ಡಾ.ರಾಜ್ ಕಂಡಿದ್ದ ಕನಸನ್ನ ಅಂಬರೀಶ್ ಈಡೇರಿಸಿಬಿಟ್ಟರು
ಸಿನಿಮಾ ಕಲಾವಿದರಿಗೊಂದು ಭವನ ಬೇಕು ಎನ್ನುವುದು ಅಂದಿನ ಕಲಾವಿದರ ಬಹುದೊಡ್ಡ ಕನಸು ಮತ್ತು ಆಸೆಯಾಗಿತ್ತು. ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಅನಂತ್ ನಾಗ್, ಅಂಬರೀಶ್ ಸೇರಿದಂತೆ ಹಲವು ನಟ-ನಟಿಯರ ಬಯಕೆಯೂ ಆಗಿತ್ತು. ಆದ್ರೆ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ.
ಇದೀಗ, ಸ್ಯಾಂಡಲ್ ವುಡ್ ತಾರೆಯರ ಬಹುವರ್ಷಗಳ ಕನಸು, ಗುರಿ ಈಡೇರಿದೆ. ಕನ್ನಡ ಕಲಾವಿದರ ಸಂಘಕ್ಕೆ ಒಂದು ಸೂರು ತಯಾರಾಗಿದೆ. ಈ ಸಂತಸವನ್ನ ನವರಸ ನಾಯಕ ಜಗ್ಗೇಶ್ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ಅಂದು ನಡೆದ ಕೆಲವು ನಿರ್ಧಾರ ಮತ್ತು ಬೆಳವಣಿಗೆಯನ್ನ ನೆನಸಿಕೊಂಡಿರುವ ಜಗ್ಗೇಶ್ ಅವರು, ಡಾ ರಾಜ್ ಕುಮಾರ್ ಅವರ ಆಸೆಯನ್ನ, ಅಂಬರೀಶ್ ಈಡೇರಿಸಿದರು ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜಗ್ಗೇಶ್ ಅವರು ಬರೆದುಕೊಂಡಿರುವ ಸಂತೋಷದ ಸಾಲುಗಳನ್ನ ಪೂರ್ತಿ ಓದಿ....

ಆ ಕಾಲ ಮತ್ತೊಮ್ಮೆ ಬಂತು
''ಇಂದು ಕಲಾವಿದರ ಸಂಘದ ಮೀಟಿಂಗ್ ಇತ್ತು. ಈ ಸಂಘದ ಪರಿಕಲ್ಪನೆ ಡಾ. ರಾಜಣ್ಣನದು... ಸಂಘಕ್ಕೆ ತುಂಬಾ ಓಡಾಟ ಮಾಡಿ ಸರ್ಕಾರದಿಂದ ಕೆಲಸ ಮಾಡಿಸಬೇಕಿತ್ತು. ಆಗ ಸಾಮಾನ್ಯವಾಗಿ ಅಣ್ಣನ ನೇತೃತ್ವದಲ್ಲಿ ಎಲ್ಲಾ ಕಲಾವಿದರು ವಿಷ್ಣು ಸಾರ್, ಅನಂತ್ ಸಾರ್, ಪ್ರಭಾಕರ್ ಸಾರ್, ಅಂದಿನ ಎಲ್ಲಾ ಪೋಷಕ ನಟ-ನಟಿಯರು ಸಭೆ ಸೇರುತಿದ್ದೆವು, ಅದ್ಭುತ ಊಟ ನಂತರ ಕುಶಲೋಪರಿ ನಿರ್ಗಮನ ಆಗುತ್ತಿತ್ತು'' - ಜಗ್ಗೇಶ್, ನಟ

ಧೈರ್ಯ ಮಾಡಿದ ಸಲಹೆ ನೀಡಿದೆ
''ಒಂದು ದಿನ ಧೈರ್ಯಮಾಡಿ ನಾನು ಅಣ್ಣನಿಗೆ ಒಂದು ಸಲಹೆ ನೀಡಿದೆ. ಅಣ್ಣ ನೀವು ಸರ್ಕಾರಿ ಕಛೇರಿ ಅಲೆದಾಟ ಮಾಡಲಾಗದು ಆ ಕಾರ್ಯ ಯಾಕೆ ಅಂಬರೀಶ ಅವರಿಗೆ ವಹಿಸಬಾರದು ಅಂತ. ತಾಳ್ಮೆಯಿಂದ ಕೇಳಿ ಮುಗುಳ್ನಕ್ಕು ತಲೆ ಆಡಿಸಿದರು. ಇದಾದ 3 ತಿಂಗಳು ನಂತರ ಸಭೆ ಸೇರಿ ಸಂಘಕ್ಕೆ ಅಂಬರೀಶ್ ರನ್ನು ಅಧ್ಯಕ್ಷರನ್ನಾಗಿ ಮಾಡಲು ಅಣ್ಣ ಪ್ರಕಟಿಸಿದರು'' - ಜಗ್ಗೇಶ್, ನಟ

ಅಸಮಾಧಾನ ಪಟ್ಟವರು ಇದ್ದರು
''ಆಗ ಕೆಲ ಹಿರಿಯ ಪೋಷಕ ನಟರು ಅಸಮಾಧಾನ ಪಟ್ಟರು. ಇದಕಂಡು ನನಗೆ ಬಹಳ ಸಿಟ್ಟುಬಂತು. ಅಂಬರೀಶ್ ಅವರು ಬರುವುದು ತಡವಾಯಿತು. ಏನಾಗಬಹುದೋ ಎಂಬ ಕಾತುರ ನನಗೆ. ಅಂಬರೀಶ್ ಬಂದ ತಕ್ಷಣ ಮಗ್ಗುಲಲ್ಲಿ ಕೆಲ ಚೇರು ಹಾಕಿ ಅಣ್ಣ ಮತ್ತೆ ಕೆಲ ಹಿರಿಯ ನಟರು ಕೂತು ದೀರ್ಘವಾಗಿ ಚರ್ಚಿಸಿ ನಿರ್ಣಯಕ್ಕೆ ಬಂದು ಅಂಬರೀಶ್ ಅಧ್ಯಕ್ಷರು, ಅಣ್ಣ ಗೌರವ ಅಧ್ಯಕ್ಷ ಎಂದು ಘೋಷಣೆ ಮಾಡಿ ಸಭೆ ಮುಗಿಸಿದರು'' - ಜಗ್ಗೇಶ್, ನಟ

ಅಣ್ಣಾವ್ರ ಆಸೆಯಾಗಿತ್ತು
''ಅಂದು ಅಣ್ಣನಿಗೆ ಇದ್ದ ಆಸೆ ಕಲಾಕುಟುಂಬ ಕೂತು ಮಾತಾಡಲು ಒಂದು ಸೂರು ನಿರ್ಮಿಸುವುದು. ಅಣ್ಣನ ಆಸೆಯನ್ನ ಒಬ್ಬನೇ ಅಂಬರೀಶ್ ಇಷ್ಟು ವರ್ಷ 4 ಸರ್ಕಾರದ ಜೊತೆ ಮಾತಾಡಿ ಮನವೊಲಿಸಿ ಕೋಟಿಗಟ್ಟಲೆ ಹಣ ಕ್ರೂಡಿಕರಿಸಿ ಇಂದು ಅಣ್ಣನ ಆಸೆ ನೆರವೇರಿಸಿಬಿಟ್ಟರು. ಇವರ ಭಾವನೆಗೆ ರಥವಾಗಿ, ನೆರಳಾಗಿ, ಸೈನಿಕರಾಗಿ ನಿಂತವರು ಇಬ್ಬರೇ, ಅದು ರಾಕ್ ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ'' - ಜಗ್ಗೇಶ್, ನಟ

ಇವರಿಗೆ ಧನ್ಯವಾದಗಳು
''ಈ ಶ್ಲಾಘನೀಯ ಕಾರ್ಯ ಮಾಡಿ ಮುಂದಿನ ಪೀಳಿಗೆಗೆ ಕೂತು ಭಾವನೆ ಹಂಚಿಕೊಳ್ಳಲು ಸೂರು ಕಟ್ಟಿ ಸ್ವಾಭಿಮಾನದಿಂದ ನಮ್ಮ ಕಲಾವಿದರ ಮನೆ ಅನ್ನುವಂತೆ ಶ್ರಮಿಸಿದ ಅಂಬರೀಶ್, ರಾಕ್ ಲೈನ್ ಹಾಗು ದೊಡ್ಡಣ್ಣನಿಗೆ ನಮ್ಮ ಕಲಾಬಂಧುಗಳ ಪರವಾಗಿ ತುಂಬು ಹೃದಯದ ಧನ್ಯವಾದಗಳು'' - ಜಗ್ಗೇಶ್, ನಟ

ಅತಿ ಶೀಘ್ರದಲ್ಲಿ ಉದ್ಘಾಟನೆ
''ಈ ಸಂಘದಂತೆ ಇಡೀ ದೇಶದ ಯಾವ ರಾಜ್ಯದ ಕಲಾವಿದರ ಸಂಘವೂ ಇಲ್ಲ, ಅಷ್ಟು ಅದ್ಬುತವಾಗಿದೆ. ಇಂತ ಕಟ್ಟಡ ನೀಡಿದ ಅಂಬರೀಶ್ ರವರಿಗೆ, ಕರ್ನಾಟಕ ಸರ್ಕಾರಕ್ಕೆ, ಪ್ರೋತ್ಸಾಹ ನೀಡಿದ ಮಹನೀಯರಿಗೆ ಮತ್ತೊಮ್ಮೆ ಧನ್ಯವಾದ ಹೇಳುವೆ. ಇಂದು ಆ ಕಟ್ಟಡ ಉದ್ಗಾಟನೆ ದಿನಾಂಕ ಹಾಗು ಸಲಹೆಗೆ ನಾವೆಲ್ಲಾ ಸೇರಿದ್ದೆವು. ಭಾವನಾತ್ಮಕವಾಗಿತ್ತು ಈ ಶುಭ ಸಂದರ್ಭ'' - ಜಗ್ಗೇಶ್, ನಟ

ಕಲಾವಿದರ ಸಂಘದ ಕಚೇರಿಯ ವಿಶೇಷತೆ
ಮೂರು ಅಂತ್ತಸ್ತಿನ ಕಟ್ಟಡದಲ್ಲಿರುವ ಈ ಕಚೇರಿಯಲ್ಲಿ ಮೂನ್ನೂರು ಜನ ಕುಳಿತುಕೊಳ್ಳಬಹುದಾದ ಚಿತ್ರಮಂದಿರ, ಒಂದರಲ್ಲಿ ಡಾನ್ಸ್ ಕ್ಲಾಸ್, ಮತ್ತೊಂದರಲ್ಲಿ ಯೋಗ, ಜಿಮ್, ಇನ್ನೊಂದರಲ್ಲಿ ಆಕ್ಟಿಂಗ್ ಕ್ಲಾಸ್, ಪ್ರೆಸ್ ಮೀಟ್ ಮಾಡಲು ಜಾಗ, ಕ್ಲಬ್ ಎಲ್ಲವೂ ಇದೆ.


Click it and Unblock the Notifications











