ಗಂಡನಿಂದಲೇ 'ಭಜರಂಗಿ' ಸಿನಿಮಾ ನಟಿ, ಕಾಂಗ್ರೆಸ್ ಮುಖಂಡೆ ಭೀಕರ ಹತ್ಯೆ
ಕೌಟುಂಬಿಕ ಕಲಹದಿಂದ ಪತಿಯೇ ತನ್ನ ಪತ್ನಿಯನ್ನು ಹತ್ಯೆಗೈದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕಾಂಗ್ರೆಸ್ ಮುಖಂಡೆ ವಿದ್ಯಾ ನಂದೀಶ್ ಕನ್ನಡದ ಕೆಲ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಬಣ್ಣ ಹಚ್ಚಿದ್ದರು. ಮೈಸೂರು ಜಿಲ್ಲೆಯ ಬನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.
ನಟಿ ವಿದ್ಯಾ ನಂದೀಶ್ ಮೈಸೂರಿನ ಶ್ರೀರಾಮಪುರದಲ್ಲಿ ಪತಿ ಹಾಗೂ ಮಕ್ಕಳ ಜೊತೆ ನೆಲೆಸಿದ್ದರು. ಬನ್ನೂರಿನ ತುರಗನೂರಿನಲ್ಲಿ ಪತಿಯ ಮನೆಗೆ ಆಕೆ ತೆರಳಿದ್ದಾಗ ಗಲಾಟೆ ನಡೆದಿದೆ. ಇದು ವಿಕೋಪಕ್ಕೆ ಹೋಗಿ ವಿದ್ಯಾ ಹತ್ಯೆಯಲ್ಲಿ ಕೊನೆಯಾಗಿದೆ. ಈ ಕೊಲೆಗೆ ಅಸಲಿ ಕಾರಣ ಏನು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಪತ್ನಿ ಮೇಲೆ ಹಲ್ಲೆ ನಡೆಸಿ ಪತಿ ನಂದೀಶ್ ಪರಾರಿಯಾಗಿದ್ದಾನೆ.

ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ವಿದ್ಯಾ ಇತ್ತೀಚೆಗೆ ಕಾಂಗ್ರೆಸ್ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷದ ಬ್ಲಾಕ್ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು. ನಂದೀಶ್ ಸಮಾಜ ಸೇವಕರಾಗಿ ಆ ಭಾಗದಲ್ಲಿ ಹೆಸರು ಮಾಡಿದ್ದರು. ಇನ್ನು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಹಾಗೂ ಪತ್ನಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಆದರೆ ಈ ಬಾರಿ ಅದು ವಿಕೋಪಕ್ಕೆ ಹೋಗಿದೆ ದುರಂತ ಸಂಭವಿಸಿದೆ.
ಗಲಾಟೆ ವೇಳೆ ಪತ್ನಿ ತಲೆಗೆ ನಂದೀಶ ಆಯುಧದಿಂದ ಹೊಡೆದಯ ಓಡಿ ಹೋಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಇನ್ನು ಬನ್ನೂರು ಪೊಲೀಸರು ಸ್ಥಳಕ್ಕೆ ಬಂದು ಮಹಜರು ನಡೆಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಹೆಚ್ಚುವರಿ ಎಸ್. ಪಿ ಡಾ. ನಂದಿನಿ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಶಿವರಾಜ್ಕುಮಾರ್ ನಟನೆಯ 'ಭಜರಂಗಿ' ಚಿತ್ರದಲ್ಲಿ ವಿದ್ಯಾ ನಟಿಸಿದ್ದರು. ಇನ್ನು ಚಿರಂಜೀವಿ ಸರ್ಜಾ ನಟನೆಯ 'ಅಜಿತ್' ಚಿತ್ರದಲ್ಲಿ ಆಕೆ ನಾಯಕನ ಸ್ನೇಹಿತೆಯ ಪಾತ್ರದಲ್ಲಿ ಮಿಂಚಿದ್ದರು.


Click it and Unblock the Notifications











