ಕಳಸಾ-ಬಂಡೂರಿ ಯೋಜನೆ ಜಾರಿ: ಮತ್ತೆ ಬೀದಿಗಿಳಿದ ಸ್ಯಾಂಡಲ್ ವುಡ್!
ಕಳಸಾ-ಬಂಡೂರಿ ಯೋಜನೆ ಜಾರಿಗೆ ಒತ್ತಾಯಿಸಿ ಇಡೀ ಸ್ಯಾಂಡಲ್ ವುಡ್ ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬಹಿಷ್ಕಾರ ಹಾಕಿದೆ. ಅಲ್ಲದೇ ಈ ಸಂಬಂಧ ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ಛೇಂಬರ್ ಕಛೇರಿಯಿಂದ ಮೌರ್ಯ ವೃತ್ತದವರೆಗೂ ರ್ಯಾಲಿ ನಡೆಸಿದ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ಸಹ ಕಲಾವಿದರು ಈ ಪ್ರತಿಭಟನೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು.
ಇನ್ನು ರ್ಯಾಲಿಯಲ್ಲಿ ಹಿರಿಯ ನಟರಾದ ದೊಡ್ಡಣ್ಣ, ನಟ ಡಾ.ಶಿವರಾಜ್ ಕುಮಾರ್, ನಟ ಶ್ರೀನಾಥ್, ಹಿರಿಯ ನಟಿ ಸರೋಜಾ ದೇವಿ, ನಟಿ ಸಂಜನಾ, ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಬಳಿಕ ರಾಜಭವನಕ್ಕೆ ತೆರಳಿದ ಸ್ಯಾಂಡಲ್ ವುಡ್ ನಿಯೋಗ ರಾಜ್ಯಪಾಲ ವಜೂಭಾಯಿವಾಲರನ್ನು ಭೇಟಿಯಾದರು.[ಕಳಸಾ-ಬಂಡೂರಿಗೆ ಸ್ಯಾಂಡಲ್ ವುಡ್ ಕಿಚ್ಚು ; ಯಾರು ಏನು ಹೇಳಿದರು? ]

ಇನ್ನು ಇದಕ್ಕೂ ಮೊದಲು ಮಾತನಾಡಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಕಳಸಾ-ಬಂಡೂರಿ' ಯೋಜನೆ ಜಾರಿಗಾಗಿ ಜೀವ ಹೋದರು ಹೋಗಲಿ. ಆದರೆ ಸಮಸ್ಯೆ ಮಾತ್ರ ಬಗೆಹರಿಯಲಿ ಅಂತ ಆಕ್ರೋಶ ವ್ಯಕ್ತಪಡಿಸಿದರು.
ರಿಯಲ್ ಸ್ಟಾರ್ ಉಪೇಂದ್ರ ಅವರು ಮಾತನಾಡಿ 'ಇದು ಈ ತರ ನಡಿತಿರೋದು ನೋಡಿದ್ರೆ ತುಂಬಾ ವಿಷಾದ ಅಂತ ಅನ್ಸುತ್ತೆ. ಯಾಕಂದ್ರೆ ಇದಕ್ಕೆ ಎಲ್ಲಿಂದ ಕಾರ್ಯಚರಣೆ ಶುರುವಾಗಬೇಕು ಅಲ್ಲಿಂದಲೇ ಶುರುವಾಗಬೇಕು. ಜನ ಸಮಸ್ಯೆಯಲ್ಲಿ ಇದ್ದಾಗ ಅವರು ಬರಬೇಕು. ಈ ಸಮಸ್ಯೆಯನ್ನು ಬಗೆಹರಿಸಬೇಕು, ಈ ಹೋರಾಟ ನಮ್ಮದೊಂದು ಸಣ್ಣ ಪ್ರಯತ್ನ ಅಷ್ಟೆ. ಕೇಂದ್ರ ಸರ್ಕಾರ ಇದರ ಬಗ್ಗೆ ಯೋಚನೆ ಮಾಡಬೇಕಿದೆ' ಎಂದರು.[ನರೇಂದ್ರ ಮೋದಿಗೆ ಕರ್ನಾಟಕದ ಕೂಗು ಕೇಳಿಸಲಿ: ಚಿತ್ರರಂಗ]

ಕಳಸಾ ಬಂಡೂರಿಯ ರೈತರ ಪರವಾಗಿ ನಾವು ಹೋರಾಟ ನಡೆಸಿದ್ದೇವೆ. ಅವರ ಪರವಾಗಿ ನಾವಿದ್ದೇವೆ ಎಂದು ಸ್ಯಾಂಡಲ್ ವುಡ್ ನ ಮಂದಿ ರಸ್ತೆಗಿಳಿದು ಹೋರಾಟ ನಡೆಸಿದ್ದಾರೆ. ನರಗುಂದಗೆ ಯಾವತ್ತೂ ಹೋಗ್ತೀವಿ ಎಂದು ಚಿತ್ರರಂಗದವರು ಬಹಿರಂಗವಾಗಿ ಈ ಮೂಲಕ ತಿಳಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಒಂದು ಸಭೆಯನ್ನು ನಡೆಸುವುದಾಗಿ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾ.ರಾ ಗೋವಿಂದು ಅವರು ತಿಳಿಸಿದ್ದಾರೆ.


Click it and Unblock the Notifications











