ವಿಷ್ಣುರನ್ನ ಸ್ಮರಿಸಿದ ಚಿತ್ರರಂಗ: ಒಬ್ಬೊಬ್ಬರಿಗೆ ಒಂದೊಂದು ರೀತಿ ಸ್ಫೂರ್ತಿ ಈ 'ಸಿಂಹ'
Recommended Video

ಕರುನಾಡ ಯಜಮಾನ, ಸಿಂಹಾದ್ರಿಯ ಸಿಂಹ, ಅಭಿನಯ ಭಾರ್ಗವ, ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ ಜನ್ಮ ದಿನದ ಸವಿ ನೆನಪು. ದಾದಾ ದೈಹಿಕ ಇಲ್ಲವಾದರೂ ಕನ್ನಡಿಗರ ಹೃದಯದಲ್ಲಿ ನಿರಂತರವಾಗಿ ನೆಲೆಸಿದ್ದಾರೆ.
ವಿಷ್ಣುವರ್ಧನ್ ಅವರು ಕೇವಲ ದಿಗ್ಗಜ ನಟ ಮಾತ್ರವಲ್ಲ, ಅದೇಷ್ಟೋ ಪ್ರತಿಭೆಗಳಿಗೆ ಸ್ಫೂರ್ತಿ. ಅವರ ಜೀವನ ಶೈಲಿ, ಅವರ ನಟನೆಯನ್ನ ನೋಡಿ ಚಿತ್ರರಂಗಕ್ಕೆ ಬಂದವರು ಅನೇಕರು. ಅವರ ಮಾರ್ಗದರ್ಶನದಲ್ಲಿ ಬೆಳೆದವರು ಹಲವರು. ಅವರ ಜೊತೆ ಅಭಿನಯಿಸುವ ಅವಕಾಶ ಪಡೆದುಕೊಂಡವರೇ ಅದೃಷ್ಟವಂತರು. ಇಂತಹ ಅವಕಾಶ ಸಿಗದೇ ಇದ್ದವರಿಗೂ ಇಂದಿಗೂ ಆ ಬೇಸರ ಕಾಡುತ್ತಿದೆ.
ಇಂತಹ ಬೇಸರವನ್ನ ಇತ್ತೀಚಿಗಷ್ಟೆ ನಟ ಶಿವರಾಜ್ ಕುಮಾರ್ ವ್ಯಕ್ತಪಡಿಸಿದ್ದರು. ವಿಷ್ಣು ಸರ್ ಜೊತೆಯಲ್ಲಿ ಅಭಿನಯಿಸಲಿಲ್ಲ ಎಂಬ ಬೇಸರ ನನ್ನನ್ನು ಕಾಡುತ್ತಿದೆ ಎಂದಿದ್ದರು. ಹೀಗೆ, ವಿಷ್ಣು ಅವರು ಪ್ರತಿಯೊಬ್ಬ ಕಲಾವಿದನಿಗೂ ದಾದಾ ಒಂದಲ್ಲ ಒಂದು ರೀತಿಯಲ್ಲಿ ಸ್ಫೂರ್ತಿಯಾಗಿದ್ದರು. ಇಂತಹ ಮೇರುನಟನಿಗೆ ಕನ್ನಡ ಚಿತ್ರರಂಗ ಸಲಾಂ ಹೇಳಿದೆ. ಹುಟ್ಟುಹಬ್ಬದ ಪ್ರಯುಕ್ತ ಹೃದಯಪೂರ್ವಕವಾಗಿ ಶುಭಕೋರಿದೆ. ಯಾರು ಹೇಗೆ ಶುಭಕೋರಿದ್ದಾರೆ ಎಂದು ಮುಂದೆ ಓದಿ.....
ವಿಷ್ಣು ಪ್ರೀತಿ-ಆದರ್ಶಗಳು ಎಲ್ಲಾ ಪೀಳಿಗೆಗೂ ದಾರಿದೀಪ
ವಿಷ್ಣುವರ್ಧನ್ ಅವರ ಬಗ್ಗೆ ದೊಡ್ಡ ಅಭಿಮಾನ ಹೊಂದಿರುವ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ವಿಷ್ಣು ಜೊತೆ ಈ ಬಂಧನ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದರು. ದಾದಾ ಹುಟ್ಟುಹಬ್ಬದ ಪ್ರಯುಕ್ತ ಶುಭಕೋರಿರುವ ದಾಸ ''ಭಾರತ ಚಿತ್ರರಂಗ ಕಂಡ ಅತ್ಯಂತ ಸುರಧ್ರೂಪಿ ನಟರಲ್ಲೊಬ್ಬರು, ತಮ್ಮ ಪ್ರತಿಭೆ-ವ್ಯಕ್ತಿತ್ವದಿಂದಲೇ ಮನೆಮಾತಾದ ನಮ್ಮೆಲ್ಲರ ನಲ್ಮೆಯ ‘ಅಭಿನಯ ಭಾರ್ಗವ' ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ಸರ್ ರವರ ಜನ್ಮದಿನೋತ್ಸವ ಇಂದು. ಪ್ರೀತಿ-ಆದರ್ಶಗಳು ಎಲ್ಲಾ ಪೀಳಿಗೆಗೂ ದಾರಿದೀಪವಿದ್ದಂತೆ'' ಎಂದಿದ್ದಾರೆ.
ಸಾವಿರಾರು ಜನರಿಗೆ ಸ್ಫೂರ್ತಿ ನೀವು
ಗೋಲ್ಡನ್ ಸ್ಟಾರ್ ಗಣೇಶ್ ಅವರ ಆಲ್ ಟೈಂ ನೆಚ್ಚಿನ ನಟ ಅಂದ್ರೆ ಸಾಹಸ ಸಿಂಹ ವಿಷ್ಣುವರ್ಧನ್. ಚಿಕ್ಕ ವಯಸ್ಸಿನಿಂದಲೂ ವಿಷ್ಣು ಬಗ್ಗೆ ಅಭಿಮಾನ ಬೆಳೆಸಿಕೊಂಡಿರುವ ಗಣಿ ದಾದಾ ಕಂಡರೇ ಅಪಾರ ಗೌರವ. ಇಂದಿಗೂ ಅದನ್ನ ಕಾಪಾಡಿಕೊಂಡು ಬಂದಿದ್ದಾರೆ.
ನಿಜವಾದ ಲೆಜೆಂಡ್
ಹೆಬ್ಬುಲಿ ಚಿತ್ರದ ನಿರ್ದೇಶಕ ಕೃಷ್ಣ ಅವರು ವಿಷ್ಣುದಾದಾ ಹುಟ್ಟುಹಬ್ಬಕ್ಕೆ ಶುಭಕೋರಿದ್ದು, ''ವಿಷ್ಣು ಸರ್ ನಿಜವಾದ ಲೆಜೆಂಡ್. ಮರೆಯಲಾಗದ ಮಾಣಿಕ್ಯ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸಿಂಹ ಘರ್ಜನೆ ನಿರಂತರ
ಕನ್ನಡದ ಯುವ ನಿರ್ದೇಶಕ ಪವನ್ ಒಡೆಯರ್ ಅವರು ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ವಿಶ್ ಮಾಡಿದ್ದು, ಕರುನಾಡ ಯಜಮಾನ, ಸಿಂಹಾದ್ರಿಯ ಸಿಂಹ, ಅಭಿನಯ ಭಾರ್ಗವ, ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರ ಜನ್ಮ ದಿನದ ಸವಿ ನೆನಪು. ಕನ್ನಡಿಗರ ಹೃದಯದಲ್ಲಿ ಸಿಂಹ ಘರ್ಜನೆ ನಿರಂತರ'' ಎಂದು ಟ್ವೀಟ್ ಮಾಡಿದ್ದಾರೆ.
ಶಾಶ್ವತ ಸ್ನೇಹ, ಶಾಶ್ವತ ಲೆಜೆಂಡ್
ವಿಷ್ಣುವರ್ಧನ್ ಅವರ ಆಪ್ತರಲ್ಲಿ ನಟಿ ಸುಮಲತಾ ಅಂಬರೀಶ್ ಕೂಡ ಪ್ರಮುಖರು. ವಿಷ್ಣುದಾದಾ ಕುಟುಂಬಕ್ಕೆ ಹಾಗೂ ವೈಯಕ್ತಿಕವಾಗಿ ಅಂಬರೀಶ್ ಮತ್ತು ಸುಮಲತಾ ಅವರು ತುಂಬಾ ಆತ್ಮೀಯರು. ಈ ಆತ್ಮೀಯ ಗೆಳೆನಿಗೆ ಸುಮಲತಾ ಶುಭಕೋರಿದ್ದಾರೆ. ''ಶಾಶ್ವತ ನೆನಪುಗಳು, ಶಾಶ್ವತ ಸ್ನೇಹ, ಶಾಶ್ವತ ಲೆಜೆಂಡ್ ಸದಾ ನೆನಪಿನಲ್ಲಿರುತ್ತೆ'' ಎಂದು ಹೇಳಿದ್ದಾರೆ.
ನಿಮ್ಮ ಹಾದಿಯೇ ಸ್ಫೂರ್ತಿ
''ನೀವು ನಡೆದ ಬಂದ ಹಾದಿಯೇ ನಮ್ಮೆಲ್ಲರಿಗೂ ಸ್ಫೂರ್ತಿ ಲವ್ ಯೂ ದಾದಾ'' ಎಂದು ನಟ ಚಿರಂಜೀವಿ ಸರ್ಜಾ ಶುಭಾಶಯ ತಿಳಿಸಿದ್ದಾರೆ.
ನೆನಪುಗಳ ಮಾತು ಮಧುರ
ವಿಷ್ಣುವರ್ಧನ್ ಅವರ ಜೊತೆಉತ್ತಮ ಒಡೆನಾಟ ಹೊಂದಿದ್ದ ನಟ ರಮೇಶ್ ಅರವಿಂದ್ ಅವರು ದಾದಾ ಹುಡ್ಡುಹಬ್ಬಕ್ಕೆ ವಿಶ್ ಮಾಡಿದ್ದಾರೆ. ವಿಷ್ಣು ಬಗ್ಗೆ ಹೆಚ್ಚೇನೂ ಹೇಳದ ರಮೇಶ್ ''ನೆನಪುಗಳ ಮಾತು ಮಧುರ'' ಎಂದಿದ್ದಾರೆ.


Click it and Unblock the Notifications











