ಯಾವ ನಟ-ನಟಿ, ಯಾರ ಪರ ಎಲ್ಲೆಲ್ಲಿ ಪ್ರಚಾರ ಮಾಡಿದ್ರು.?
ಚುನಾವಣ ಕಣದಲ್ಲಿ ಸಿನಿತಾರೆಯರ ರಂಗು ಜೋರಾಗಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪರ ಸಿನಿಮಾ ನಟ-ನಟಿಯರು ರಸ್ತೆಗಿಳಿದು ಮತಯಾಚನೆ ಮಾಡ್ತಿದ್ದಾರೆ. ಕೆಲವರು ಪಕ್ಷಕ್ಕೆ ಅಧಿಕೃತವಾಗಿ ಬೆಂಬಲ ನೀಡಿದ್ರೆ, ಮತ್ತೆ ಕೆಲವರು ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡದೆ, ಅಭ್ಯರ್ಥಿಗಳ ಸ್ನೇಹ ಸಂಬಂಧಕ್ಕಾಗಿ ಮತಯಾಚನೆ ಮಾಡ್ತಿದ್ದಾರೆ.
ಪ್ರಚಾರ ಮಾಡಲು ಸ್ಯಾಂಡಲ್ ವುಡ್ ನ ಸ್ಟಾರ್ ಕಲಾವಿದರು ಹಾಗೂ ಪರಭಾಷೆಯಿಂದ ಕೂಡ ಸಿನಿಮಾ ನಟರು ಬರಲಿದ್ದಾರೆ ಎನ್ನಲಾಗಿತ್ತು. ಸದ್ಯಕ್ಕೆ ಕೆಲವು ಮಂದಿ ಮಾತ್ರ ಪ್ರಚಾರ ಆರಂಭಿಸಿದ್ದು, ರಾಕಿಂಗ್ ಸ್ಟಾರ್ ಯಶ್, ಲೂಸ್ ಮಾದ ಯೋಗೇಶ್, ನಟಿ ಪೂಜಾ ಗಾಂಧಿ, ನಟ ನಿಖಿಲ್ ಕುಮಾರ್ ಸೇರಿದಂತೆ ಬಾಲಿವುಡ್ ನ ಕೆಲವು ನಟರು ಕೂಡ ರಾಜ್ಯದಲ್ಲಿ ಮತ ಕೇಳುತ್ತಿದ್ದಾರೆ.

ಹಾಗಿದ್ರೆ, ಯಾವ ನಟರು ಎಲ್ಲಿ ಪ್ರಚಾರ ಮಾಡಿದ್ರು, ಮತ್ತು ಯಾವ ಅಭ್ಯರ್ಥಿಗಳ ಪರ ಮತ ಕೇಳುತ್ತಿದ್ದಾರೆ ಎಂಬ ಒಂದು ವಿಶೇಷ ವರದಿ ಇಲ್ಲಿದೆ ಓದಿ....

ಸಾ ರಾ ಮಹೇಶ್ ಪರ ಯಶ್ ಪ್ರಚಾರ
ಮೈಸೂರಿನ ಕೃಷ್ಣರಾಜ (ಕೆ.ಆರ್ ) ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಾ.ರಾ ಮಹೇಶ್ ಅವರ ಪರ ರಾಕಿಂಗ್ ಸ್ಟಾರ್ ಯಶ್ ನಿನ್ನೆ ಪ್ರಚಾರ ನಡೆಸಿದರು. ಮೈಸೂರಿನಲ್ಲಿ ರೋಡ್ ಶೋ ನಡೆಸಿದ ಯಶ್ ಸಾ ರಾ ಮಹೇಶ್ ಅವರಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.

ದರ್ಶನ್ ಪುಟ್ಟಣ್ಣಯ್ಯ ಪರ ಸೆಂಚುರಿ ಗೌಡ
ಮೇಲುಕೋಟೆ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಪರ ತಿಥಿ ಚಿತ್ರದ ಸೆಂಚೂರಿ ಗೌಡ ಪ್ರಚಾರ ನಡೆಸಿದ್ದಾರೆ. ವದೆ ಸಮುದ್ರ ಗ್ರಾಮದಲ್ಲಿ ಪ್ರಚಾರ ನಡೆಸಿ ಮಾತನಾಡಿದ ಸೆಂಚೂರಿಗೌಡ, ರೈತ ನಾಯಕ ಪುಟ್ಟಣ್ಣಯ್ಯನ ಮಗನಿಗೆ ವೋಟು ಹಾಕಿ ಮರಿ ಹುಲಿಯ ಗೆಲುವಿಗೆ ಸಹಕರಿಸಿ ಎಂದು ಮನವಿ ಮಾಡಿದರು.

ಎಂಇಪಿ ಪರ ಬಾಲಿವುಡ್ ತಾರೆಯರು
‘ಆಲ್ ಇಂಡಿಯಾ ಮಹಿಳಾ ಎಂಪವರ್ ಮೆಂಟ್ ಪಾರ್ಟಿ' (ಎಂಇಪಿ) ಪರವಾಗಿ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಅವರ ಸೋದರರಿಬ್ಬರು ರಾಜ್ಯದಲ್ಲಿ ಪ್ರಚಾರ ಮಾಡಲಿದ್ದಾರೆ. ಬಿಟಿಎಮ್ ಲೇಔಟ್ನಿಂದ ಸ್ಪರ್ಧಿಸುತ್ತಿರುವ ನರ್ಸ್ ಜಯಲಕ್ಷ್ಮಿ ಪರ ಸಲ್ಮಾನ್ ಖಾನ್ ಸಹೋದರರಾದ ಅರ್ಬಾಝ್ ಖಾನ್ ಹಾಗೂ ಸೊಹೈಲ್ ಖಾನ್, ಹಾಗೂ ಕ್ರಿಕೆಟಿಗ ಅಜರ್ ಅಲಿ ಮಂಗಳವಾರ ಪ್ರಚಾರ ನಡೆಸಿದರು.

ಆರ್.ಕೆ.ರಮೇಶ್ ಪರ ಲೂಸ್ ಮಾದ
ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ.ರಮೇಶ್ ಅವರ ಜೊತೆ ಪರಪ್ಪನ ಅಗ್ರಹಾರದ ರೋಡ್ ಶೋನಲ್ಲಿ ಭಾಗವಹಿಸಿದ್ದ ಲೂಸ್ ಮಾದ, ''ಕಾಂಗ್ರೆಸ್ ಗೆ ನಿಮ್ಮ ಮತ ನೀಡಿ, ಕಾಂಗ್ರೆಸ್ ಸರ್ಕಾರವನ್ನ ಮತ್ತೆ ಅಧಿಕಾರಕ್ಕೆ ತನ್ನಿ, ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ.ರಮೇಶ್ ಅವರನ್ನ ಗೆಲ್ಲಿಸಿ'' ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

ಜೆ.ಡಿ.ಎಸ್ ಪರ ಪೂಜಾ ಗಾಂಧಿ
ಚಿತ್ರದುರ್ಗ, ಮಡಿಕೇರಿ ಸೇರಿದಂತೆ ರಾಜ್ಯದ ಹಲವು ಕಡೆ ನಟಿ ಪೂಜಾ ಗಾಂಧಿ ಜೆ.ಡಿ.ಎಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದಾರೆ. ಈ ಬಾರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನ ಮುಖ್ಯಮಂತ್ರಿ ಮಾಡಲೇಬೇಕೆಂದು ಪಣ ತೊಟ್ಟಿದ್ದಾರೆ.

ಮಾಲಾಶ್ರೀ-ಸಾಧುಕೋಕಿಲಾ
ಇನ್ನು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಹಾಸ್ಯನಟ ಸಾಧುಕೋಕಿಲಾ ಪ್ರಚಾರ ಆರಂಭಿಸಿದ್ದಾರೆ. ಜೊತೆಗೆ ನಟಿ ಮಾಲಾಶ್ರೀ ಪ್ರಚಾರ ಕೂಡ ಪ್ರಚಾರ ಮಾಡಲಿದ್ದಾರೆ.

ನಿಖಿಲ್ ಕುಮಾರ್
ಇನ್ನು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಟ ನಿಖಿಲ್ ಕುಮಾರ್ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

ಅಳಿಯನ ಪರ ದೊಡ್ಡಣ್ಣ
ನಟ ದೊಡ್ಡಣ್ಣ ಅಳಿಯ ಮತ್ತು ಉದ್ಯಮಿ ಕೆ.ಸಿ.ವೀರೇಂದ್ರ ಅವರು ಚಿತ್ರದುರ್ಗ ನಗರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅಳಿಯನ ಪರವಾಗಿ ದೊಡ್ಡಣ್ಣ ಮಯಯಾಚನೆ ಮಾಡುತ್ತಿದ್ದಾರೆ.

ಹೆಚ್.ಎಂ ರೇವಣ್ಣ ಪರ ಯುವ ಸ್ಟಾರ್ ಗಳು
ಚನ್ನಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಎಂ ರೇವಣ್ಣ ಅವರ ಪರವಾಗಿ ಬಿಗ್ ಬಾಸ್ ಖ್ಯಾತಿಯ ಪ್ರಥಮ್, ನಟಿ ಮಯೂರಿ ಹಾಗೂ Rap ಸಿಂಗರ್ ಚಂದನ್ ಶೆಟ್ಟಿ ಪ್ರಚಾರ ಮಾಡಿದ್ದಾರೆ.


Click it and Unblock the Notifications











