twitter
    For Quick Alerts
    ALLOW NOTIFICATIONS  
    For Daily Alerts

    ಹಿರಿಯ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ವಿಧಿವಶ

    |

    ಹಿರಿಯ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ವಿಧಿವಶರಾಗಿದ್ದಾರೆ. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರು ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಮಧ್ಯಾಹ್ನ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದರು. ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೆ.ಎಸ್.ಎಲ್.ಸ್ವಾಮಿ ಅವರು ಕಣ್ಣುಗಳನ್ನು ದಾನ ಮಾಡಿದ್ದಾರೆ.

    ರವಿ ಎಂದು ಮಾಧ್ಯಮಗಳಿಂದ, ಪರಿಚಿತರಿಂದ ಗುರುತಿಸಲ್ಪಡುತ್ತಿದ್ದ ಕಿಕ್ಕೇರಿ ಶಾಮಣ್ಣ ಲಕ್ಷ್ಮೀನರಸಿಂಹಸ್ವಾಮಿ (77) ಕೆ.ಎಸ್.ಎಲ್.ಸ್ವಾಮಿ ಅವರು ಅಕ್ಟೋಬರ್ 20ರ ಮಂಗಳವಾರ ಮುಂಜಾನೆ 2 ಗಂಟೆ ಸುಮಾರಿಗೆ ಬೆಂಗಳೂರಿನ ಹೊರಮಾವುವಿನಲ್ಲಿರುವ ನಿವಾಸದಲ್ಲಿ ಮೃತಪಟ್ಟಿದ್ದಾರೆ.

    ksl swamy

    ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಕೆ.ಎಸ್.ಎಲ್‌.ಸ್ವಾಮಿ ಅವರು 42 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿರುವಾಗಲೇ ಅವರಿಗೆ ಲಘು ಹೃದಯಾಘಾತವಾಗಿತ್ತು. ಅವರ ಆರೋಗ್ಯ ಸುಧಾರಿಸಿದ್ದರಿಂದ ಸೋಮವಾರ ಮಧ್ಯಾಹ್ನ 3 ಗಂಟೆಯ ವೇಳೆ ಡಿಸ್ಚಾರ್ಜ್ ಮಾಡಲಾಗಿತ್ತು. [ಕೆಎಸ್ ಎಲ್ ಸ್ವಾಮಿ ಆಸ್ಪತ್ರೆಗೆ ದಾಖಲು]

    ಕಣ್ಣು, ದೇಹ ದಾನ : ಕೆ.ಎಸ್.ಎಲ್.ಸ್ವಾಮಿ ಅವರು ತಮ್ಮ ಕಣ್ಣುಗಳನ್ನು ದಾನ ಮಾಡಿದ್ದು, ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಕುಟುಂಬದವರು, ಗಣ್ಯರ ಅಂತಿಮ ದರ್ಶನದ ಬಳಿಕ ಅವರ ದೇಹವನ್ನು ಆಸ್ಪತ್ರೆಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಸ್ವಾಮಿ ಅವರ ಮ್ಯಾನೇಜರ್ ರವಿ ಸುಬ್ರಮಣ್ಯ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಅಂತಿಮ ದರ್ಶನ : ಕೆ.ಎಸ್.ಎಲ್.ಸ್ವಾಮಿ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ರವೀಂದ್ರ ಕಲಾಕ್ಷೇತ್ರದ ಹಿಂಭಾಗದ ಸಂಸ ಬಯಲು ರಂಗಮಂದಿರದಲ್ಲಿ ಇಡಲಾಗುತ್ತದೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 6 ಗಂಟೆಯ ತನಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕುಟುಂಬದವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

    ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಕೆ.ಎಸ್‌.ಎಲ್‌.ಸ್ವಾಮಿ ಅವರ ಹುಟ್ಟೂರು. ಜಿ.ವಿ.ಅಯ್ಯರ್ ಮತ್ತು ಎಂ.ಆರ್.ವಿಠಲ್ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ರವಿ ಅವರು ತೂಗುದೀಪ, ಗಾಂಧಿನಗರ, ಮಲಯ ಮಾರುತ ಸೇರಿದಂತೆ 30ಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶಿಸಿದ್ದರು.

    ತಮ್ಮ ಗುರು ಪುಟ್ಟಣ್ಣ ಕಣಗಾಲ್ ಅವರ ನಿಧನದಿಂದ ಅಪೂರ್ಣಗೊಂಡಿದ್ದ ಮಸಣದ ಹೂವು ಮತ್ತು ಸಾವಿರ ಮೆಟ್ಟಿಲು ಚಿತ್ರಗಳನ್ನು ಮುಂದುವರೆಸಿ, ಪೂರ್ಣಗೊಳಿಸಿದ್ದರು. ನಿರ್ಮಾಪಕರಾಗಿ, ನಟರಾಗಿ, ನಿರ್ದೇಶಕರಾಗಿ ಕೆ.ಎಸ್.ಎಲ್.ಸ್ವಾಮಿ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಹಿರಿಯ ನಟಿ ಬಿ.ವಿ.ರಾಧ ಅವರು ಕೆ.ಎಸ್.ಸ್ವಾಮಿ ಅವರ ಪತ್ನಿ.

    English summary
    Senior Kannada film director Kikkeri Shamanna Lakshminarasimha Swamy (K.S.L.Swamy (77)) passed away in Bengaluru on October 20, Tuesday early morning.
    Tuesday, October 20, 2015, 10:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X