ಪಾಕಿಸ್ತಾನ ಚಲನಚಿತ್ರೋತ್ಸವಕ್ಕೆ 'ಭಾವನೆಗಳ ಬೆನ್ನೇರಿ'
ಪ್ರೊ.ಬರಗೂರು ರಾಮಚಂದ್ರಪ್ಪ ಅವರ 'ಅಂಗುಲಿಮಾಲ' ಚಿತ್ರ ಪಾಕಿಸ್ತಾನ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಬೆನ್ನಲ್ಲೇ ಮತ್ತೊಂದು ಕನ್ನಡ ಚಿತ್ರವೂ ಆಯ್ಕೆಯಾಗಿದೆ. ಕನ್ನಡ ಚಿತ್ರಗಳು ಭಾರತದ ಗಡಿದಾಟುತ್ತಿರುವುದು ನಿಜಕ್ಕೂ ಹೆಮ್ಮೆಪಡುವ ಸಂಗತಿ.
ಟಿ.ಜಿ.ರಂಗನಾಥ್ ಮತ್ತು ಬಿ.ಆರ್.ಲತಾ ನಿರ್ಮಿಸಿರುವ 'ಭಾವನೆಗಳ ಬೆನ್ನೀರಿ' ಚಿತ್ರ ಪ್ರತಿಷ್ಠಿತ ರಫೀ ಪೀರ್ ಅಂತರರಾಷ್ಟೀಯ ಚಲನಚಿತ್ರೋತ್ಸವದ ಆಯ್ಕೆಯ ಗೌರವ ಪಡೆದಿದೆ. ಬುದ್ಧಿಮಾಂದ್ಯ ಮಗುವಿನ ಭಾವನೆಗಳ ಸುತ್ತ ಕದಲುವ ಕನ್ನಡದ ವಿಶೇಷ ಚಲನಚಿತ್ರವಿದು.

ಈ ಕುರಿತು ಸಂತಸ ಹಂಚಿಕೊಂಡ ಚಿತ್ರ ನಿರ್ದೇಶಕ ನಿಖಿಲ್ ಮಂಜು, "ವಾಣಿಜ್ಯಾತ್ಮಕ ಚಿತ್ರಗಳ ಇಂದಿನ ಸಂತೆಯಲ್ಲಿ ತಮ್ಮ ಪುಟ್ಟ ಚಿತ್ರ ಆಯ್ಕೆಯಾಗಿರುವುದು ಸಂತಸ ತಂದಿದೆ. ಬುದ್ಧಿಮಾಂದ್ಯ ಮಗುವೊಂದರ ಭಾವನಾಜಗತ್ತಿನ ಅನಾವರಣ ಮಾಡುವ ಇಂತಹ ಪ್ರಯೋಗಾತ್ಮಕ ಪುಟ್ಟ ಚಿತ್ರಗಳಿಗೆ ಸಿಗುವ ಇಂತಹ ದೊಡ್ಡ ಗೌರವ ನನ್ನಂತಹ ಇನ್ನಷ್ಟು ನಿರ್ದೇಶಕರಿಗೆ ಉತ್ತೇಜನಾಕಾರಿ" ಎಂದಿದ್ದಾರೆ.
ಚಿತ್ರದ ನಿರ್ಮಾಪಕರಿಗೆ ಈ ಸಂದರ್ಭದಲ್ಲಿ ವಿಶೇಷ ಧನ್ಯವಾದ ಅರ್ಪಿಸಿರುವ ಅವರು, ಚಿತ್ರದ ಮುಖ್ಯ ಪಾತ್ರದಾರಿ ಮಾಸ್ಟರ್ ಕಾರ್ತೀಕ್ ನಿಜಜೀವನದಲ್ಲೂ ಮಾನಸಿಕವಾಗಿ, ದೈಹಿಕವಾಗಿ ವಿಶೇಷ ಮಗುವಾಗಿದ್ದರೂ ನಟನೆಯ ಸಂದರ್ಭದಲ್ಲಿ ಸ್ಪಂದಿಸಿದ ಕ್ಷಣಗಳನ್ನು ಮೆಲಕು ಹಾಕಿದರು. (ಒನ್ಇಂಡಿಯಾ ಕನ್ನಡ)


Click it and Unblock the Notifications











