'ಸಾಧನೆ ಉಳಿದಿದೆ ಸಾಧಕ ಇಲ್ಲ, ಪ್ರಶಸ್ತಿ ಉಳಿದಿದೆ ವಿಜೇತ ಉಳಿಯಲಿಲ್ಲ'
ಟೂ ವ್ಹೀಲರ್ ಆಕ್ಸಿಡೆಂಟ್ ಅಂತೆ, ತಲೆಗೆ ಸ್ವಲ್ಪ ಪೆಟ್ಟಾಗಿದೆಯಂತೆ, ಅಪೋಲೋ ಆಸ್ಪತ್ರೆ ಅಂತೆ, ಈಗ ಪರ್ವಾಗಿಲ್ವಂತೆ, ತಲೆಗೆ ಜಾಸ್ತೀನೇ ಏಟು ಬಿದ್ದಿದೆಯಂತೆ, ಇವರು ಹಿಂದೆ ಕೂತಿದ್ರಂತೆ, ಈಗ ರೆಸ್ಪಾನ್ಸ್ ಮಾಡ್ತಿದಾರಂತೆ.......ಎಷ್ಟು ಅಂತೆಗಳು? ಇಷ್ಟೂ ಅಂತೆಗಳನ್ನ ಹೇಗೋ ತಡ್ಕೊಂಡ್ವಿ ಆದ್ರೆ 'ಉಳಿಯಲ್ವಂತೆ' ಅನ್ನೊ ಪದ ಕಿವಿಗೆ ಬಿದ್ದಾಕ್ಷಣ ಮನಸ್ಸಿಗೆ ಯಾಕೋ ಹಿಂಸೆ ಅನ್ನಿಸಕ್ಕೆ ಶುರುವಾಯ್ತು. ತುಂಬಾ ಜನರ ಮೊಗದಲ್ಲಿ ಸೂತಕದ ವಾತಾವರಣ ಗೋಚರಿಸಿತ್ತು.
ಎಂತಾ ಪ್ರೀತ್ಸೋ ಜೀವ ಅದು? ಗೊತ್ತಿರೊವ್ರು ಗೊತ್ತಿಲ್ಲದವ್ರು, ಆಪ್ತರು ಅಪರಿಚಿತರು ತಮ್ಮ ತಮ್ಮ ವಾಟ್ಸಪ್ ಸ್ಟೇಟಸ್ಗಳಲ್ಲಿ ಫೇಸ್ಬುಕ್ ಪೇಜ್ಗಳಲ್ಲಿ ಇವರ ತರಹೇವಾರಿ ಪಟ ಹಾಕ್ಕೊಂಡಿದ್ರು. ಇವರ ಚೇತರಿಕೆಗಾಗಿ ದೇವರಲ್ಲಿ ಬೇಡ್ತಿದ್ರು ದೇವರನ್ನೇ ಕಾಡ್ತಿದ್ರು, ಅಕ್ಷರಗಳಲ್ಲಿ ಅವಲತ್ತುಕೊಂಡರು ಅಕ್ಷರಶಃ ಅತ್ತುಕೊಂಡರು.
ಎಲ್ಲರೂ ಒಂದೇ ಕುಟುಂಬದವರಂತೆ ಒಕ್ಕೊರಲಿನಿಂದ ಅವರ ಹಾರೈಕೆಗಾಗಿ ಪ್ರಾರ್ಥಿಸಲು ತೊಡಗಿದರು. ಪವಾಡವೇನಾದರೂ ಜರುಗಿ ಅಪೋಲೋ ಆಸ್ಪತ್ರೆಯ ಆವರಣದಿಂದ ಅವ ಎದ್ದು ಬರುವ ಸುದ್ದಿ ಬರುತ್ತೇನೊ ಅಂತ ಕೊನೆಕ್ಷಣದವರೆಗೂ ಕಾದು ಕುಳಿತರು. ಉಹುಂ ಅದಾಗಲಿಲ್ಲ...... ದೇವರನ್ನೋ ಕರುಣಾಮಯಿ ಕಟುಕನಾಗಿಸಿಬಿಟ್ಟಿದ್ದ. ಮುಂದೆ ಓದಿ...

ತಪ್ಪಾಗಿದ್ದರೆ ಒಂದು ಎಚ್ಚರಿಕೆ ಕೊಡಬಹುದಿತ್ತು
ಕೋವಿಡ್ ಸಮಯದಲ್ಲಿ ಸಾವಿರಾರು ಜನಕ್ಕೆ ಅನ್ನ ಹಾಕಿದ ಕೈ, ಅದು ಗಾಡಿಯ ಎಕ್ಸಲೇಟರ್ ತಿರುಗಿಸಲಿಲ್ಲ, ತನ್ನ ಪಾಡಿಗೆ ತಾನು ತೆಪ್ಪಗೆ ಹಿಂಬದಿ ಕೂತಿದ್ದ, ಆದರೆ ಅವನ ಹಿಂದೆ ಜವರಾಯ ಕೂತಿದ್ದ ಅನ್ಸುತ್ತೆ. ವಿಜಿ ಕೆಟ್ಟವನಲ್ಲ ಹಂಗೂ ತಿಳಿಯದೇ ಏನಾದರೂ ತಪ್ಪೆಸಗಿದ್ರೆ ಒಂದು ಎಚ್ಚರಿಕೆ ನೀಡಬಹುದಾಗಿತ್ತು, ಕೈಯೋ ಕಾಲೋ ಮುರಿದುಹೋಗುವಂತೆ ಮಾಡಿ ಹೊಟ್ಟೆಯ ಮೇಲೆ ಹೊಡೆಯಬಹುದಾಗಿತ್ತು ಆದರೆ ಏಕಾಏಕಿ ತಲೆಯ ಮೇಲೆ ಹೊಡೆದುಬಿಟ್ಟಿದ್ದ ಯಾವ ಮಟ್ಟಕ್ಕೆಂದರೆ ತಲೆಯ ಮೆದುಳೇ ನಿಷ್ಕ್ರಿಯವಾಗುವಂತೆ.

ವಿಜಯ್ನನ್ನು ದೇವರನ್ನಾಗಿಸಿದ ಕುಟುಂಬ
ವಿಜಿ ತನ್ನದಲ್ಲದ ತಪ್ಪಿಗೆ ತಲೆಕೊಟ್ಟಿದ್ದ. ನಂತರ ಸಾವು ಬದುಕಿನ ಸಮರದಲ್ಲಿ 'ವಿಜಯ' ಯಾರ ಪಾಲೂ ಆಗಲಿಲ್ಲ, ಬದಲಾಗಿ ಪ್ರಜ್ಞೆ ಇಲ್ಲದೇ ಉಸಿರಾಡುತ್ತಿದ್ದ. ಅವರ ಮನೆಯವರು ದೇವ್ರಂತವ್ರು ಅಂಗಾಂಗ ದಾನಕ್ಕೆ ಸಮ್ಮತಿಸುವ ಮೂಲಕ ವಿಜಯ್ನನ್ನೇ ದೇವರನ್ನಾಗಿಸಿದ್ರು. ಅವರಲ್ಲಿ ದುಃಖದ ಜೊತೆ ಮನುಷ್ಯತ್ವವೂ ಮನೆ ಮಾಡಿತ್ತು.

ಸಾಧಿಸಿ ತೋರಿಸಿದ ಕಲಾವಿದ
ವಿಜಿ ಸಣ್ಣ ಹಳ್ಳಿಯಿಂದ ಸಿನಿಮಾ ನಟನಾಗ್ಬೇಕು ಅನ್ನೋ ದೊಡ್ಡ ಕನಸು ಹೊತ್ತು ಬಂದವ, ಅದರಂತೆ ಆದವ, ಮುಂದೆ ನಟನೆಯಲ್ಲಿ ಸಾಧಿಸಿ.... ಬರೋಬ್ಬರಿ ಇಪ್ಪತ್ತೆಂಟು ವರುಷಗಳ ಸುದೀರ್ಘ ಅಂತರದ ನಂತರ ನಮ್ಮ ನೆಲಕ್ಕೆ ನ್ಯಾಷನಲ್ ಅವಾರ್ಡ್ ತಂದುಕೊಟ್ಟಂತಹ ನಟ. ನಾವು ಬೇರೆ ಭಾಷೆಯ ಮೇರು ನಟರೊಂದಿಗೆ ಹೋಲಿಸಬಹುದಾದಂತಹ ಮತ್ತು ನಟನೆಯಲ್ಲಿ ಅಂತಾವ್ರನ್ನೂ ಸೋಲಿಸಬಹುದಾದಂತಹ ನಟ.
Recommended Video

ರಂಗಭೂಮಿಯಿಂದ ರುದ್ರಭೂಮಿಗೆ....
ಇಂತಹ ನಟನ 'ಸಂಚಾರ' ರಂಗಭೂಮಿಯಿಂದ ಆರಂಭವಾಗಿ ಇಷ್ಟು ಬೇಗ ರುದ್ರಭೂಮಿಯ ಕಡೆ ತಿರುಗುತ್ತದೆ ಅಂದ್ರೆ ಅದು ದುರಂತವೂ ಹೌದು ಕನ್ನಡಿಗರ ದೌರ್ಭಾಗ್ಯವೂ ಹೌದು. ಪಂಚಭಾಷೆಗಳಲ್ಲಿ ನಟಿಸಬೇಕಿದ್ದ ಪ್ರತಿಭೆಯೊಂದು ಪಂಚನಹಳ್ಳಿಯ ಪಂಚಭೂತಗಳಲ್ಲಿ ಲೀನವಾಗಿದೆ. ಕಲೆ ಉಳಿದಿದೆ ಕಲಾವಿದ ಉಳಿಯಲಿಲ್ಲ, ಸಾಧನೆ ಉಳಿದಿದೆ ಸಾಧಕ ಉಳಿಯಲಿಲ್ಲ, ಪ್ರಶಸ್ತಿ ಉಳಿದಿದೆ ಪ್ರಶಸ್ತಿ ವಿಜೇತ ಉಳಿಯಲಿಲ್ಲ.


Click it and Unblock the Notifications











