'ಇವತ್ತು ಇವ್ಳಿರ್ತಾಳೆ ನಾಳೆ ಇನ್ನೊಬ್ಳು' ಅಂತ ಸೆಲೆಬ್ರಿಟಿಯೇ ಮಾತನಾಡುವಾಗ ಫ್ಯಾನ್ಸ್ ಇನ್ನು ಹೇಗೆ ಮಾತನಾಡ್ತಾರೆ?
ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಬಗ್ಗೆ ಗಜಪಡೆ ಟ್ವಿಟರ್ ಪೇಜ್ನಿಂದ ಮಾಡಿದ್ದ ಅವಹೇಳನಕಾರಿ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪುನೀತ್ ರಾಜ್ಕುಮಾರ್ ಅಭಿಮಾನಿಗಳು, ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೆಣ್ಣಿನ ಬಗ್ಗೆ ಇಷ್ಟು ಕೀಳುಮಟ್ಟದಲ್ಲಿ ಮಾತನಾಡುವುದು ಸರಿಯಲ್ಲ ಎಂದು ಬೇಸರ ಹೊರ ಹಾಕುತ್ತಿದ್ದಾರೆ.
"ಗಂಡ ಇಲ್ಲದ ಮಹಿಳೆಯನ್ನು ಶುಭ ಕಾರ್ಯಕ್ಕೆ ಕರೆಸಿದ್ದರಿಂದಲೇ ಆರ್ಸಿಬಿ ಪದೇ ಪದೆ ಸೋಲುತ್ತಿದೆ" ಎಂದು ಕೀಳುಮಟ್ಟದ ಪದಗಳನ್ನು ಬಳಸಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ನಿಂದಿಸಲಾಗಿದೆ. ಗಜಪಡೆ ಎನ್ನುವ ಟ್ವಿಟರ್ ಖಾತೆಯಲ್ಲಿ ಈ ಪೋಸ್ಟ್ ಆಗಿದ್ದು ಆತ ದರ್ಶನ್ ಅಭಿಮಾನಿ ಎನ್ನುವ ಆರೋಪ ಕೇಳಿಬರುತ್ತಿದೆ. ಈಗಾಗಲೇ ಈ ಸಂಬಂಧ ಪುನೀತ್ ಅಭಿಮಾನಿಗಳು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಆತ ಯಾರು ಎನ್ನುವುದು ಇನ್ನಷ್ಟೆ ಗೊತ್ತಾಗಬೇಕಿದೆ.

ಏಪ್ರಿಲ್ 3ರಂದು ಈ ಪೋಸ್ಟ್ ಮಾಡಲಾಗಿತ್ತು. ಬಳಿಕ ಗಜಪಡೆ ಎನ್ನುವ ಟ್ವಿಟ್ಟರ್ ಖಾತೆಯನ್ನು ಸುದೀಪ್ ಅಭಿಮಾನಿ ಎಂದು ಬದಲಿಸಲಾಯಿತು. ಈ ಮೂಲಕ ಸುದೀಪ್ ಹಾಗೂ ಪುನೀತ್ ಅಭಿಮಾನಿಗಳ ನಡುವೆ ಕೆಸರೆರಚಾಟಕ್ಕೆ ಕಾರಣವಾಯಿತು. ಆದರೆ ಅದಕ್ಕೂ ಮುನ್ನ ಮೂಲ ಪೋಸ್ಟ್ನ ಸ್ಕ್ರೀನ್ ಶಾಟ್ ವೈರಲ್ ಆಗತೊಡಗಿತು. ಸ್ಕ್ರೀನ್ ಶಾಟ್ ವೈರಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಕಿಡಿಗೇಡಿಯ ವಿರುದ್ಧ ಅಸಮಾಧಾನ ಹೆಚ್ಚಾಯಿತು.
ಈಗಾಗಲೇ ಬಿಗ್ಬಾಸ್ ಖ್ಯಾತಿಯ ಪ್ರಥಮ್, ಆಂಕರ್ ಅನುಶ್ರೀ ಕೂಡ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಕೆಂಡಕಾರಿದ್ದಾರೆ. ಇದೀಗ ನಿರ್ದೇಶಕ ಹಾಗೂ ಒಂದ್ಕಾಲದಲ್ಲಿ ಡಾ. ರಾಜ್ಕುಮಾರ್ ಕುಟುಂಬಕ್ಕೆ ಆಪ್ತರು ಆಗಿದ್ದ ಪ್ರಕಾಶ್ ರಾಜ್ ಮೇಹು ಈ ಪ್ರತಿಕ್ರಿಯಿಸಿದ್ದಾರೆ. ಫೇಸ್ಬುಕ್ನಲ್ಲಿ ಸುದೀರ್ಘ ಪೋಸ್ಟ್ ಮಾಡಿದ್ದಾರೆ.
"ಹಿಂದೆ, ಹೀರೋ ಇಸಂ ಸಿನಿಮಾ ಅಂದ್ರೆ "ಸಂಪತ್ತಿಗೆ ಸವಾಲ್" ಥರ ಇರುತ್ತಿತ್ತು. ಅಲ್ಲಿ ಭದ್ರ, ಸಾಹುಕಾರ್ ಸಿದ್ದಪ್ಪನ ಮೇಲೆ ಸವಾಲ್ ಹಾಕುತ್ತಿದ್ದ ಅಷ್ಟೇ. ಅದು ರಾಜಕುಮಾರ್ ಅವರೂ ಅಲ್ಲ ವಜ್ರಮುನಿಯವರೂ ಅಲ್ಲ. ಅವು ಕೇವಲ ಪಾತ್ರಗಳು ಅಷ್ಟೇ"

"ಈಗ ಹಾಗಲ್ಲ, ದರ್ಶನ್ ಏನೋ ಡೈಲಾಗ್ ಹೊಡೆಯುತ್ತಿದ್ದಾರೆ ಅಂದರೆ ಅದು ದರ್ಶನ್ನೇ ಹೊಡಯುವ ಡೈಲಾಗ್, ಅದೂ ಕೂಡ ಎದುರುಗಡೆ ಇರುವ ಪಾತ್ರಕ್ಕೋ, ನಟನಿಗೋ ಅಲ್ಲಾ ಬದಲಾಗಿ ಸುದೀಪ್ ಅವರಿಗೋ, ಅಣ್ಣಾವ್ರ ಕುಟುಂಬದವರಿಗೋ, ಯಶ್ ಅವರಿಗೋ ಅಥವಾ ಇನ್ಯಾವುದೋ ಸ್ಟಾರ್ಗೋ ಆಗಿರುತ್ತದೆ. ಅದೇರೀತಿ ಶಿವಣ್ಣ,ಸುದೀಪ್,ಯಶ್,ಇನ್ಯಾರೇ ಆಗಿರಲಿ ಅವರ ಹೀರೋ ಇಸಂ ಡೈಲಾಗ್ಗಳು ಸಹ ಇನ್ಯಾವುದೋ ಸ್ಟಾರ್ಗೆ ಕೊಡುವ ಟಾಂಗೇ ಆಗಿರುತ್ತವೆ. ಅಥವಾ ಅವರ ಅಭಿಮಾನಿಗಳು ಹಾಗೆ ಭಾವಿಸುತ್ತಾರೆ. ಅದಕ್ಕೆ ಇತ್ತೀಚಿನ ಯುವರಾಜ್ ಕುಮಾರ್ ಅವರೂ ಕೂಡ ಹೊರತಲ್ಲ.. ಈ ಬೆಳವಣಿಗೆ ಕನ್ನಡ ಚಿತ್ರರಂಗಕ್ಕೆ ಮಾರಕ."
"ತೆರೆಯ ಮೇಲೆ ಸ್ಟಾರ್ಗಳು ಹೀಗೆ ಕಚ್ಚಾಡಿದರೆ, ಸೋಷಿಯಲ್ ಮೀಡಿಯಾದಲ್ಲಿ ಅವರ ಅಭಿಮಾನಿಗಳದ್ದು ಹದ್ದು ಮೀರಿದ ವರ್ತನೆ, ಅಸಹ್ಯಕರವಾದ ಭಾಷೆ ಇತ್ಯಾದಿ ಇತ್ಯಾದಿ. 'ಇವತ್ತು ಇವ್ಳಿರ್ತಾಳೆ ನಾಳೆ ಇನ್ನೊಬ್ಳು' ಅಂತ ವೇದಿಕೆ ಮೇಲೆ ಸೆಲೆಬ್ರಿಟಿಯೇ ಮಾತನಾಡುವಾಗ ಇನ್ನು ಅಂತವರ ಅಭಿಮಾನಿಗಳು ಇನ್ನು ಹೇಗೆ ಮಾತನಾಡುತ್ತಾರೆ ಅನ್ನುವುದಕ್ಕೆ ಇತ್ತೀಚೆಗೆ ಅಶ್ವಿನಿಯವರ ಬಗ್ಗೆ ಮಾತನಾಡಿರುವ ಅಮಾನವೀಯ ಹೇಳಿಕೆಯೇ ಸಾಕ್ಷಿ. ಈ ಬೆಳವಣಿಗೆ ಕೇವಲ ಸಿನಿಮಾಗಳಿಗೆ ಮಾತ್ರವಲ್ಲ ಇಡೀ ಕನ್ನಡ ಸಂಸ್ಕೃತಿಗೇ ಎಸಗುತ್ತಿರುವ ಅಪಚಾರ. ಇಂತಹ ಮನಸ್ಥಿತಿಗೆ ಧಿಕ್ಕಾರ...ಧಿಕ್ಕಾರ...ಧಿಕ್ಕಾರ..." ಎಂದು ಪ್ರಕಾಶ್ ರಾಜ್ ಮೇಹು ಬರೆದುಕೊಂಡಿದ್ದಾರೆ.
ಪ್ರಕಾಶ್ ರಾಜ್ ಮೇಹು ಬಹಳ ವರ್ಷಗಳ ಕಾಲ ಡಾ. ರಾಜ್ಕುಮಾರ್ ಒಡನಾಟದಲ್ಲಿದ್ದರು. ದೊಡ್ಮನೆ ಬ್ಯಾನರ್ಗಳಲ್ಲಿ ನಿರ್ಮಾಣವಾಗುತ್ತಿದ್ದ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದರು. 'ಪರಮಾತ್ಮ' ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಸ್ನೇಹಿತನ ಪಾತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ 'ಡಿಎನ್ಎ' ಎನ್ನುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಕೆಲ ದಿನಗಳ ಹಿಂದೆ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಕುರಿತು ನಿರ್ದೇಶಕ ಪ್ರಕಾಶ್ ರಾಜ್ ಮೇಹು ಮಾಡಿದ್ದ ಕಾಮೆಂಟ್ಗಳು ವೈರಲ್ ಆಗಿತ್ತು.


Click it and Unblock the Notifications











