ಪಾಕಿಸ್ತಾನ, ಕೋಲ್ಕತ್ತಾ ಚಿತ್ರೋತ್ಸವಕ್ಕೆ 'ಅಂಗುಲಿಮಾಲ'
ಪ್ರೊ.ಬರಗೂರು ರಾಮಚಂದ್ರಪ್ಪ ನಿರ್ದೇಶನದ ಅಂಗುಲಿಮಾಲ ಚಿತ್ರ ಪಾಕಿಸ್ತಾನ ಮತ್ತು ಕೋಲ್ಕತ್ತಾ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಈ ಚಿತ್ರವನ್ನು ಶ್ರೀ ಹರ್ಷ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬೆಂ.ಕೋ.ಶ್ರೀನಿವಾಸ್ ನಿರ್ಮಿಸಿದ್ದಾರೆ.
ಪಾಕಿಸ್ತಾನದ ಲಾಹೋರ್ ನಲ್ಲಿ ಡಿಸೆಂಬರ್ 27 ರಿಂದ 29ರವರೆಗೆ ನಡೆಯಲಿರುವ ರಫಿಪೀರ್ ಅಂತರಾಷ್ಟೀಯ ಚಿತ್ರೋವದಲ್ಲಿ ಅಂಗುಲಿಮಾಲ ಪಾಲ್ಗೊಳ್ಳಲಿದೆ. ಪಾಕಿಸ್ತಾನದಲ್ಲಿ ಪ್ರದರ್ಶಿತವಾಗುತ್ತಿರುವ ಮೊದಲ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೂ ಅಂಗುಲಿಮಾಲ ಪಾತ್ರವಾಗಿದೆಯೆಂದು ಅಲ್ಲಿನ ಸಂಘಟಕರು ತಿಳಿಸಿದ್ದಾರೆ.

ಸುಮಾರು ನಾಲ್ಕು ದಶಕಗಳಿಂದ ಸಾಂಸ್ಕೃತಿಕ ಕ್ರಿಯೆಯಲ್ಲಿ ತೊಡಗಿರುವ ರಫಿ ಪೀರ್ ಥಿಯೇಟಾರ್ ವರ್ಕ್ ಶಾಪ್ ಎಂಬ ಸಂಸ್ಥೆಯು ಈ ಚಿತ್ರೋತ್ಸವನ್ನು ನಡೆಸುತ್ತಿದೆ. ಕೋಲ್ಕತ್ತಾ ಅಂತರರಾಷ್ಟ್ರೀಯ ಚಿತ್ರೋತ್ಸವನ್ನು ಪಶ್ಚಿಮ ಬಂಗಾಳ ಸರ್ಕಾರವು ನಡೆಸುತ್ತಿದ್ದು, ಈ ಚಿತ್ರೋತ್ಸವವೂ ಇದೇ ನವೆಂಬರ್ 10ರಿಂದ 17ರವರೆಗೆ ನಡೆಯಲಿದೆ. ಕೋಲ್ಕತ್ತಾ ಚಿತ್ರೋತ್ಸವದ ಅಂತರರಾಷ್ಟ್ರೀಯ ಸಿನಿಮಾ ವೇದಿಕೆ ಎಂಬ ವಿಭಾಗಕ್ಕೆ ಅಂಗುಲಿಮಾಲ ಆಯ್ಕೆಯಾಗಿದ್ದು ಪ್ರದರ್ಶಿತಗೊಳ್ಳಲಿದೆ.
ಬಹುಮುಖ್ಯವಾಗಿ ಭಯೋತ್ಪಾದನೆಯ ಸುಳಿಯಲ್ಲಿರುವ ಪಾಕಿಸ್ತಾನದಲ್ಲಿ ಬುದ್ಧನ ಸಂದೇಶವುಳ್ಳ ಅಂಗುಲಿಮಾಲ ಚಿತ್ರವು ಪ್ರದರ್ಶನಗೊಳ್ಳುತ್ತಿರುವುದು ಒಂದು ವಿಶೇಷವೆಂದೇ ಹೇಳಬಹುದು. ಅಂಗುಲಿಮಾಲ ಚಿತ್ರವು ಐತಿಹ್ಯ ಮತು ಚರಿತ್ರೆಗಳ ಜೊತೆಗೆ ಸಮಕಾಲೀನ ಭಯೋತ್ಪಾದನೆಯನ್ನು ವಿಶ್ಲೇಷಿಸುವ ಮತ್ತು ವಿರೋಧಿಸುವ ಹೊಸ ವ್ಯಾಖ್ಯಾನವನ್ನು ಒಳಗೊಂಡಿದ್ದು ಪಾಕಿಸ್ತಾನದಲ್ಲಿ ಪ್ರದರ್ಶನಗೊಳ್ಳುತ್ತಿರುವುದಕ್ಕೆ ವಿಶೇಷ ಮಹತ್ವವಿದೆ.
ಅಂಗುಲಿಮಾಲನಾಗಿ ಸಾಯಿಕುಮಾರ್, ಬುದ್ಧನಾಗಿ ರಘು ಮುಖರ್ಜಿ ಅಭಿನಯಿಸಿರುವ ಈ ಚಿತ್ರದಲ್ಲಿ ಜಯಂತಿ, ಮುಖ್ಯಮಂತ್ರಿ ಚಂದ್ರು, ರಾಘವ್, ಪಲ್ಲಕ್ಕಿ, ಹಂಸ, ವತ್ಸಲಾ ಮೋಹನ್, ಗಿರಿಜಾ ಲೋಕೇಶ್, ಸುಂದರರಾಜ ಅರಸು, ಜಯಕುಮಾರ್ ಮುಂತಾದವರಲ್ಲದೆ ಮೈಸೂರಿನ ಡಾ.ರಾಜ್ ಕುಮಾರ್ ಫಿಲಮ್ ಇನ್ಸ್ ಟಿಟ್ಯೂಟ್ ನ ಅನೇಕ ಹೊಸ ಕಲಾವಿದರು ನಟಿಸಿದ್ದಾರೆ.
ವಿ ಮನೋಹರ್ ಸಂಗೀತ, ಸುರೇಶ್ ಅರಸ್ ಸಂಕಲನ ಮತ್ತು ನಾಗರಾಜ ಆದವಾನಿ ಛಾಯಾಗ್ರಹಣವಿರುವ ಈ ಚಿತ್ರ ಇಷ್ಟರಲ್ಲೇ ಬಿಡುಗಡೆಯಾಗಲಿದೆ. ಚಿತ್ರಕ್ಕೆ ನಟರಾಜ್ ಶಿವು ಮತ್ತು ಪ್ರವೀಣ್ ಸಹ ನಿರ್ದೇಶನವಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











