Don't Miss!
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಪ್ಪು ಲೈಫ್ ಜರ್ನಿ ಸೆಲೆಬ್ರೆಟ್ ಮಾಡಲು ಒಂದೆಡೆ ಸೇರುತ್ತಿದೆ ಇಡೀ ಚಿತ್ರರಂಗ: ಇದು ಮೆಗಾ ಕಾರ್ಯಕ್ರಮ
ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿದ ಬಳಿಕ ಅವರ ಒಂದೊಂದೇ ಕನಸುಗಳು ಅನಾವರಣಗೊಳ್ಳುತ್ತಿವೆ. 'ಗಂಧದ ಗುಡಿ'ಯಂತಹ ಅದ್ಭುತ ಕನಸಿನ ಒಂದು ಝಲಕ್ ನೋಡಿ ಕನ್ನಡ ಜನತೆ ಬೆರಗಾಗಿದೆ. ಅಪ್ಪು ದೂರವಾದ ನೋವಿನಲ್ಲಿರುವ ಅಭಿಮಾನಿಗಳಿಗೆ 'ಗಂಧದ ಗುಡಿ' ಟೀಸರ್ ತಮ್ಮ ನೆಚ್ಚಿನ ನಟನ ಬಗ್ಗೆ ಹೆಮ್ಮೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಇದೇ ವೇಳೆ ಮತ್ತೊಂದು ಅದ್ದೂರಿ ಕಾರ್ಯಕ್ರಮಕ್ಕೂ ವೇದಿಕೆ ಸಜ್ಜಾಗುತ್ತಿದೆ.
ಅಪ್ಪು ವ್ಯಕ್ತಿತ್ವವೇ ಅಂತಹದ್ದು. ಸದಾ ನಗುಮುಖದ ಯುವರತ್ನ. ನಟನೆಗಿಳಿದರೆ ಥೇಟ್ ರಾಜಕುಮಾರ. ಸಮಾಜ ಸೇವೆಯಲ್ಲಿ ಅಪ್ಪನ ಸಿನಿಮಾ ಕಸ್ತೂರಿ ನಿವಾಸ ನೆನಪಿಸಿ ಹೋದ ಅಪ್ಪು ಎಂದೆಂದಿಗೂ ಅಜರಾಮರ. ಕೇವಲ ನಟನಾಗಿ ಮಾತ್ರವಲ್ಲದೆ, ಸಮಾಜಕ್ಕೂ ತನ್ನ ಕೈಲಾದ ಸಹಾಯ ಮಾಡಿ ಹೋದ ಈ ಚೇತನದ 46 ವರ್ಷಗಳ ಜರ್ನಿಯನ್ನು ಸೆಲೆಬ್ರೆಟ್ ಮಾಡಲು ಸದ್ದಿಲ್ಲದೆ ವೇದಿಕೆಯೊಂದು ರೆಡಿಯಾಗುತ್ತಿದೆ.
ಅಪ್ಪು ಜರ್ನಿ ಸಂಭ್ರಮಿಸಲು ಒಂದಾಗುತ್ತಿದೆ ಕನ್ನಡ ಚಿತ್ರರಂಗ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಜರ್ನಿ ನಿಜಕ್ಕೂ ಅವರಷ್ಟೇ ಪವರ್ಫುಲ್. ಬದುಕಿದ 46 ವರುಷವೂ ರೋಚಕ ಅಂತ ಅನಿಸುವ ಪುನೀತ್ ಬದುಕು. ಬಾಲ ನಟನಾಗಿಯೇ ರಾಷ್ಟ್ರ ಪ್ರಶಸ್ತಿ ಪಡೆದ ನಟ. ಅಲ್ಪ ಸಿನಿಮಾ ಯಾನದಲ್ಲೇ ಅಪ್ಪನಷ್ಟೇ ಹೆಸರು ಮಾಡಿದ ಪ್ರತಿಭೆ. ಸಹಾಯ ಅಂತ ಬಂದವರಿಗೆ ಹಿಂತಿರುಗಿಸಿ ಕಳಿಸಿದ್ದೇ ಇಲ್ಲ. ಒಳ್ಳೆ ಕೆಲಸಗಳಿಗೆ ಸದಾ ಕೈ ಚಾಚುತ್ತಿದ್ದ ಪವರ್ಸ್ಟಾರ್ ನಿಜಕ್ಕೂ ಕನ್ನಡ ಚಿತ್ರರಂಗದ ರತ್ನ. ಕನ್ನಡಿಗರ ಪಾಲಿಗೆ ಕರ್ನಾಟಕ ರತ್ನ. ಹೀಗಾಗಿ ಅಪ್ಪುವಿನ ಅಮೋಘ ಜರ್ನಿಯನ್ನು ಸೆಲೆಬ್ರೆಟ್ ಮಾಡಲು ಇಡೀ ಚಿತ್ರರಂಗ ಶೀಘ್ರದಲ್ಲಿಯೇ ಒಂದೆಡೆ ಸೇರಲಿದೆ. ಈಗಾಗಲೇ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಅವರ ಕುಟುಂಬಕ್ಕೆ ಆಹ್ವಾನ ನೀಡಲಾಗಿದೆ.
ಅಪ್ಪು ನಾಯಕಿಯರು, ಸಂಗೀತ ನಿರ್ದೇಶಕರು ಹಾಗೂ ನಿರ್ದೇಶಕರ ಸಂಗಮ
ಇದು ಅಪ್ಪು ನಮನ ಕಾರ್ಯಕ್ರಮ ಅಲ್ಲ. ಬದಲಾಗಿ ಅವರ ಪವರ್ಫುಲ್ ಲೈಫ್ ಜರ್ನಿಯನ್ನು ನೆನಪಿಸುವಂತಹ ಕಾರ್ಯಕ್ರಮ. ಹೀಗಾಗಿ ಇದೂವರೆಗೂ ಅಪ್ಪು ಜೊತೆ ನಟಿಸಿದ ನಾಯಕಿಯರು ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಪುನೀತ್ ಸಿನಿಮಾಗೆ ಸಂಗೀತ ನೀಡಿದ ಸಂಗೀತ ನಿರ್ದೇಶಕರು, ಡೈರೆಕ್ಟರ್ಗಳು ಈ ವೇದಿಕೆ ಮೇಲೆ ಅಪ್ಪು ಜೊತೆಗಿನ ಸಿನಿಮಾ ಜರ್ನಿಯನ್ನು ಸೆಲೆಬ್ರೆಟ್ ಮಾಡಲಿದ್ದಾರೆ. ಇದೇ ವೇದಿಕೆ ಮೇಲೆ ಕ್ರೇಜಿಸ್ಟಾರ್ ರವಿಚಂದ್ರನ್ ಭಾಗವಹಿಸುವ ಸಾಧ್ಯತೆ ಕೂಡ ಇದೆ.
ಬೃಹತ್ ಕಾರ್ಯಕ್ರಮಕ್ಕೆ 3 ಸಂಸ್ಥೆ ಸಾಥ್
ಪುನೀತ್ ಜರ್ನಿಯನ್ನು ಸೆಲೆಬ್ರೆಟ್ ಮಾಡುವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಮೂರು ಸಂಸ್ಥೆಗಳು ಈ ಸಂಭ್ರಮ ನಡೆಸಲು ಮುಂದೆ ಬಂದಿವೆ. ಜಿಕೆಜಿಎಸ್ ಚಾರಿಟಬಲ್ ಟ್ರಸ್ಟ್, ವರುಣ್ ಸುಡಿಯೋಸ್ ಹಾಗೂ ಜೀ ಕನ್ನಡ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಪ್ಪು ಬಾಲ್ಯದಿಂದ ಆರಂಭ ಆಗಿ ಅವರ ಕೊನೆ ದಿನದವರೆಗೆ ಅವರು ಮಾಡಿದ ಅದ್ಭುತ ಕೆಲಸಗಳನ್ನು ನೆನಪಿಸಿಕೊಳ್ಳಲಾಗುತ್ತೆ. ಮುಂಬರುವ ಕ್ರಿಸ್ಮಸ್ ಹಬ್ಬದೊಳಗೆ ಅಪ್ಪು ಲೈಫ್ ಜರ್ನಿ ಕಾರ್ಯಕ್ರಮ ನಡೆಯಲಿದೆ. ಇದೇ ವೇದಿಕೆ ಅಪ್ಪು ಸರ್ಕಾರದ ಕಾರ್ಯಕ್ರಮಗಳಿಗೆ ಹಣ ಪಡೆಯದೆ ಮಾಡಿದ ಸಹಾಯವನ್ನು ಈ ವೇದಿಕೆ ಮೇಲೆ ಸ್ಮರಿಸಲಾಗುತ್ತದೆ.
ಅಪ್ಪು ಲೈಫ್ ಜರ್ನಿ ಜೀ ಕನ್ನಡದಲ್ಲಿ ಪ್ರಸಾರ
ಅಪ್ಪು ಲೈಫ್ ಜರ್ನಿ ಕಾರ್ಯಕ್ರಮ ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ. ಕ್ರಿಸ್ಮಸ್ ಹಬ್ಬದ ವೇಳೆ ಕಾರ್ಯಕ್ರಮವನ್ನು ಅಭಿಮಾನಿಗಳಿಗೆ ಅರ್ಪಿಸಲು ಸಿದ್ಧತೆ ನಡೆಯುತ್ತಿದೆ. ಆದರೆ, ಈ ಕಾರ್ಯಕ್ರಮ ಯಾವಾಗ ನಡೆಯುತ್ತೆ? ಎಲ್ಲಿ ನಡೆಯುತ್ತೆ? ಅನ್ನುವ ಬಗ್ಗೆ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ, ಇದೊಂದು ಅದ್ದೂರಿ ಕಾರ್ಯಕ್ರಮವೆಂದು ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಪುನೀತ್ ಅಭಿಮಾನಿಗಳಿಗೆ ಕ್ರಿಸ್ಮಸ್ ಹಬ್ಬದಲ್ಲಿ ಅಪ್ಪು ಜರ್ನಿಯನ್ನು ಮೆಲುಕು ಹಾಕಬಹುದು.