'ಎಸ್ಪಿಬಿ ಗುಣಮುಖರಾಗಿ ಬನ್ನಿ': ಯಶ್, ಸುಮಲತಾ ಸೇರಿದಂತೆ ಚಿತ್ರರಂಗದಿಂದ ಪ್ರಾರ್ಥನೆ
ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣಲಿ, ಆದಷ್ಟೂ ಬೇಗ ಚೇತರಿಕೆ ಕಂಡು ಮತ್ತೆ ಹಾಡುವಂತಾಗಲಿ ಎಂದು ಕನ್ನಡ ಚಿತ್ರರಂಗದ ಪರವಾಗಿ ಸಾಮೂಹಿಕ ಪ್ರಾರ್ಥನೆ ಮಾಡಲಾಗಿದೆ.
Recommended Video
ಬೆಂಗಳೂರಿನ ಕಲಾವಿದರ ಸಂಘದ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನಟ ದೊಡ್ಡಣ್ಣ, ಸಂಸದೆ-ನಟಿ ಸುಮಲತಾ, ಯಶ್, ಗಾಯಕ ವಿಜಯ್ ಪ್ರಕಾಶ್, ಹಂಸಲೇಖ, ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಮುಖ್ಯಮಂತ್ರಿ ಚಂದ್ರು, ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಭಾಗವಹಿಸಿ ಎಸ್ಪಿಬಿ ಆರೋಗ್ಯ ಸುಧಾರಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.
ಈ ವೇಳೆ ಮಾತನಾಡಿದ ನಟಿ-ಸಂಸದೆ ಸುಮಲತಾ ''ಎಸ್ಪಿಬಿ ಅವರ ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆಯಿಂದ ಅವರು ಮತ್ತೆ ಹಾಡುವಂತೆ ಆಗುತ್ತೆ, ನಾನು ಆ ದೇವರಲ್ಲಿ ಬೇಡಿ ಕೊಳ್ಳುತ್ತೇನೆ. ಬಾಲು ಅವರು ಬರಿ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ, ನಮ್ಮೆಲ್ಲರ ಅಮೂಲ್ಯವಾದ ಆಸ್ತಿ. ಅವರನ್ನು ಕಳೆದುಕೊಳ್ಳಲು ನಾನು ಸಿದ್ದವಿಲ್ಲ'' ಎಂದರು.

ರಾಕಿಂಗ್ ಸ್ಟಾರ್ ಯಶ್ ಮಾತನಾಡಿ 'ಚಿಕ್ಕ ವಯಸ್ಸಿನಿಂದ ಅವರ ಹಾಡುಗಳನ್ನು ಕೇಳುತ್ತಾ ಬೆಳೆದಿದ್ದೇವೆ. ಸಿನಿಮಾ ಎನ್ನುವುದು ಒಂದು ಉದ್ಯಮ. ಈ ಉದ್ಯಮದಲ್ಲಿ ಒಬ್ಬರಿಗೆ ಕಷ್ಟ ಬಂದಾಗ ಇಂತಹ ಕಾರ್ಯಕ್ರಮ ಮಾಡುವ ಮೂಲಕ ಇನ್ನೊಬ್ಬರ ನೋವಿನಲ್ಲಿ ಜೊತೆಯಾಗುವುದು ಒಳ್ಳೆಯ ನಡೆ. ಕರ್ನಾಟಕದ ಜೊತೆ ಎಸ್ಪಿಬಿ ಅವರು ಬೆರೆತು ಹೋಗಿದ್ದಾರೆ. ಎಸ್ಪಿಬಿ ಆದಷ್ಟೂ ಬೇಗ ಹಾಡುವಂತಾಗಲಿ'' ಎಂದು ಪ್ರಾರ್ಥಿಸಿದರು.

ಇನ್ನು ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ನಾವು ಚೆನ್ನೈಗೆ ಹೋಗಲು ನಿರ್ಧರಿಸಿದ್ದೆವು. ಆದರೆ, ಪ್ರಧಾನಿ ಮೋದಿ ಅವರೇ ಖುದ್ದು ಆಸ್ಪತ್ರೆಗೆ ಫೋನ್ ಮಾಡಿ, ಎಸ್ಪಿಬಿ ಅವರು ಚಿಕಿತ್ಸೆ ಪಡೆಯುತ್ತಿರುವ ಮಹಡಿಗೆ ಯಾರನ್ನು ಬಿಡಬಾರದು ಎಂದು ಸೂಚಿಸಿದ್ದಾರೆ ಎಂದು ತಿಳಿಯಿತು. ಹಾಗಾಗಿ, ಈ ಕಾರ್ಯಕ್ರಮ ಮೂಲಕ ಅವರ ಆರೋಗ್ಯ ಸುಧಾರಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ಆಗಸ್ಟ್ 5ನೇ ತಾರೀಕಿನಿಂದ ಚೆನ್ನೈನ ಎಂಜಿಎಂ ಹೆಲ್ತ್ ಕೇರ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್ಪಿಬಿ ಬಾಲಸುಪ್ರಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.


Click it and Unblock the Notifications











