ರಾಜಕೀಯ ಕಣಕ್ಕಿಳಿಯಲು ನಿರ್ಮಾಪಕ ಕೆ.ಮಂಜು ತಯಾರಿ
ಕಳೆದ ಆರು ವರ್ಷಗಳಿಂದ ರಾಜಕೀಯಕ್ಕೆ ಎಂಟ್ರಿ ಕೊಡುತ್ತೇನೆ ಅಂತ ಹೇಳುತ್ತಲೇ ಬರುತ್ತಿರುವ ನಿರ್ಮಾಪಕ ಕೆ ಮಂಜು ಈ ಬಾರಿ ಚುನಾವಣೆಯ ಸ್ಪರ್ಧಿಯಾಗಲು ನಾನು ಆಕಾಂಕ್ಷಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
2011ರಲ್ಲೇ ರಾಜಕೀಯ ಕಣಕ್ಕೆ ಬರುತ್ತೇನೆ ಎಂದಿದ್ದ ಕೆ ಮಂಜು ಇಲ್ಲಿಯವರೆಗೂ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಈ ಹಿಂದೆಯೊಮ್ಮೆ 'ಕೆಜೆಪಿ' ಪಕ್ಷದ ಮೂಲಕ ತಮ್ಮ ಸ್ವಂತ ಊರಿನಲ್ಲಿ ನಿರ್ಮಾಪಕ ಕೆ ಮಂಜು ಅವರು ಎಲೆಕ್ಷನ್ ನಲ್ಲಿ ನಿಲ್ಲುತ್ತಾರೆ ಎಂಬ ಸುದ್ದಿಗಳು ಕೇಳಿಬಂದಿತ್ತು. ಆದ್ರೆ, ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ.

ಆದ್ರೀಗ, (ಡಿಸೆಂಬರ್ 13) ವಿಷ್ಣು ಸ್ಮಾರಕದ ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕೆ ಮಂಜು "ಈ ಬಾರಿಯ ವಿಧಾನಸಭೆ ಚುನಾವಣೆಗೆ ನಾನು ರೆಡಿಯಾಗಿದ್ದೇನೆ. ನನ್ನ ಸ್ವಂತ ಊರಾದ ತುರುವೆಕೆರೆ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಆಸೆ ಇದೆ ಎಂದಿದ್ದಾರೆ. ಅಷ್ಟೇ ಅಲ್ಲದೆ, ಕಾಂಗ್ರೆಸ್ ಪಕ್ಷದ ಹಿರಿಯರು ಟಿಕೆಟ್ ಕೊಟ್ಟರೆ ಸಂತೋಷದಿಂದ ಜನರ ಸೇವೆಗೆ ಸಿದ್ದವಾಗುತ್ತೇನೆ" ಎಂದು ಕೆ ಮಂಜು ತಮ್ಮ ಅಭಿಪ್ರಾಯವನ್ನ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ, ಕೆ ಮಂಜು ಅವರ ಹಲವು ವರ್ಷಗಳ ರಾಜಕೀಯ ಕನಸು ಈ ಬಾರಿಯಾದ್ರು ನೆರವೇರುತ್ತಾ ಎಂಬುದು ಕುತೂಹಲ ಮೂಡಿಸಿದೆ.
ಇನ್ನೂ ಇತ್ತೀಚಿನ ದಿನಗಳಲ್ಲಿ ಹೊಸ ನಟರ ಚಿತ್ರಗಳನ್ನ ನಿರ್ಮಾಣ ಮಾಡುತ್ತಿರುವ ಕೆ ಮಂಜು ಮುಂದಿನ ವರ್ಷ ತಮ್ಮ ಮಗನನ್ನ ಚಿತ್ರರಂಗಕ್ಕೆ ನಾಯಕನಾಗಿ ಪರಿಚಯಿಸಲಿದ್ದಾರೆ. ಒಂದು ವೇಳೆ ಕೆ.ಮಂಜು ರಾಜಕೀಯಕ್ಕೆ ಪ್ರವೇಶ ಮಾಡಿದ್ದಲ್ಲಿ ಚಿತ್ರರಂಗದಲ್ಲಿ ಯಶಸ್ಸು ಕಂಡ ಹಾಗೇ ರಾಜಕೀಯದಲ್ಲೂ ಕಾಣಲಿ ಅನ್ನೋದು ಕನ್ನಡ ಸಿನಿಮಾ ಪ್ರೇಮಿಗಳ ಅಭಿಪ್ರಾಯ.


Click it and Unblock the Notifications











