ಡೆಡ್ಲಿ ಗೇಮ್ 'ಬ್ಲೂವೇಲ್' ಕುರಿತು ಕನ್ನಡದಲ್ಲೊಂದು ಸಿನಿಮಾ.!
'ಬ್ಲೂವೇಲ್' ಗೇಮ್ ಈ ಹೆಸರು ಕೇಳುತ್ತಿದ್ದಂತೆ ಇದು ಸಾವಿನ ಆಟ ಎಂಬ ಮಾತು ಈಗ ಇಡೀ ಜಗತ್ತಿನಲ್ಲಿದೆ. ಈ ಗೇಮ್ ಹೆಸರಿನಲ್ಲಿ ಜಗತ್ತಿನಾದ್ಯಂತ ಒಂದು ರೀತಿಯ ಮಾರಣ ಹೋಮ ನಡೆಯುತ್ತಿದೆ. ಇಂತಹ ಗೇಮ್ ಈಗ ಭಾರತದಲ್ಲೂ ಹೆಚ್ಚು ಸುದ್ದಿಯಾಗುತ್ತಿದೆ.
ಇನ್ನು ಇಂತಹ ವಿಷ್ಯಗಳ ಬಗ್ಗೆ ಸಿನಿಮಾ ಮಂದಿ ಬಹುಬೇಗ ಆಕರ್ಷಿತರಾಗುತ್ತಾರೆ. ಹೌದು, ಡೆಡ್ಲಿ ಗೇಮ್ 'ಬ್ಲೂವೇಲ್' ಕುರಿತು ಕನ್ನಡದಲ್ಲಿ ಸಿನಿಮಾ ಮಾಡಲು ತಯಾರಿ ನಡೆಸಿದ್ದು, ಆದಷ್ಟೂ ಬೇಗ ಸಿನಿಮಾ ಆರಂಭವಾಗಲಿದೆ.

ಈ ಹಿಂದೆ 'ಲೂಸ್ ಗಳು' ಎಂಬ ಚಿತ್ರ ನಿರ್ದೇಶನ ಮಾಡಿದ್ದ ಅರುಣ್, ಬ್ಲೂ ವೇಲ್ ಕುರಿತ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರಂತೆ. 'ಸ್ಟೋರಿ ಆಫ್ ತಸ್ಕರ' ಎಂಬ ಕಿರುಚಿತ್ರದಲ್ಲಿ ನಟಿಸಿದ್ದ ರಾಜೇಶ್ ಗಣಪತಿ ಈ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.
'ಬ್ಲೂವೇಲ್' ಎಂಬ ಮೈಂಡ್ ಗೇಮ್ ನಂತಹ ಸಾವಿನ ಆಟದಲ್ಲಿ ಎಷ್ಟೋ ಮಕ್ಕಳು ಬಲಿಯಾಗಿದ್ದಾರೆ. ಇಂದಿನ ತಂತ್ರಜ್ಞಾನ ಯುವಜನತೆಯ ಮೇಲೆ ಎಂತಹ ಪರಿಣಾಮ ಬೀರುತ್ತಿದೆ ಎಂಬ ಥ್ರಿಲ್ಲಿಂಗ್ ಅಂಶಗಳನ್ನಿಟ್ಟುಕೊಂಡು ಅರುಣ್ ಸಿನಿಮಾ ಮಾಡುತ್ತಿದ್ದಾರಂತೆ.
ಸದ್ಯ, ಇಂತಹದೊಂದು ಹೊಸ ಪ್ರಯತ್ನಕ್ಕೆ ಸ್ಯಾಂಡಲ್ ವುಡ್ ಯುವ ನಿರ್ದೇಶಕ ಮುಂದಾಗಿದ್ದು, ಆದಷ್ಟೂ ಬೇಗ ಸಿನಿಮಾ ಶುರು ಮಾಡಲಿದ್ದಾರಂತೆ.


Click it and Unblock the Notifications











