ಕನ್ನಡದ ಮೊದಲ ವಾಕ್ಚಿತ್ರದ ನಟಿ ಎಸ್ ಕೆ ಪದ್ಮಾದೇವಿ ನಿಧನ
ಕನ್ನಡ ಚಿತ್ರರಂಗದ ಮೊದಲ ವಾಕ್ಚಿತ್ರ 'ಭಕ್ತಧ್ರುವ' ಸಿನಿಮಾದ ನಟಿ ಎಸ್ ಕೆ ಪದ್ಮಾದೇವಿ ನಿಧನ ಹೊಂದಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಜಯನಗರದ ತಮ್ಮ ನಿವಾಸದಲ್ಲಿ ಇಂದು ವಿಧಿವಶರಾಗಿದ್ದಾರೆ. 'ಸತಿ ಸುಲೋಚನ' ಮೊದಲು ಬಿಡುಗಡೆಯಾದ ಕನ್ನಡ ವಾಕ್ಚಿತ್ರವಾಗಿದ್ದರೂ, ಮೊದಲು ನಿರ್ಮಾಣವಾದ ವಾಕ್ಚಿತ್ರ 'ಭಕ್ತ ಧ್ರುವ''.
ನಟಿ ಎಸ್ ಕೆ ಪದ್ಮಾದೇವಿ ಬಳ್ಳಾರಿ ರಾಘವಾಚಾರ್ಯರ ಮೂಲಕ ರಂಗಭೂಮಿ ಪ್ರವೇಶಿಸಿದವರು. ಹೆಚ್.ಎಲ್.ಎನ್.ಸಿಂಹ ಅವರ ನಾಟಕ ಕಂಪೆನಿಯಲ್ಲಿ ಅಭಿನಯಿಸಿದರು. ನಂತರ ಸ್ವಂತ ನಾಟಕ ಸಂಸ್ಥೆಯನ್ನು ಕಟ್ಟಿದರು. ನಂತರ ಚಿತ್ರರಂಗಕ್ಕೆ ಕಾಲಿಟ್ಟರು.
1934 ರಲ್ಲಿ ಬಂದ 'ಭಕ್ತ ಚಿತ್ರ' ಇವರ ಮೊದಲ ಸಿನಿಮಾ ಆಗಿತ್ತು. ಇದು ಕನ್ನಡದ ಮೊದಲ ವಾಕ್ಚಿತ್ರ ಕೂಡ ಹೌದು. ಆ ನಂತರ 1936 ರಲ್ಲಿ 'ಸಂಸಾರ ನೌಕ' ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಅವರಿಗೆ ಒಳ್ಳೆಯ ಹೆಸರು ತಂದು ಕೊಟ್ಟಿತ್ತು. ಚಿತ್ರದಲ್ಲಿ ನಟಿಸುವುದರ ಜೊತೆಗೆ ನಾಲ್ಕು ಹಾಡುಗಳನ್ನು ಹಾಡಿದರು. ಒಂದು ಹಾಡನ್ನು ಸ್ವತಃ ಇವರೇ ವೀಣೆ ನುಡಿಸಿಕೊಂಡು ಹಾಡಿದ್ದರು.

'ಜಾತಕ ಫಲ', 'ವಸಂತಸೇನ', 'ಭಕ್ತ ಸುಧಾಮ' ಚಿತ್ರಗಳಲ್ಲಿಯೂ ನಟಿಸಿದರು. 'ಭಕ್ತಸುಧಾಮ' ಚಿತ್ರದಲ್ಲಿ ಮಧುಗಿರಿ ಮೀನಾಕ್ಷಿ ಎಂದು ಹೆಸರು ಬದಲಾಯಿಸಿಕೊಂಡರು. 'ಮುಕ್ತಿ', 'ಅಮರ ಮಧುರ ಪ್ರೇಮ', 'ಸಂಕ್ರಾಂತಿ' ಚಿತ್ರಗಳಲ್ಲಿ ಅಭಿನಯಿಸಿದರು. ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಕ್ರೌರ್ಯ' ಚಿತ್ರದ ರೇಣುಕಮ್ಮ ಮುರಗೊಡು ಅವರ ಪಾತ್ರಕ್ಕೆ ಕಂಠದಾನ ಮಾಡಿದರು. ಎರಡು ತೆಲುಗು ಚಿತ್ರಗಳಲ್ಲಿಯೂ ಅಭಿನಯಿಸಿದರು.

ಸಿನಿಮಾಗಳ ನಂತರ ಮತ್ತೆ ರಂಗಭೂಮಿಗೆ ಮರಳಿದರು. ಅಲ್ಲಿಯೇ ತೊಡಗಿಕೊಂಡು ಬಹಳ ಕಾಲ ಚಲನಚಿತ್ರದ ಅಭಿನಯ ನಿಲ್ಲಿಸಿದರು. ಮಗ ನಂದಕಿಶೋರ್ ನಿರ್ದೇಶಿಸಿದ 'ಕಿರಣ' ಟೆಲಿ ಫಿಲಂನಲ್ಲಿ ಅಜ್ಜಿ ಪಾತ್ರ ಮಾಡಿದರು. ಆಕಾಶವಾಣಿಯಲ್ಲಿ ಅನೇಕ ವರ್ಷಗಳು ಕೆಲಸ ಮಾಡಿದ ಪದ್ಮಾದೇವಿಯವರು ಆ ಮಾಧ್ಯಮದಲ್ಲಿಯೂ ಹೆಸರು ಮಾಡಿದವರು.


Click it and Unblock the Notifications











