Rakshit Shetty: "ವರ್ಷಕ್ಕೆ 200 ಸಿನ್ಮಾ ಮಾಡ್ತೀವಿ.. 10 ಸಿನ್ಮಾ ದುಡ್ಡು ವಾಪಸ್ ಬರಲ್ಲ": ರಕ್ಷಿತ್ ಶೆಟ್ಟಿ
ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ ನೂರಾರು ಸಿನಿಮಾಗಳು ಬಿಡುಗಡೆ ಆದ್ರು ಗೆಲುವಿನ ಪ್ರಮಾಣ ಕಡಿಮೆ ಎನ್ನುವ ವಾದ ಹಲವು ವರ್ಷಗಳಿಂದ ಕೇಳಿಬರ್ತಾನೆ ಇದೆ. ವರ್ಷಕ್ಕೆ ಒಂದೋ ಎರಡೂ ಬ್ಲಾಕ್ಬಸ್ಟರ್ ಸಿನಿಮಾಗಳು ಬಂದ್ರೆ ಉಳಿದವು ಹಾಕಿದ ಬಂಡವಾಳವನ್ನು ವಾಪಸ್ ತಂದುಕೊಡಲ್ಲ. ಕನ್ನಡ ಚಿತ್ರರಂಗದ ಸ್ಥಿತಿಗತಿ ಬಗ್ಗೆ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಮಾತುಗಳು ವೈರಲ್ ಆಗ್ತಿದೆ.
ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹೇಮಂತ್ ರಾವ್ ನಿರ್ದೇಶನದ ಈ ರೊಮ್ಯಾಂಟಿಕ್ ಲವ್ ಸ್ಟೋರಿಯಲ್ಲಿ ರಕ್ಷಿತ್ ಜೋಡಿಯಾಗಿ ರುಕ್ಮಿಣಿ ಮಿಂಚಿದ್ದಾರೆ. ಎರಡು ಭಾಗಗಳಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಮೊದಲ ಭಾಗ ಸದ್ಯ ಥಿಯೇಟರ್ಗಳಲ್ಲಿ ಸದ್ದು ಮಾಡ್ತಿದೆ. ಚಿತ್ರತಂಡ ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗಿ ಸಿನಿಮಾ ಬಗ್ಗೆ ಮಾತನಾಡಿದೆ.

ನಟನೆಯ ಜೊತೆ ಜೊತೆಗೆ ರಕ್ಷಿತ್ ಶೆಟ್ಟಿ ತಮ್ಮ ಕನಸಿನ ಸಿನಿಮಾಗಳನ್ನು ನಿರ್ದೇಶನ ಮಾಡಲು ಮುಂದಾಗಿದ್ದಾರೆ. 'ರಿಚರ್ಡ್ ಆಂಟನಿ', 'ಪುಣ್ಯಕೋಟಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟು ಹಾಕಿವೆ. ಜೊತೆಗೆ ತಮ್ಮದೇ ಪರಂವಃ ಬ್ಯಾನರ್ನಲ್ಲಿ ಹೊಸಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ದಾರೆ. "ಸಿನಿಮಾ ಈಗ ಗ್ಯಾಂಬ್ಲಿಂಗ್ ಅಲ್ಲ. ಒಳ್ಳೆ ಸ್ಕ್ರಿಪ್ಟ್ ಇದ್ದರೆ ನೀವು ಹಾಕಿದ ಹಣ ವಾಪಸ್ ತೆಗೆಯಬಹುದು. 3 ಫ್ಲಾಟ್ಪಾರ್ಮ್ನಲ್ಲಿ ಈಗ ಸಿನಿಮಾ ಬ್ಯುಸಿನೆಸ್ ನಡೆಯುತ್ತದೆ. ಥಿಯೇಟರ್, ಓಟಿಟಿ, ಸ್ಯಾಟಲೈಟ್ ಹೀಗೆ 3 ಕಡೆ ಸಿನಿಮಾ ರಿಲೀಸ್ ಆಗುತ್ತದೆ. ಒಳ್ಳೆ ಸಿನಿಮಾ ಮಾಡಿದರೆ ನಿಮ್ಮ ಹಣ ವಾಪಸ್ ಪಡೆಯಬಹುದು"
"ಕನ್ನಡ ಚಿತ್ರರಂಗಕ್ಕೆ 15ರಿಂದ 20ಜನ ಒಳ್ಳೆ ನಿರ್ದೇಶಕರು ಬೇಕಿದ್ದಾರೆ. ತಿಂಗಳಿಗೆ ಒಂದು ಒಳ್ಳೆ ಸಿನಿಮಾ, ಹಿಟ್ ಆಗುವಂತಹ ಸಿನಿಮಾ ಬರಲೇಬೇಕು. ನಾವು ವರ್ಷಕ್ಕೆ 200 ಸಿನ್ಮಾ ಮಾಡ್ತೀವಿ. ಅದರಲ್ಲಿ 10 ಸಿನಿಮಾ ನಾವು ಹಾಕಿದ ಹಣ ವಾಪಸ್ ತಂದುಕೊಡಲ್ಲ. ಇದು ಯಾವುದೇ ಇಂಡಸ್ಟ್ರಿಗಾದರೂ ಕೆಟ್ಟ ಸ್ಥಿತಿ. ಯಾಕಂದರೆ ಇಂಡಸ್ಟ್ರಿ ಹಂಗೆ ಇರಬಾರದು."
"ಯಾರೋ ರಿಯಲ್ ಎಸ್ಟೇಟ್ನವರು ಹಣ ತಂದು ಸಿನಿಮಾ ಮಾಡೋದು, ಬರುತ್ತೋ ಇಲ್ವೋ ನೋಡೋಣ ಅಂದ್ರೆ ಹೆಂಗೆ. ನಿಮ್ಮ ಹತ್ರ ಹೆಚ್ಚು ಹಣ ಇದ್ದು ತಂದು ಹಾಕಿ ವಾಪಸ್ ಬಂದಿಲ್ಲ ಓಕೆ, ಆದರೆ ಇಂಡಸ್ಟ್ರಿ ಹೆಸರು ಹಾಳಾಗುತ್ತದೆ. ನನ್ನ ಪ್ರಕಾರ ಕೋವಿಡ್ ಸಮಯದಲ್ಲಿ ಎಲ್ಲಾ ಫಿಲ್ಟರಿಂಗ್ ಆಗಿದೆ. ಎಲ್ಲರೂ ಈಗ ಫಿಲ್ಮ್ ಮೇಕರ್ಸ್ ಆಗೋಕ್ಕಾಗಲ್ಲ. ಆದರೆ ಟ್ಯಾಲೆಂಟ್ ಇದ್ದರೆ ಯಾರು ಬೇಕಾದರೂ ಫಿಲ್ಮ್ ಮೇಕರ್ ಆಗಬಹುದು."
"ಬರೀ 10 ಸಿನಿಮಾ ಹಣ ವಾಪಸ್ ಪಡೆದರೆ ಸಾಕಾಗಲ್ಲ. ಕರ್ನಾಟಕದಲ್ಲಿ ಥಿಯೇಟರ್ಗಳ ಸಂಖ್ಯೆ ಕಮ್ಮಿ ಆಗ್ತಿದೆ. ಅದಕ್ಕೆ ಕಾರಣ ಒಳ್ಳೆ ಸಿನಿಮಾಗಳು ನಿಯಮಿತವಾಗಿ ಬರ್ತಿಲ್ಲ. ಥಿಯೇಟರ್ ಇಲ್ದೆ ಇದ್ದರೆ ಸಿನಿಮಾ ಎಲ್ಲಿ ತೋರಿಸ್ತೀರಾ? ಮಲ್ಟಿಫ್ಲೆಕ್ಸ್ ಜಾಸ್ತಿ ಆಗುತ್ತಾ ಹೋಗುತ್ತೆ. ಅಲ್ಲೂ ಬೇರೆ ಲಾಂಗ್ವೇಜ್ ಸಿನಿಮಾನೇ ಬರ್ತಿದ್ರೆ, ಕನ್ನಡದವರು ಥಿಯೇಟರ್ಗೆ ಹೋಗಿ ಸಿನಿಮಾ ನೋಡುವ ಸಂಸ್ಕೃತಿ ನಾಶವಾಗುತ್ತದೆ."
"ಆಂಧ್ರದಲ್ಲಿ 2500 ಥಿಯೇಟರ್ಗಳಿವೆ. ಕರ್ನಾಟಕದಲ್ಲಿ ಬರೀ 800 ಥಿಯೇಟರ್ಗಳಿವೆ. ನಮ್ಮ ಜನಸಂಖ್ಯೆ ಆಂಧ್ರ ಜನಸಂಖ್ಯೆಗೆ ಹೋಲಿಸಿದರೂ ಇಲ್ಲಿರುವ ಥಿಯೇಟರ್ಗಳ ಸಂಖ್ಯೆ ಕಮ್ಮಿನೇ. ಕರ್ನಾಟಕದಲ್ಲಿ ಹೆಚ್ಚು ಮಲ್ಟಿಫ್ಲೆಕ್ಸ್ಗಳಿವೆ. ಹಾಗಾಗಿ ಪರವಾಗಿಲ್ಲ. ಆದರೆ ಮಲ್ಟಿಪ್ಲೆಕ್ಸ್ಗಳಲ್ಲಿ ಎಲ್ಲಾ ಭಾಷೆಯ ಸಿನಿಮಾಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಬೇರೆ ಭಾಷೆ ಸಿನಿಮಾ ರಿಲೀಸ್ ಬೇಡ ಎನ್ನುತ್ತಿಲ್ಲ. ಅದನ್ನು ಸವಾಲಾಗಿ ಸ್ವೀಕರಿಸೋಣ."
"ನಾವು ಬೇರೆ ಭಾಷೆ ಸಿನಿಮಾಗಳ ಜೊತೆ ಪೈಪೋಟಿ ನಡೆಸಬೇಕು, ಚಿತ್ರರಂಗ ಉಳಿಯಬೇಕು ಅಂದ್ರೆ 30 ಜನ ಒಳ್ಳೆ ನಿರ್ದೇಶಕರು ಬೇಕು. ಆಗ ತಿಂಗಳಿಗೆ ಒಂದೊಳ್ಳೆ ಸಿನಿಮಾ ನಿರೀಕ್ಷೆ ಮಾಡಬಹುದು. ಅದೇ ರೀತಿ ನಟ, ನಟಿಯರು ಕೂಡ ಬೇರೆ ಬೇರೆ ಜಾನರ್, ವಿಭಾಗಗಳಲ್ಲಿ ಬೇರೆ ಬೇರೆ ಕಲಾವಿದರು ಇರಬೇಕು. ಒಂದಿಪ್ಪತು ಜನ ಸ್ಟಾರ್ಗಳು, ನಟಿಯರು ಇದ್ದರೆ ಒಂದು ಸರಿಯಾದ ಇಂಡಸ್ಟ್ರಿ ಸಿದ್ಧವಾಗುತ್ತದೆ. ಒಳ್ಳೆ ಸಿನಿಮಾಗಳ ಬರುತ್ತದೆ" ಎಂದು ಸ್ಕ್ಯಾಂಡಿಮನ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ ವಿವರಿಸಿದ್ದಾರೆ.


Click it and Unblock the Notifications










