ಕೈ ಸುಟ್ಟುಕೊಂಡ ನಿರ್ಮಾಪಕನ ಕೈ ಹಿಡಿದ ಅದ್ದೂರಿ
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಸೋದರಳಿಯ ಧ್ರುವ ಸರ್ಜಾ ಅಭಿನಯದ ಚೊಚ್ಚಲ ಚಿತ್ರ 'ಅದ್ದೂರಿ' ನಿರ್ಮಾಪಕರ ಕೈಹಿಡಿದಿದೆ. ಲಿಫ್ಟ್ ಕೊಡ್ಲಾ ಚಿತ್ರದ ಮೂಲಕ ಜೇಬು ಖಾಲಿ ಮಾಡಿಕೊಂಡಿದ್ದ ನಿರ್ಮಾಪಕ ಸಿಎಂಆರ್ ಶಂಕರ್ ರೆಡ್ಡಿ ಈ ಚಿತ್ರದ ಮೂಲಕ ಒಂದಷ್ಟು ದುಡ್ಡು ಕಾಸು ನೋಡಿದ್ದಾರೆ.
ನವರಸ ನಾಯಕ ಜಗ್ಗೇಶ್ ನಾಯಕತ್ವದ ಲಿಫ್ಟ್ ಕೊಡ್ಲಾ ಚಿತ್ರದ ಬಜೆಟ್ ಅಳತೆ ಮೀರಿದ್ದೇ ತಮ್ಮ ಕೈಸುಡಲು ಕಾರಣ ಎಂದಿದ್ದಾರೆ ರೆಡ್ಡಿ. ಮೊದಲು ರು.1.60 ಕೋಟಿ ಬಜೆಟ್ ಎಂದು ಫಿಕ್ಸ್ ಆಗಿತ್ತಂತೆ. ರೀಲು ಸುತ್ತುತ್ತಾ ಸಾಗಿದಂತೆ ಬಜೆಟ್ ರು.3 ಕೋಟಿ ದಾಟಿದೆ. ಚಿತ್ರ ಬಾಕ್ಸಾಫೀಸಲ್ಲಿ ಮಕಾಡೆ ಮಲಗಿತು.
ಲಿಫ್ಟ್ ಕೊಡ್ಲಾ ಚಿತ್ರದಲ್ಲಿ ಕಳೆದುಕೊಂಡದ್ದು ಅದ್ದೂರಿ ಚಿತ್ರದ ಮೂಲಕ ಬೂಮರಾಂಗ್ ನಂತೆ ಹಿಂತಿರುಗಿದೆ. ಈ ವಿಷಯನ್ನು ಅವರು ಅರ್ಧ ಶತಕ ಸಿಡಿಸಿರುವ ಅದ್ದೂರಿ ಔತಣಕೂಟದಲ್ಲಿ ಅವರು ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಅದ್ದೂರಿ ಚಿತ್ರದ ಮೊದಲ ವಾರದ ಗಳಿಕೆ ರು.3.5 ಕೋಟಿ ಇದ್ದದ್ದು ವಾರದಿಂದ ವಾರಕ್ಕೆ ಗಳಿಕೆಯಲ್ಲಿ ಪ್ರೋಗ್ರೆಸ್ ತೋರಿಸಿದೆ. ಚಿತ್ರದ ನಿರ್ದೇಶಕ ಎಪಿ ಅರ್ಜುನ್ ಅವರಿಗೂ ಒಳ್ಳೆಯ ಬ್ರೇಕ್ ನೀಡಿದೆ. ನಟ ಧ್ರುವ ಸರ್ಜಾಗೆ ಅವಕಾಶಗಳು ಒಂದೊಂದಾಗಿ ಬಾಗಿಲು ತಟ್ಟುತ್ತಿವೆ.
ಶಂಕರ್ ರೆಡ್ಡಿ ಅವರ ಮಾತಿಗೆ ವಿತರಕರಾದ ಭಾಷಾ ಅವರೂ ಧ್ವನಿಗೂಡಿಸುತ್ತಾರೆ, ಅವರ ಪ್ರಕಾರ ಚಿತ್ರ ಅದ್ದೂರಿಯಾಗಿಯೇ ಕಲೆಕ್ಷನ್ ಮಾಡಿದೆ. ಮೈಸೂರು, ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕ ಕೇಂದ್ರಗಳಲ್ಲೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎನ್ನುತ್ತಾರೆ.
ಮೊದಲ ವಾರದಲ್ಲಿ ಪ್ರತಿದಿನ 464 ಪ್ರದರ್ಶನಗಳನ್ನು 'ಅದ್ದೂರಿ' ಕಂಡಿದ್ದು, ಎರಡನೇ ವಾರದಲ್ಲಿ 18 ಹೆಚ್ಚು ಚಿತ್ರಮಂದಿರಗಳು ಸೇರ್ಪಡೆಯಾಗಿವೆ. ಮೈಸೂರಿನ ಗಾಯತ್ರಿ ಚಿತ್ರಮಂದಿರದಲ್ಲಿ 28 ಹೌಸ್ಫುಲ್ ಪ್ರದರ್ಶನಗಳನ್ನು ಕಂಡಿದೆ. ಮೈಸೂರಿನಲ್ಲಿ 'ಅದ್ದೂರಿ' ಚಿತ್ರಮಂದಿರಗಳ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನುತ್ತಾರೆ ಅರ್ಜುನ್. (ಒನ್ ಇಂಡಿಯಾ ಕನ್ನಡ)


Click it and Unblock the Notifications











