''ಈ ಮೌನ ದರ್ಶನ್ ಪರ ಒಲವು ಇರುವುದಕ್ಕಾ ಅಥವಾ ಭಯಕ್ಕಾ'' ..?
ಅವನೊಬ್ಬ ರಾಜ.. ಸಮೃದ್ಧವಾದ ರಾಜ್ಯ. ಅವನ ಖುಷಿಯೇ ತಮ್ಮ ಖುಷಿ ಅಂತಾ ಭಾವಿಸಿದ ಜನರು. ಎಲ್ಲವೂ ಇದ್ದ ಆ ರಾಜನಿಗೆ ಕೊರತೆ ಅಂತಾ ಇದ್ದಿದ್ದು ಒಂದೇ. ಅದು ನೆಮ್ಮದಿ. ಆ ರಾಜ ಬೇರೆ ಯಾರು ಅಲ್ಲ ಬದಲಿಗೆ ದರ್ಶನ್. ಅಸಂಖ್ಯಾತ.. ಅಗಣಿತ ಅಭಿಮಾನಿಗಳನ್ನ ಸಂಪಾದಿಸಿ, ತಮ್ಮದೇ ಪ್ರಪಂಚದಲ್ಲಿದ್ದ ದರ್ಶನ್ ಈಗ ಇದ್ದ ಚೂರು ಪಾರು ನೆಮ್ಮದಿಯನ್ನೂ ಹಾಳು ಮಾಡಿಕೊಂಡು ಅತ್ತ ಪರಪ್ಪನ ಅಗ್ರಹಾರಕ್ಕೆ ತಲುಪಿದ್ದರೆ, ಇತ್ತ ಕನ್ನಡ ಚಿತ್ರರಂಗದವರು ದರ್ಶನ್ ಅವರಿಂದ ಅಂತರವನ್ನ ಕಾಪಾಡಿಕೊಂಡಿದ್ದಾರೆ. ಹೀಗಾಗಿಯೇ ಜೀವನ ಗೋಣಿ ಚೀಲ ಇದ್ದಂತೆ ಚೆಂದ ಇದ್ದಾಗ ಎಲ್ಲರೂ ತುಂಬುವವರು, ಕಟ್ಟಿಟ್ಟೂ ಅಟ್ಟಕ್ಕೂ ಏರಿಸುವರು. ಆದರೆ ಅದೇ ಹರಿದಾಗ ಕಾಲಡಿಗೆ ಹಾಕುವರು ಎಂಬ ದೊಡ್ಡವರ ಮಾತು ಅನೇಕರಿಗೆ ಈಗ ನೆನಪಾಗುತ್ತಿದೆ.
ಹೌದು, ನಿಮಗೆ ಗೊತ್ತು, ದರ್ಶನ್ ಹಿಂದೆ ಮುಂದೆ ಈ ಹಿಂದೆ ಅನೇಕ ತಾರೆಯರು ಕಾಣಿಸುತ್ತಿದ್ದರು. ತಮ್ಮ ತಮ್ಮ ಚಿತ್ರದ ಸಭೆ ಸಮಾರಂಭಕ್ಕೆ ದರ್ಶನ್ ಅವರನ್ನೇ ಕರೆಯುತ್ತಿದ್ದರು. ನಮ್ಮ ಚಿತ್ರದ ಕಾರ್ಯಕ್ರಮಕ್ಕೆ ದರ್ಶನ್ ಬಂದರೆ ಸಾಕು, ಚಿತ್ರಕ್ಕೆ ಪ್ರಚಾರದ ಅಗತ್ಯವೇ ಇಲ್ಲ ಎಂದುಕೊಂಡು ಅನೇಕರು ದರ್ಶನ್ ಅವರ ದುಂಬಾಲು ಬೀಳುತ್ತಿದ್ದರು. ಇನ್ನೂ ಬ್ರದರ್ ಫ್ರಮ್ ಅನದರ್ ಮದರ್ ಎಂದು ಹಾಡು ಹಾಡಿ ಕುಣಿದವರು ಒಬ್ಬರಾ..? ಇಬ್ಬರಾ..?

ಆದರೆ.. ಇವತ್ತು ದರ್ಶನ್ ಬೆಂಬಲಕ್ಕೆ ಅಕ್ಕ-ಪಕ್ಕ-ಹಿಂದೆ-ಮುಂದೆ ಯಾರು ಇಲ್ಲ. ಹಾಗಂಥ ದರ್ಶನ್ ವಿರುದ್ಧವಾದರೂ ಮಾತನಾಡಿದಾರಾ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದ್ದಾರಾ ಅಂದರೆ ಅದು ಇಲ್ಲ. ಸುದೀಪ್ - ರಮ್ಯಾ- ಪ್ರಥಮ್- ಉಮಾಪತಿ ಶ್ರೀನಿವಾಸ್- ಭಾ.ಮಾ.ಹರೀಶ್ ಅವರನ್ನು ಹೊರತು ಪಡಿಸಿದರೆ, ಬಹುತೇಕರು.. ದರ್ಶನ್ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಉದಾಹರಣೆಗೆ ಡಾಲಿ ಧನಂಜಯ್
ಹೌದು, ನಿಮಗೆ ಗೊತ್ತಿರಲಿ .. ಯಜಮಾನ ಚಿತ್ರದಲ್ಲಿ ಮಿಠಾಯಿ ಸೂರಿ ಪಾತ್ರ ನಿರ್ವಹಿಸಿದ್ದ ಡಾಲಿ ಧನಂಜಯ್ ಅವರಿಗೆ ಮೊನ್ನೆ ಕೋಟಿ ಚಿತ್ರದ ಸಮಯದಲ್ಲಿ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಪ್ರಶ್ನೆಯನ್ನ ಕೇಳಿದ್ದರು. ಆದರೆ, ಡಾಲಿ ಮಾತ್ರ ಮಾತನಾಡಲಿಲ್ಲ. ಸಿನಿಮಾ ಕಾರ್ಯಕ್ರಮ ಸಿನಿಮಾದ ಬಗ್ಗೆ ಮಾತ್ರ ಮಾತು ಎಂದು ಹೇಳಿದರು.

ಕೇವಲ ಡಾಲಿಯಷ್ಟೇ ಅಲ್ಲ ಕಾಟೇರನ ಪ್ರಭಾವತಿ ಆರಾಧನಾ ರಾಮ್ ಅವರು ಮೊನ್ನೆಯ ದಿನ ಯೋಗ ಮಾಡಲು ಕಾರ್ಯಕ್ರಮಕ್ಕೆ ಬಂದಾಗ ಕೂಡ ದರ್ಶನ್ ಬಗ್ಗೆ ಪ್ರಶ್ನೆ ಕೇಳಲಾಯಿತು. ಅಲ್ಲಿಯೂ ಸಿಕ್ಕಿದ್ದು ಇವತ್ತು ಯೋಗ ದಿನ, ಅದರ ಬಗ್ಗೆ ಮಾತ್ರ ಪ್ರಶ್ನೆ ಎಂಬ ಪ್ರತಿಕ್ರಿಯೆ ಸಿಕ್ಕಿತ್ತು. ಕನ್ನಡ ಚಿತ್ರರಂಗದ ಅಧ್ಯಕ್ಷ ಶರಣ್ ಕೂಡ ದರ್ಶನ್ ಹೆಸರು ಕೇಳ್ತಿದ್ದಂತೆ ನುಣುಚಿಕೊಂಡರು.
ಇವ್ರಷ್ಟೇ ಅಲ್ಲ ಕನ್ನಡದಿಂದ ಕಣ್ಮರೆಯಾಗಿ ಸದ್ಯ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಶ್ರೀಲೀಲಾ ಕೂಡ ದರ್ಶನ್ ಅವರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಲಿಲ್ಲ. ದರ್ಶನ್ ಹೆಸರು ಕಿವಿಗೆ ಬೀಳುತ್ತಿದ್ದಂತೆ ಹಿರಿಯ ನಟಿ ಅನು ಪ್ರಭಾಕರ್ ಕೂಡ ಸ್ಥಳದಲ್ಲಿ ನಿಲ್ಲಲಿಲ್ಲ. ಇಷ್ಟೇ ಯಾಕೆ.. ದರ್ಶನ್ ಅವರನ್ನ ಬಾಯ್ತುಂಬ ಭಾಯಿಜಾನ್ ಎಂದು ಕರೆಯುವ ನೆನಪಿರಲಿ ಪ್ರೇಮ್ ಕೂಡ ದರ್ಶನ್ ಬಗ್ಗೆ ಏನನ್ನೂ ಮಾತನಾಡಲಿಲ್ಲ.

ಇವರೆಲ್ಲರ ಈ ಮೌನ ಈಗ ಟ್ರೋಲಿಗರಿಗೆ ಆಹಾರವಾಗಿದೆ. ದರ್ಶನ್ ಕುರಿತು ಮಾತನಾಡಲು ಹಿಂದೇಟು ಹಾಕಿದ ತಾರೆಯರ ವಿಡಿಯೋಗಳನ್ನೆಲ್ಲ ಒಂದುಗೂಡಿಸಿ ಟ್ರೋಲ್ ಮಾಡಲಾಗುತ್ತಿದೆ. ಟ್ರೋಲ್ ಮಾಡಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗುತ್ತಿದೆ. ಸಾರ್ವತ್ರಿಕ ವಲಯದಲ್ಲಿ ಹತ್ತಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇನ್ನೂ ಕೆಲವರಿಗೆ ಕನ್ನಡ ಚಿತ್ರರಂಗದ ಈ ದಿವ್ಯ ಮೌನ ದರ್ಶನ್ ಪರ ಒಲವು ಇರುವುದಕ್ಕಾ ಅಥವಾ ಭಯಕ್ಕಾ ಎಂಬ ಪ್ರಶ್ನೆ ಕೂಡ ಕಾಡುತ್ತಿದೆ.


Click it and Unblock the Notifications










