ಅಲ್ಪಕಾಲೀನ ಅಮೆರಿಕಾ ಬದುಕು ಅವಳಿಗೆ ಕಹಿ ಉಣಿಸಿತ್ತು- ನಾಗತಿಹಳ್ಳಿ ಚಂದ್ರಶೇಖರ್..!
ನನ್ನ ಗುರುತು ಕನ್ನಡ .. ನನ್ನ ಅಸ್ತಿತ್ವ ಕನ್ನಡ .. ಎಂದು ಕನ್ನಡವನ್ನೇ ಉಸಿರಾಗಿಸಿಕೊಂಡಿದ್ದ ಅಪರ್ಣಾ, ಬಾಳ ನಿರೂಪಣೆಯನ್ನು ಮುಗಿಸಿ ಬಾರದ ಲೋಕಕ್ಕೆ ಹೋಗಿದ್ದಾರೆ. ಅನೇಕರನ್ನು ದುಃಖದ ಕಡಲಲ್ಲಿ ಮುಳುಗಿಸಿ ನಿರ್ಗಮಿಸಿದ್ದಾರೆ.
ಅಪರ್ಣಾ ನಮ್ಮ ನಡುವೆ ಇಲ್ಲವೆನ್ನುವ ಕಹಿ ಸತ್ಯವನ್ನು ಇವತ್ತು ಕೂಡ ಅರಗಿಸಿಕೊಳ್ಳಲು ಅನೇಕರಿಗೆ ಸಾಧ್ಯವಾಗುತ್ತಿಲ್ಲ. ಜೀವನವೇ ಒಂದು ನಿತ್ಯೋತ್ಸವ ಎನ್ನುತ್ತಿದ್ದ ನಿರೂಪಕಿ ಅಪರ್ಣಾ ವಿದಾಯದಿಂದ ಅನೇಕ ತಾರೆಯರ ಮನ ಮರಗುತ್ತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಪರ್ಣಾ ಅವರನ್ನು ನೆನೆದು ಭಾವುಕರಗಿದ್ದಾರೆ. ಹೆಮ್ಮೆಯ ಕನ್ನಡತಿಗೆ ಅಕ್ಷರ ನಮನ ಸಲ್ಲಿಸಿದ್ದಾರೆ.

ಇನ್ನೇನು ಕಾರ್ಯಕ್ರಮಕ್ಕೆ ಹೊರಡಬೇಕೆಂಬಂತೆ ಹಸನ್ಮುಖಿಯಾಗಿ ಮಲ್ಲಿಗೆ ಮುಡಿದು ಶವಪೆಟ್ಟಿಗೆಯೊಳಗೆ ಮಲಗಿದ್ದ ಅಪರ್ಣಾಳನ್ನು ಕಂಡಾಗ ಅಸಂಖ್ಯ ನೆನಪುಗಳು ಅಶ್ರು ರೂಪದಲ್ಲಿ ಹೊರಬರುತ್ತಿವೆ ಎಂದು ತಮ್ಮ ಬರಹವನ್ನು ಆರಂಭಿಸಿರುವ ನಾಗತಿಹಳ್ಳಿ ಚಂದ್ರಶೇಖರ್, ನನ್ನ ಬರವಣಿಗೆ ಎಂದರೆ ಆಕೆಗೆ ಅಚ್ಚುಮೆಚ್ಚು. ನನ್ನ ಕಥೆ-ಕಾದಂಬರಿಗಳ ಕೆಲ ಸಾಲುಗಳನ್ನು ಕಂಠಪಾಠ ಮಾಡಿದಂತೆ ಒಪ್ಪಿಸುತ್ತಿದ್ದಳು. 'ಚುಕ್ಕಿ ಚಂದ್ರಮರ ನಾಡಿನಲ್ಲಿ' ಆಕೆಯ ಮೆಚ್ಚಿನ ಕಾದಂಬರಿ. ಅದನ್ನು ಯಾವುದೋ ಹುಡುಗಿ ಬರೆದು ಅದು ನನ್ನ ಹೆಸರಲ್ಲಿ ಅಚ್ಚಾಗಿದೆ ಎಂದು ಛೇಡಿಸುತ್ತಿದ್ದಳು. ಆಗ ನಾನು ಬರೆದ ಕಾಗದಗಳನ್ನು ಬಹಳ ಕಾಲ ಕಾದಿರಿಸಿದ್ದಳೆಂದು ವಸ್ತಾರೆ ಹೇಳುತ್ತಿದ್ದರು ಎಂದು ತಮ್ಮ ಮನದ ಮಾತುಗಳಿಗೆ ಅಕ್ಷರಶ ರೂಪ ಕೊಟ್ಟಿದ್ದಾರೆ.
ಮುಂದುವರೆದು.. ಅಲ್ಪಕಾಲೀನ ಅಮೆರಿಕಾ ಬದುಕು ಅವಳಿಗೆ ಕಹಿ ಉಣಿಸಿತ್ತು. ಸಾಹಿತ್ಯ, ಸಂಗೀತ, ರಂಗಭೂಮಿ, ಕಿರುತೆರೆ, ಸಿನಿಮಾ ಹೀಗೆ ಬಹುವಿಧ ಆಸಕ್ತಿಗಳಿಂದ ಅಲಂಕೃತಳಾಗಿದ್ದ ಅಪರ್ಣಾ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳ ಅಸ್ಖಲಿತ, ಪ್ರೌಢ ಮತ್ತು ಭಾವಪೂರ್ಣನಿರೂಪಣೆಗೆ ಮಾದರಿಯಾಗಿದ್ದಳು. ಆಕೆಯ ಅನಾರೋಗ್ಯದ ಸಂಗತಿಯನ್ನು ನೆರೆಮನೆಯಲ್ಲಿರುವ ನನಗೂ ತಿಳಿಸದ ಸ್ವಾಭಿಮಾನಿ. ಮುಂಜಾನೆಯ ನನ್ನ ಕೆಲವು ವಾಕಿಂಗ್ ನಲ್ಲಿ ಮಹಡಿಯಿಂದ ಮುಗುಳ್ನಗೆಯೊಡನೆ ಕೈ ಬೀಸುತ್ತಿದ್ದ ಈ ಸಾಹಿತ್ಯಾಭಿಮಾನಿ ಇನ್ನಿಲ್ಲ. ತನ್ನ ಬದುಕೆಂಬ ಸಮಾರಂಭದ ಕೊನೆಯ ವಂದನಾರ್ಪಣೆ ಹೇಳಿ ಹೋದ ಅಪರ್ಣಾಗೆ ನನ್ನ ಅಶ್ರುತರ್ಪಣʼʼಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಕೇವಲ ನಾಗತಿಹಳ್ಳಿ ಚಂದ್ರಶೇಖರ್ ಅವರಷ್ಟೇ ಅಲ್ಲ ಕನ್ನಡ ಚಿತ್ರರಂಗದ ಮತ್ತು ಕಿರುತೆರೆಯ ಅನೇಕರು ಅಪರ್ಣಾ ಅವರನ್ನು ನೆನೆದು ಭಾವುಕರಾಗಿದ್ಧಾರೆ. ಅವರ ಜೊತೆ ಕಳೆದ ಸುಂದರ ಕ್ಷಣಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಮೆಲುಕು ಹಾಕಿದ್ದಾರೆ. ಅಪರ್ಣಾ ಅವರನ್ನ ಕನ್ನಡದ ನಿಘಂಟು ಅಂತ ಹೇಳಿದ್ರೆ ತಪ್ಪಾಗಲ್ಲ. ನಿಘಂಟಿನ ಹಾಗೆಯೇ ಕನ್ನಡ ಭಾಷಾಜ್ಞಾನ ಅವರಿಗಿತ್ತು ಎಂದು ಹಿರಿಯ ನಟಿ ಸುಧಾರಾಣಿ ಉಲ್ಲೇಖಿಸಿದ್ದಾರೆ. ನಿಮ್ಮ ನಿಷ್ಕಲ್ಮಶ "ನಗು" "ನಡತೆ " "ಸ್ವಭಾವ "ಎಲ್ಲವು ಪದಗಳಲ್ಲಿ ಹೇಳಲಾರೆನು ನಿಮ್ಮೊಂದಿಗೆ ಕಳೆದ ಕೆಲವು ಸವಿ ನೆನಪುಗಳು ಮನಸ್ಸಿನಲ್ಲಿ ಅಚ್ಚಳಿಯದೆ ಭಾವಚಿತ್ರ ವಾಗಿ ಎಂದೆಂದಿಗೂ ಮನದಾಳದಲ್ಲಿ ಉಳಿದಿದೆ ಎಂದು ನಟಿ ರಜಿನಿ ಭಾವುಕರಾಗಿದ್ದಾರೆ.
ಇನ್ನೂ ಮಜಾ ಟಾಕೀಸ್ ಕಾರ್ಯಕ್ರಮದಲ್ಲಿ ಅಪರ್ಣಾ ಅವರ ಜೊತೆ ಅಭಿನಯಿಸಿದ್ದ ಶ್ವೇತಾ ಚೆಂಗಪ್ಪ, ಅಪರ್ಣಾ ಅಕ್ಕ .ಬಹುಶಃ ನಿಮ್ಮನ್ನ ಅಕ್ಕ ಅಂತ ಕರೆದಷ್ಟು ನಾನು ಯಾರನ್ನೂ ಅಕ್ಕ ಅಂತ ಕರೆದಿಲ್ಲ. ನಿಮ್ಮ ಜೊತೆ ಕಳೆದ ಪ್ರತಿ ಕ್ಷಣ ನಗುವಿನ ಅಲೆ...ಪ್ರತಿಯೊಂದು ನೆನಪು ನನ್ನ ಕೊನೆಯ ಉಸಿರಿನ ವರೆಗೂ ಶಾಶ್ವತವಾಗಿ ನನ್ನ ಜೊತೆ ಇರುತ್ತೆ.ತುಂಬಾ ಬೇಗ ಹೊರಟ್ ಬಿಟ್ರಿ..ಹೋಗಿ ಬನ್ನಿ ನಮ್ಮ ಪ್ರೀತಿಯ ಕನ್ನಡತಿ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ಧಾರೆ.


Click it and Unblock the Notifications











