ಡಬ್ಬಿಂಗ್ಗೆ ಕನ್ನಡ ಚಿತ್ರರಂಗದ ಒಕ್ಕೊರಲ ವಿರೋಧ

ರಾಜ್ಯದಲ್ಲಿ ಡಬ್ಬಿಂಗ್ ಯಾಕೆ ನಿಷೇಧಿಸಬೇಕು ಎಂಬ ವಿಷಯ ಕುರಿತು ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತಿತರ ಸಂಸ್ಥೆಗಳಿಗೆ ನೀಡಿರುವ ನೋಟೀಸಿಗೆ ನ್ಯಾಯಾಲಯದ ಮುಖಾಂತರವೇ ಉತ್ತರ ನೀಡಬೇಕೆಂದು ಕನ್ನಡ ಚಿತ್ರರಂಗ ನಿರ್ಧರಿಸಿದೆ. ಕನ್ನಡದಲ್ಲಿ ಡಬ್ಬಿಂಗ್ ಗೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಗಣೇಶ್ ಚೇತನ್ ಎಂಬುವವರು ದೂರು ನೀಡಿದ್ದಾರೆ.
ಇಂದು ಏಟ್ರಿಯಾ ಹೋಟೆಲಿನಲ್ಲಿ ನಡೆದ ಸಭೆಯಲ್ಲಿ ಕೆಎಫ್ಸಿಸಿ ಅಧ್ಯಕ್ಷ ವಿಜಯ ಕುಮಾರ್, ಮಾಜಿ ಅಧ್ಯಕ್ಷರಾದ ಕೆ.ವಿ.ಚಂದ್ರಶೇಖರ್, ಜಯಮಾಲಾ, ನಟರಾದ ಜಗ್ಗೇಶ್, ಉಪೇಂದ್ರ, ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್, ಮುನಿರತ್ನ, ಅಶೋಕ್ ಮುಂತಾದವರು ಭಾಗವಹಿಸಿ, ಡಬ್ಬಿಂಗ್ನ ಸಾಧ್ಯತೆ ಬಾಧ್ಯತೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು.
ಈ ಸಭೆಯಲ್ಲಿ ಡಬ್ಬಿಂಗ್ ನಿಷೇಧದ ಬಗ್ಗೆ ಒಮ್ಮತ ಮೂಡಿಬಂದಿದೆ. ಬೇರೆ ಭಾಷೆಯ ಚಿತ್ರರಂಗಕ್ಕೆ ದೊಡ್ಡ ಮಾರುಕಟ್ಟೆಯಿದೆ. ಆದರೆ, ಕನ್ನಡ ಚಿತ್ರರಂಗಕ್ಕೆ ಸೀಮಿತ ಮಾರುಕಟ್ಟೆಯಿದೆ. ಡಬ್ಬಿಂಗ್ಗೆ ಅವಕಾಶ ಕೊಟ್ಟರೆ ಕನ್ನಡ ಚಿತ್ರರಂಗವೇ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಡಬ್ಬಿಂಗ್ ನಿಷೇಧಿಸುವುದೇ ಉತ್ತಮ ಎಂಬ ನಿರ್ಧಾರಕ್ಕೆ ಬರಲಾಗಿದೆ.
ಇಲ್ಲಿ ಡಬ್ಬಿಂಗ್ ನಿಷೇಧಿಸಬೇಕೋ ನಿಷೇಧಿಸಬಾರದೋ ಎಂಬ ಪ್ರಶ್ನೆಗಿಂತ ಕನ್ನಡ ಭಾಷೆಯ ಅಳಿವು ಉಳಿವಿನ ಪ್ರಶ್ನೆ ಉದ್ಭವಿಸಿದೆ. ಕನ್ನಡ ಭಾಷೆ ಸತ್ತರೆ, ಮನುಷ್ಯನೂ ಸತ್ತಂತೆ, ಕನ್ನಡ ಚಿತ್ರರಂಗವೂ ಸತ್ತಂತೆ ಎಂದು ಕೆಎಫ್ಸಿಸಿ ಮಾಜಿ ಅಧ್ಯಕ್ಷೆ ಡಾ. ಜಯಮಾಲಾ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಈಗ ಕಾಂಪಿಟೇಶನ್ ಕಮಿಷನ್ ಆಫ್ ಇಂಡಿಯಾ ನೀಡಿರುವ ನೋಟೀಸಿಗೆ ಡಿಸೆಂಬರ್ 4ರಂದು ಕನ್ನಡ ಚಿತ್ರರಂಗ ಉತ್ತರ ನೀಡಲಿದೆ. ಈ ವಿಷಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ, ಡಬ್ಬಿಂಗ್ಗೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಕರ್ನಾಟಕ ಫಿಲ್ಮ್ಂ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ವಿಜಯ ಕುಮಾರ್ ಅವರು ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹಿಂದೆ ಗೋಕಾಕ್ ಚಳವಳಿ ನಡೆದಾಗ ಕೂಡ ಇದೇ ಸಮಸ್ಯೆ ಉದ್ಭವವಾಗಿತ್ತು. ಆಗ, ಡಾ. ರಾಜ್ ಕುಮಾರ್ ಅವರ ನೇತೃತ್ವದಲ್ಲಿ ಹೋರಾಟ ಮಾಡಿದ್ದೆವು. ಈಗ ಡಬ್ಬಿಂಗ್ಗೆ ಅವಕಾಶ ಮಾಡಿಕೊಟ್ಟರೆ ಈಗ ಕೂಡ ಅದೇ ಮಾದರಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಶಿವರಾಜ್ ಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications











