ಶಿವಣ್ಣ ಮತ್ತು ಗಣೇಶ್ ಹೆಸರಿನಲ್ಲಿ ವಂಚನೆ, ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ಎಫ್ಐಆರ್ !
ಹಣ ಕಂಡರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ದುಡ್ಡೊಂದಿದ್ದರೆ ಸಾಕು ಎಲ್ಲವನ್ನೂ ಪಡೆದುಕೊಳ್ಳಬಹುದು ಅನ್ನುವ ಮನಸ್ಥಿತಿ ಅನೇಕರದ್ದು. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ದುಡ್ಡಿಗಾಗಿ ಅನೇಕರು ಇಲ್ಲಿ ಆತ್ಮ ಸಾಕ್ಷಿಯನ್ನು ಮಾರಿಕೊಳ್ಳುತ್ತಾರೆ. ದೀಢೀರ್ ಶ್ರೀಮಂತರಾಗಲು ಅಡ್ಡದಾರಿಯನ್ನು ಹಿಡಿಯುತ್ತಾರೆ. ಮೋಸ, ಸುಲಿಗೆ, ವಂಚನೆಯ ಪ್ರಕರಣದಲ್ಲಿ ಕೂಡ ಸಿಲುಕಿಕೊಳ್ಳುತ್ತಾರೆ. ಇದಕ್ಕೆ ಕನ್ನಡದ ಖ್ಯಾತ ನಿರ್ಮಾಪಕ ಸೂರಪ್ಪ ಬಾಬು ಸದ್ಯದ ಉದಾಹರಣೆ.
ಹೌದು, ಸೂರಪ್ಪ ಬಾಬು.. ಕನ್ನಡದ ಖ್ಯಾತ ನಿರ್ಮಾಪಕ. ಒಂದು ಕಾಲದಲ್ಲಿ ಡಾ.ವಿಷ್ಣುವರ್ಧನ್ ಮತ್ತು ಕಿಚ್ಚ ಸುದೀಪ್ ಅವರಿಗೆ ಅತ್ಯಾಪ್ತರಾಗಿದ್ದವರು ಇವರು. ವಿಷ್ಣುವರ್ಧನ್ ಅವರಿಗೆ ಸೂರಪ್ಪ, ಕೋಟಿಗೊಬ್ಬ, ಕದಂಬ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಸೂರಪ್ಪ ಬಾಬು ಸುದೀಪ್ ಅವರ ಕೋಟಿಗೊಬ್ಬ 2 ಮತ್ತು ಕೋಟಿಗೊಬ್ಬ 3 ಚಿತ್ರದ ನಿರ್ಮಾಪಕರು ಹೌದು.

ಜಗ್ಗೇಶ್ ಅಭಿನಯದ ತರ್ಲೆ ನನ್ ಮಗ ಚಿತ್ರದಿಂದ ಹಿಡಿದು ಪುನೀತ್ ರಾಜ್ ಕುಮಾರ್ ಅಭಿನಯದ ಪೃಥ್ವಿ ಚಿತ್ರದವರೆಗೆ ಪಾಲುದಾರಿಕೆಯಲ್ಲಿ ಮತ್ತು ಸ್ವತಂತ್ರ ನಿರ್ಮಾಪಕರಾಗಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬಂದವರು ಸೂರಪ್ಪ ಬಾಬು.
ಇಂಥಾ ಸೂರಪ್ಪ ಬಾಬು ವಿರುದ್ದ ಇದೀಗ 92 ಲಕ್ಷ ರೂಪಾಯಿ ವಂಚನೆಯ ಆರೋಪ ಕೇಳಿ ಬಂದಿದೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ದೂರಿನ ಅನ್ವಯ 2023ರಲ್ಲಿ ಮಹಿಳೆಗೆ ಸೂರಪ್ಪ ಬಾಬು ಅವರ ಪರಿಚಯವಾಗಿತ್ತು.
ಆ ನಂತರ ಶಿವರಾಜ್ ಕುಮಾರ್ ಮತ್ತು ಗಣೇಶ್ ಅವರ ಜೊತೆಯಲ್ಲಿ ಸಿನಿಮಾ ಮಾಡುತ್ತಿರುವುದಾಗಿ ಸೂರಪ್ಪ ಬಾಬು ಮಹಿಳೆಯನ್ನು ನಂಬಿಸಿದ್ದರು. ಚಿತ್ರ ನಿರ್ಮಾಣಕ್ಕೆ ಹಣದ ಅವಶ್ಯಕತೆ ಇದೆ ಎಂದು ಹೇಳಿ ಹಂತ ಹಂತವಾಗಿ ಮಹಿಳೆಯಿಂದ 92 ಲಕ್ಷ ರೂಪಾಯಿ ಸಾಲವನ್ನು ಕೂಡ ಸೂರಪ್ಪ ಬಾಬು ಪಡೆದಿದ್ದರು.
ಆದರೆ ಸಿನಿಮಾ ಶುರುವಾಗಲೇ ಇಲ್ಲ. ಆ ನಂತರ ಮಹಿಳೆಯ ಸಂಪರ್ಕಕ್ಕೆ ಕೂಡ ಸೂರಪ್ಪ ಬಾಬು ಸಿಗಲಿಲ್ಲ. ಹೀಗಾಗಿ ಹೈರಾಣಾದ ಮಹಿಳೆ ಶಿವರಾಜ್ ಕುಮಾರ್ ಮತ್ತು ಗಣೇಶ್ ಜೊತೆಯಾಗಿ ಅಭಿನಯಿಸುತ್ತಿರುವ ಚಿತ್ರದ ಕುರಿತು ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಆಗ ಸೂರಪ್ಪ ಬಾಬು ಇಂತಹ ಯಾವ ಚಿತ್ರವನ್ನು ಮಾಡುತ್ತಿಲ್ಲ ಎನ್ನುವುದು ಮಹಿಳೆಗೆ ಗೊತ್ತಾಗಿದೆ.
ಸತ್ಯ ಅರಿತ ನಂತರ ಮಹಿಳೆ ಸೂರಪ್ಪ ಬಾಬು ಅವರಲ್ಲಿ ತಮ್ಮ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದಾಗ ಇಬ್ಬರ ನಡುವೆ ಕಿರಿಕ್ ಶುರುವಾಗಿದೆ. ಆ ನಂತರ ಮಹಿಳೆಯಿಂದ 92 ಲಕ್ಷ ಹಣವನ್ನು ಪಡೆದಿದ್ದ ಸೂರಪ್ಪ ಬಾಬು 25 ಲಕ್ಷ ಹಣವನ್ನು ಹಿಂದಿರುಗಿಸಿದ್ದಾರೆ. ಇನ್ನುಳಿದ ಹಣ ಕೇಳಲು ಹೋದಾಗ ಸೂರಪ್ಪ ಬಾಬು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ದೂರು ದಾಖಲಿಸಿದ್ದಾರೆ.
ಅಂದ್ಹಾಗೇ ಎಲ್ಲವೂ ಸೂರಪ್ಪ ಬಾಬು ಅಂದುಕೊಂಡತೆ ನಡೆದಿದ್ದರೆ, ದರ್ಶನ್ ಜೊತೆ ಸೂರಪ್ಪ ಬಾಬು ಸಿನಿಮಾ ಮಾಡಬೇಕಿತ್ತು.ಈ ವಿಚಾರವನ್ನು 2023ರಲ್ಲಿ ದರ್ಶನ್ ಅವರ ಹುಟ್ಟುಹಬ್ಬದಂದು ಅಧಿಕೃತವಾಗಿ ಹೇಳಲಾಗಿತ್ತು ಕೂಡ. ಆದರೆ ಕಷ್ಟ ಸುಖ, ಲಾಭ ನಷ್ಟಗಳ ಕಡೆ ತಲೆ ಕಡಿಸಿಕೊಳ್ಳದೆ ಚಿತ್ರ ನಿರ್ಮಾಣ ಮಾಡಿಕೊಂಡು ಬಂದ ಬಾಬು ಟೈಮು ಚೆನ್ನಾಗಿಲ್ಲ.ಎರಡು ವರ್ಷ ಕಳೆದರು ಆ ಸಿನಿಮಾ ಶುರುವಾಗಲೇ ಇಲ್ಲ. ಬದಲಿಗೆ ಜೈಲಿಂದ ಹೊರ ಬಂದ ನಂತರ ದರ್ಶನ್ ಸೂರಪ್ಪ ಬಾಬು ಅವರಿಗೆ ತಮ್ಮ ಅಡ್ವಾನ್ಸ್ ಹಣವನ್ನು ಮರಳಿ ನೀಡಿದ್ದಾರೆ ಎನ್ನುವ ಸುದ್ದಿ ಇದೆ. ಹೀಗಿರುವಾಗ ಇದೀಗ ಶಿವರಾಜ್ ಕುಮಾರ್ ಮತ್ತು ಗಣೇಶ್ ಹೆಸರಿನಲ್ಲಿ ದುಡ್ಡು ಎತ್ತಿ ಸಿಕ್ಕಿ ಹಾಕಿಕೊಂಡಿದ್ದಾರೆ.


Click it and Unblock the Notifications











