ಪುನೀತ್ 'ಯಾರೇ ಕೂಗಾಡಲಿ' ಚಿತ್ರದ ಪ್ರೀವ್ಯೂ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಯಾರೇ ಕೂಗಾಡಲಿ' ಚಿತ್ರ ಡಿಸೆಂಬರ್ 20ರಂದು ತೆರೆಗೆ ಬರುತ್ತಿದೆ. ಈ ವರ್ಷ ತೆರೆಕಾಣುತ್ತಿರುವ ಪುನೀತ್ ಅಭಿನಯದ ಎರಡನೇ ಚಿತ್ರವಿದು. ತಮಿಳಿನ 'ಪೊರಾಲಿ' ಚಿತ್ರದ ರೀಮೇಕ್ ಆದ ಈ ಚಿತ್ರದ ಬಗ್ಗೆ ಪುನೀತ್ ಅಭಿಮಾನಿಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಮೂಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸಮುದ್ರ ಖಣಿ ಅವರೇ ಕನ್ನಡ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ಸರಿ ಕನ್ನಡ ಚಿತ್ರಕ್ಕೆ ಏನು ಟೈಟಲ್ ಇಡಬೇಕು ಎಂದು ಭಾರಿ ಚರ್ಚೆ ನಡೆಯಿತು. ಕಡೆಗೆ ಅಣ್ಣಾವ್ರ 'ಸಂಪತ್ತಿಗೆ ಸವಾಲ್' ಚಿತ್ರದ "ಯಾರೇ ಕೂಗಾಡಲಿ ಊರೇ ಹೋರಾಡಲಿ..." ಎಂಬ ಹಾಡನ್ನೇ ಚಿತ್ರಕ್ಕೆ ಶೀರ್ಷಿಕೆಯಾಗಿ ಆಯ್ಕೆ ಮಾಡಲಾಯಿತು.

ಡೌಟೇ ಇಲ್ಲ ಎಂಜಾಯ್ ಮಾಡಬಹುದಾದ ಚಿತ್ರ
ತಮಿಳಿನಲ್ಲಿ 'ಪೊರಾಲಿ' ಎಂದರೆ ಯೋಧ, ಸಿಪಾಯಿ, ಸೈನಿಕ ಎಂಬ ಅರ್ಥಗಳಿವೆ. ಆದರೆ ಇಲ್ಲಿ ಯಥಾವತ್ತಾಗಿ ಭಾಷಾಂತರ ಮಾಡದೆ 'ಯಾರೇ ಕೂಗಾಡಲಿ' ಎಂದು ಹೆಸರಿಟ್ಟಿರುವುದು ವಿಶೇಷ. ತಮಿಳಿನ 'ಪೊರಾಲಿ' ಚಿತ್ರದ ಬಗ್ಗೆ ಮಾಧ್ಯಮಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಎಂಜಾಯ್ ಮಾಡಬಹುದಾದ ಚಿತ್ರವಾಗಿದ್ದು ದೊಡ್ಡ ಸಂದೇಶವೂ ಇದೆ.

ಪ್ರೇಕ್ಷಕರ ನಾಡಿಮಿಡಿತ ಬಲ್ಲವರಾರು ಗುರು?
ಬಹುತೇಕ ಮಾಧ್ಯಮಗಳು 'ಪೊರಾಲಿ' ಚಿತ್ರಕ್ಕೆ ಒಟ್ಟು 5 ಸ್ಟಾರ್ ಗಳಿಗೆ 4 ಸ್ಟಾರ್ ಗಳನ್ನು ನೀಡಿದ್ದವು. ಚಿತ್ರದಲ್ಲಿ ಇನ್ನೊಂದಿಷ್ಟು ಪವರ್ ಬೇಕಾಗಿತ್ತು ಎಂದು ಕೆಲವರು ಕೊರಗಿದ್ದರು. ಕೆಲವರಂತೂ 2 ಸ್ಟಾರ್ ಕೊಟ್ಟು ಮರುಗಿದ್ದರು. ಆದರೆ ಚಿತ್ರವೊಂದರ ಯಶಸ್ಸು ವಿಮರ್ಶೆಗಳ ಮೇಲೆ ನಿಂತಿರುವುದಿಲ್ಲವಲ್ಲ. ಪ್ರೇಕ್ಷಕರ ನಾಡಿಮಿಡಿತ ಬಲ್ಲವರಾರು?

ಚಿತ್ರ ಇನ್ನೊಂದು ಆಕರ್ಷಣೆ ಚಾರ್ಮಿ ಕೌರ್
ಈಗ ಐಟಂ ಹಾಡುಗಳಿಲ್ಲದೆ ಚಿತ್ರವೇ ಇಲ್ಲ ಎಂಬಂತಹ ಪರಿಸ್ಥಿತಿ ಇದೆ. 'ಯಾರೇ ಕೂಗಾಡಲಿ' ಚಿತ್ರವೂ ಇದಕ್ಕೆ ಹೊರತಾಗಿಲ್ಲ. ಇಲ್ಲೂ "ಹಲೋ 123 ಮೈಕ್ ಟೆಸ್ಟಿಂಗ್..." ಎಂಬ ಐಟಂ ಹಾಡಿಗೆ ರಸಪೂರಿ ಚೆಲುವೆ ಚಾರ್ಮಿ ಕೌರ್ ಸೊಂಟ ಕುಲುಕಿಸಿದ್ದಾರೆ.

ಛಾಯಾಗ್ರಹಣ ಚಿತ್ರದ ಮತ್ತೊಂದು ಹೈಲೈಟ್
'ಪೊರಾಲಿ' ಚಿತ್ರಕ್ಕೆ ಎಸ್.ಆರ್. ಕಾತ್ತಿರ್ ಕ್ಯಾಮೆರಾ ಹಿಡಿದಿದ್ದರು. ಆದರೆ ಇಲ್ಲಿ ತಮಿಳಿನ ಸುಕುಮಾರ್ ಕ್ಯಾಮೆರಾ ಹಿಂದಿದ್ದಾರೆ. ಅವರ ಈ ಹಿಂದಿನ ತಮಿಳು 'ಕುಂಕಿ' ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಬಾರಿಯೂ ಕ್ಯಾಮೆರಾದಲ್ಲೇ ಸೆಳೆದಿದ್ದಾರೆ ಎನ್ನುತ್ತವೆ ಮೂಲಗಳು.

ಇಷ್ಟಕ್ಕೂ ಚಿತ್ರದ ಕಹಾನಿ ಏನು ಗುರು?
ಒಂದು ಸ್ಥಳದಿಂದ ಚಿತ್ರದ ನಾಯಕ ನಟ ಹಾಗೂ ಅವನ ಗೆಳೆಯ ಇಬ್ಬರೂ ಎಸ್ಕೇಪ್ ಆಗುತ್ತಾರೆ. ಮೂಲ ಚಿತ್ರದಲ್ಲಿ ಚೆನ್ನೈಗೆ ಹೋಗುತ್ತಾರೆ. ಇಲ್ಲಿ ಬಹುಶಃ ಬೆಂಗಳೂರು ಅಥವಾ ಮೈಸೂರು ಇರಬಹುದು. ಪೆಟ್ರೋಲ್ ಬಂಕ್ ನಲ್ಲಿ ಕೆಲಸಕ್ಕೆ ಸೇರುತ್ತಾರೆ. ನಾಯಕನ ಕಣ್ಣಿಗೆ ಚೆಂದುಳ್ಳಿ ಚೆಲುವೆಯೊಬ್ಬಳು ಬೀಳುತ್ತಾಳೆ. ಇವಳು ಸಿಕ್ತಾಳಾ... ಕೈ ಕೊಡ್ತಾಳಾ... ಯಾವನಿಗ್ ಗೊತ್ತು... ಯಾವನಿಗ್ ಗೊತ್ತು. ಚಿತ್ರ ವಿಮರ್ಶೆಗೆ ನಿರೀಕ್ಷಿಸಿ.
ಈ ಶೀರ್ಷಿಕೆಯನ್ನು ಇಡಿ ಎಂದು ಸಲಹೆ ನೀಡಿದವರು 'ಮಠಾ'ಧೀಶರಾದ ಗುರುಪ್ರಸಾದ್. ಅವರೇ ಚಿತ್ರಕ್ಕೆ ಸಂಭಾಷಣೆಯನ್ನೂ ಹೆಣೆದಿದ್ದಾರೆ. ಜೂನ್ 13ರಂದು ಸೆಟ್ಟೇರಿದ ಈ ಚಿತ್ರ ಡಿಸೆಂಬರ್ 20ಕ್ಕೆ ತೆರೆಕಾಣುತ್ತಿದೆ. ಸಮುದ್ರ ಖಣಿ ಅವರ ಪಕ್ಕಾ ಪ್ಲಾನ್ ನಂತೆಯೇ ಚಿತ್ರ ನಿಗದಿತ ಸಮಯದಲ್ಲಿ ತೆರೆಕಾಣುತ್ತಿದೆ.
ರಾಜ್ ಕುಮಾರ್ ಬ್ಯಾನರ್ ಚಿತ್ರ ಎಂದ ಹೇಳಬೇಕೆ. ಯಾವುದಕ್ಕೂ ಕೊರತೆ ಇರಲ್ಲ. ಪ್ರೇಕ್ಷಕರ ನಿರೀಕ್ಷೆಗಳು ಹೆಚ್ಚಾಗಿಯೇ ಇರುತ್ತವೆ. ಮನೆಮಂದಿಯಲ್ಲಾ ನೋಡುವಂತಹ ಒಂದು ಒಳ್ಳೆಯ ಚಿತ್ರ ಕೊಡುತ್ತಾರೆ ಎಂಬ ಭಾವನೆ ಇದೆ. ಆ ಮಾತನ್ನು ಪೂರ್ಣಿಮಾ ಎಂಟರ್ ಪ್ರೈಸಸ್, ವಜ್ರೇಶ್ವರಿ ಕಂಬೈನ್ಸ್ ಉಳಿಸಿಕೊಂಡಿವೆ ಕೂಡ.


Click it and Unblock the Notifications











