ್ಯ ಕಟ್ಟಿ, ಎಲ್ಲರೂ ಬೆರಗಾಗುವಂತೆ ಬೆಳೆದು ಕೊನೆಯಲ್ಲಿ ದುರಂತ ಅಂತ್ಯ ಕಂಡ ಕನ್ನಡಿಗರಿಬ್ಬರ ಕಥೆ ಹೇಳುವಂತಿವೆ . ಇಬ್ಬರ ಗುಣಗಳು ತದ್ವಿರುದ್ಧ. ಒಬ್ಬರು ಯಶಸ್ಸಿನ ಅಮಲಲ್ಲಿ ಆಕಾಶದಲ್ಲೇ ತೇಲಿದರು. ಇನ್ನೊಬ್ಬರು ಎಷ್ಟೇ ಎತ್ತರ ಏರಿದರೂ ಭೂಮಿಯಲ್ಲೇ ಕಾಲೂರಿ ನಿಂತಿದ್ದರು" ಎಂದು ಒಂದೆ ಕಡೆ ಅಕ್ಕ ಪಕ್ಕದಲ್ಲೆ ಇರುವ ಕಟ್ಟಡಗಳನ್ನು ಸೆರೆಹಿಡಿದು ವಿಜಯ್ ಮಲ್ಯ ಮತ್ತು ಸಿದ್ಧಾರ್ಥ ಬಗ್ಗೆ ಹೇಳಿದ್ದಾರೆ.

"ಒಬ್ಬರದು ಐಷಾರಾಮಿ ಬದುಕು, ಇನ್ನೊಬ್ಬರದು ಸರಳತೆ. ಒಬ್ಬರು ಸಾಲಕ್ಕೆ ಹೆದರಿ ದೇಶ ಬಿಟ್ಟರು.ಇನ್ನೊಬ್ಬರು ಸಾಲಕ್ಕೆ ಹೆದರಿ ಪ್ರಾಣ ಬಿಟ್ಟರು. ಇಬ್ಬರ ಪತನವು ಕರ್ನಾಟಕಕ್ಕೆ, ಕನ್ನಡಿಗರ ಉದ್ಯಮಶೀಲತೆಗೆ ಆದ ತುಂಬಲಾರದ ನಷ್ಟ. ಕೆಲವೇ ವರ್ಷಗಳ ಹಿಂದೆ ಬೆಂಗಳೂರಿನ ಹೃದಯ ಭಾಗದಲ್ಲಿ ಕನ್ನಡಿಗರ ಹೆಮ್ಮೆಯ ಪ್ರತೀಕದಂತಿದ್ದ ಎರಡೂ ಕಟ್ಟಡಗಳ ಮೇಲೆ ಈಗೊಂದು ವಿಷಾದದ ಛಾಯೆ ಆವರಿಸಿರುವುದು ವಿಪರ್ಯಾಸ" ಹೀಗಂತ ಕವಿರಾಜ್ ಕನ್ನಡದ ಇಬ್ಬರು ಖ್ಯಾತ ಉದ್ಯಮಿಗಳ ದುರಂತ ಅಂತ್ಯದ ಬಗ್ಗೆ ವಿವರಿಸಿದ್ದಾರೆ.


Click it and Unblock the Notifications











