ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿದ ಚಿತ್ರರಂಗ
ಇತ್ತೀಚಿನ ದಿನಗಳಲ್ಲಿ ಸಿನಿಮಾ ಇಂಡಸ್ಟ್ರಿ ಬಿಟ್ಟು ಅಗಲಿದ ಕಲಾವಿದ, ನಿರ್ಮಾಪಕ, ತಂತ್ರಜ್ಞರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಬೆಂಗಳೂರಿನ ಶಿವಾನಂದ ವೃತ್ತದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್, ನಟಿ ತಾರಾ, ಜಯಮಾಲ ಸೇರಿದಂತೆ ಹಲವು ನಿರ್ದೇಶಕ-ನಿರ್ಮಾಪಕ, ವಿತರಕರು ಈ ಸಭೆಯಲ್ಲಿ ಭಾಗಿಯಾಗಿ ಸಂತಾಪ ಸೂಚಿಸಿದರು.
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್, ಹಿರಿಯ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್, ನಿರ್ಮಾಪಕ ಕೋಟಿ ರಾಮು ಅಗಲಿದ್ದರು. ಕವಿ ಸಿದ್ದಲಿಂಗಯ್ಯ, ಹಿರಿಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಸಹ ಇಹಲೋಕ ತ್ಯಜಿಸಿದ್ದರು. ಈ ಎಲ್ಲರ ಭಾವಚಿತ್ರಗಳನ್ನು ಪ್ರದರ್ಶಿಸಿ ಸಂತಾಪ ಸೂಚಿಸಲಾಯಿತು.

ಶ್ರದ್ಧಾಂಜಲಿ ಅರ್ಪಿಸಿ ಬಳಿಕ ಮಾತನಾಡಿದ ಶಿವರಾಜ್ ಕುಮಾರ್ ''ಇಂಡಸ್ಡ್ರಿಗೆ ಕೆಸಿಎನ್ ಫ್ಯಾಮಿಲಿ ಬಹಳ ಆಪ್ತರು. ನಿರ್ಮಾಪಕ ರಾಮು ಜೊತೆ ಒಡನಾಟ ಇತ್ತು. ಈ ಎಲ್ಲರನ್ನು ಕಳೆದುಕೊಂಡಿರುವುದು ನಮಗೂ ದುಃಖ ತಂದಿದೆ. ಎಲ್ಲರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಪ್ರಾರ್ಥಿಸಿದರು.
ನಂತರ ಮಾತನಾಡಿದ ಜಯಮಾಲ, ''ಕೊರೊನಾ, ಈ ಸಾವು ಎಲ್ಲವನ್ನೂ ನೆನೆಸಿಕೊಂಡ್ರೆ ತುಂಬಾ ನೋವಾಗುತ್ತೆ. ಇವರೆಲ್ಲರು ಇಂಡಸ್ಡ್ರಿಯನ್ನ ಅಪಾರವಾಗಿ ಪ್ರೀತಿಸಿದವರು. ಆ ಕುಟುಂಬದವರಿಗೆ ನೋವ ಭರಿಸುವ ಶಕ್ತಿ ಸಿಗಲಿ'' ಎಂದರು.
ಇನ್ನು ತಾರಾ ಮಾತನಾಡಿ ''ನಾನು-ನನ್ನಿಂದ ಎಂಬ ಅಹಂ ಬಿಟ್ಟು ನಾವು ಸೇರೋದು ಮಣ್ಣಿಗೆ ಎನ್ನುವ ಪಾಠ ಕಲಿಸಿದೆ ಕೊರೊನಾ. ಈ ಮಹಾನೀಯರ ಸಹಾಯದಿಂದ ಯಾರೆಲ್ಲ ಬೆಳೆದಿದ್ದಾರೆ ಎನ್ನುವ ಮಾನವೀಯ ಮಾತು ಬರ್ತಿದೆ. ಇವರು ಎಷ್ಟು ಸಂಪಾದನೆ ಮಾಡಿದ್ದಾರೆ ಅನ್ನೋದನ್ನ ಮಾತಾಡ್ತಿಲ್ಲ. ಅವರು ಮಾಡಿರುವ ಕೆಲಸಗಳು ಅವರನ್ನ ಸ್ಮರಿಸುವ ಕೆಲಸ ಮಾಡ್ತಿವೆ'' ಎಂದರು.
ಈ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್, ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಸೇರಿದಂತೆ ವಿತರಕರು, ಪ್ರದರ್ಶಕರು ಭಾಗಿಯಾಗಿದ್ದರು.


Click it and Unblock the Notifications











