ಮಹದಾಯಿ ಹೋರಾಟಗಾರರ ಬೆಂಬಲಕ್ಕೆ ನಿಂತ ಕನ್ನಡ ಸಿನಿಮಾರಂಗ
ಮಹದಾಯಿ ನೀರು ಹಂಚಿಕೆ ವಿಚಾರವಾಗಿ ಬಿಜೆಪಿ ಕಛೇರಿ ಮುಂದೆ ನಡೆಯುತ್ತಿರುವ ಹೋರಾಟಕ್ಕೆ ಕನ್ನಡ ಸಿನಿಮಾರಂಗ ಬೆಂಬಲ ಸೂಚಿಸಿದೆ. ರಾಜಕೀಯ ವ್ಯಕ್ತಿಗಳ ಜೊತೆಯಲ್ಲಿ ಚಿತ್ರರಂಗದ ಕಲಾವಿದರು ಕೂಡ ಹೋರಾಟಕ್ಕೆ ಬೆಂಬಲ ನೀಡುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದವು.
ನಿನ್ನೆ ಮಧ್ಯಾಹ್ನ ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ವಿ ನಾಗೇಂದ್ರ ಪ್ರಸಾದ್ ಹಾಗೂ ಛಾಯಾಗ್ರಾಹಕ ಸಂಘದ ಅಧ್ಯಕ್ಷರು ರೈತರ ಜೊತೆ ಧರಣಿ ಮಾಡುವ ಮೂಲಕ ತಮ್ಮ ಬೆಂಬಲ ರೈತರಿಗೆ ಸದಾ ಇರುತ್ತದೆ ಎಂದು ಭರವಸೆ ನೀಡಿದ್ದಾರೆ. 2015ರಲ್ಲಿ ಹುಬ್ಬಳ್ಳಿಗೆ ಇಡೀ ಚಿತ್ರರಂಗ ಭೇಟಿ ನೀಡಿ ಒಂದು ದಿನ ಹೋರಾಟದಲ್ಲಿ ಭಾಗಿಯಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ಹೋರಾಟ ಮಾಡುತ್ತಿರುವ ರೈತರ ಜೊತೆ ಇಂದು (ಡಿ.26) ಕನ್ನಡ ಇಡೀ ಕನ್ನಡ ಚಿತ್ರರಂಗ ಸೇರಿಕೊಳ್ಳಲಿದೆ.

ಇಂದು(ಡಿ 26) ಮಧ್ಯಾಹ್ನ 3 ಗಂಟೆಗೆ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ ಸೇರಿದಂತೆ ಚಿತ್ರರಂಗದ ಅಂಗ ಸಂಸ್ಥೆಗಳು ರೈತರ ಜೊತೆ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ಚಿತ್ರರಂಗದ ಯಾರೆಲ್ಲ ಕಲಾವಿದರು ಪ್ರತಿಭಟನೆ ಬರುತ್ತಿದ್ದಾರೆ ಅನ್ನೋ ಮಾಹಿತಿ ಬಿಟ್ಟುಕೊಡದ ನಿರ್ದೇಶಕ ವಿ ನಾಗೇಂದ್ರ ಪ್ರಸಾದ್ 'ಚಿತ್ರರಂಗದ ಗಣ್ಯರೆಲ್ಲರೂ ರೈತರ ಪರವಾಗಿದ್ದೇವೆ. ನಾಡು-ನುಡಿ ಹೋರಾಟದ ವಿಚಾರ ಬಂದಾಗ ಹಿಂದಿನಿಂದ ಚಿತ್ರರಂಗ ರೈತರ ಜೊತೆಯಲ್ಲಿದೆ, ಮುಂದಿನ ದಿನಗಳಲ್ಲೂ ಇರುತ್ತದೆ'. ಎಂದು ತಿಳಿಸಿದ್ದಾರೆ. ಒಟ್ಟಾರೆ ಮಹದಾಯಿ ನೀರಿನ ವಿಚಾರದ ಹೋರಾಟ ಇಂದಿನಿಂದ ತೀವ್ರ ಸ್ವರೂಪ ತಾಳುವ ಸೂಚನೆ ಇದೆ.


Click it and Unblock the Notifications











