ಭಂಡಾರಿ ಬ್ರದರ್ಸ್ ಪರವಾಗಿ ನಿಂತ ಕನ್ನಡ ಗ್ರಾಹಕರ ಕೂಟ!
''ರಾಜರಥ' ಸಿನಿಮಾ ನೋಡದವರು ಕಚಡಾ, ಲೋಫರ್ ನನ್ ಮಕ್ಳು'' ಎಂದ ಅನೂಪ್ ಹಾಗೂ ನಿರೂಪ್ ಭಂಡಾರಿ ವಿರುದ್ಧ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅನೂಪ್ ಹಾಗೂ ನಿರೂಪ್ ವಿರುದ್ಧ ಕನ್ನಡ ಪ್ರೇಕ್ಷಕರು ಗುಡುಗುತ್ತಿದ್ದಾರೆ. ಹೀಗಿರುವಾಗಲೇ, ಭಂಡಾರಿ ಸಹೋದರರ ಬೆಂಬಲಕ್ಕೆ ಕನ್ನಡ ಗ್ರಾಹಕರ ಕೂಟ ನಿಂತಿದೆ. ನಿರ್ದೇಶಕ ಅನೂಪ್ ಭಂಡಾರಿ ಮತ್ತು ನಟ ನಿರೂಪ್ ಭಂಡಾರಿ ಪರವಾಗಿ ಕನ್ನಡ ಗ್ರಾಹಕರ ಕೂಟದ ವಸಂತ್ ಶೆಟ್ಟಿ ಎಂಬುವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಲೇಖನವನ್ನ ಇಲ್ಲಿ ಪ್ರಕಟ ಮಾಡುತ್ತಿದ್ದೇವೆ. ಓದಿರಿ - ಸಂಪಾದಕ
''ಅನೂಪ್ ಮತ್ತು ನಿರೂಪ್ ಮಾತಾಡಿದ್ದು ತಪ್ಪು. ಅದಕ್ಕೆ ತಕ್ಷಣ ಕ್ಷಮೆಯನ್ನೂ ಅವರು ಕೇಳಿದರು. ಉದ್ಯಮದಲ್ಲಿ ಕಳೆದ ನಾಲ್ಕೈದು ವರ್ಷದಿಂದ ಇರುವ ಅವರು ಎಂದಿಗೂ ಲೂಸ್ ಆಗಿ ಮಾತಾಡಿದ್ದು ನಾನಂತೂ ಕಂಡಿಲ್ಲ''
''ರಂಗಿತರಂಗ ಬಿಡುಗಡೆಯಾದಾಗ ಅದನ್ನು ಹೊರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ತೋರಿಸಿ ಕನ್ನಡಕ್ಕೆ ಒಂದು ಮಾರುಕಟ್ಟೆ ಕಟ್ಟಬೇಕು ಎಂದು ಶ್ರಮಿಸಿದವರು. ಸಾಫ್ಟ್ ವೇರ್ ಉದ್ಯಮದ ದೊಡ್ಡ ಸಂಬಳದ ಕೆಲಸ ಬಿಟ್ಟು ಕನ್ನಡ ಚಿತ್ರ ಮಾಡಲು ಶ್ರಮಿಸಿದ ಅವರನ್ನು ಈ ಪಾಟಿ ಗೋಳು ಹೊಯ್ದುಕೊಳ್ಳುವ ಅಗತ್ಯವಿರಲಿಲ್ಲ''

''ಕನ್ನಡ ಚಿತ್ರೋದ್ಯಮದಲ್ಲಿ ನೆಲೆಯೂರಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಕನ್ನಡದಲ್ಲಿ ಹೊಸತನದ ಚಿತ್ರ ಮಾಡುವವರು, ಉದ್ಯಮವನ್ನು ವೃತ್ತಿಪರವಾಗಿ ನಡೆಸುವಂಥವರು ಬೇಡ. ಅವರಿಗೇನಿದ್ದರೂ ಸಣ್ಣ ಉದ್ಯಮ ಉಳಿಸಿಕೊಂಡು, ತಮಗೆ, ತಮ್ಮವರಿಗೆ ಬೇಕಾದ ಅನುಕೂಲ ಮಾಡಿಕೊಂಡು, ಕನ್ನಡ ಸಂಸ್ಕೃತಿ ರಕ್ಷಣೆಯ ಮುಖವಾದ ಹಾಕಿಕೊಂಡು ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳುವುದೇ ಮುಖ್ಯ. ಇದು ಒಂದು ಆಯಾಮ''
''ಇನ್ನೊಂದು ಆಯಾಮವೆಂದರೆ ನಮ್ಮ ನಗರಗಳಲ್ಲಿ ಹುಟ್ಟಿ, ಕಾನ್ವೆಂಟುಗಳಲ್ಲಿ ಓದಿ, ಕನ್ನಡದ ನೆಲದ ಸಂಸ್ಕೃತಿ, ಭಾಷೆ, ಭಾಷಿಕರ ಕಳವಳಗಳ ಯಾವ ಪರಿಚಯವೂ ಇಲ್ಲದೆ ತಮ್ಮದೇ ಕಾಸ್ಮೋ ಲಿಬರಲ್ ಜಗತ್ತಲ್ಲಿ ಬದುಕುತ್ತ ಅಚಾನಕ್ ಆಗಿ ಕನ್ನಡ ಚಿತ್ರೋದ್ಯಮಕ್ಕೆ ಬಂದು ಕೆಲವು ಅರ್ಬನ್ ಸೆಟಪ್ಪಿನ ಸಿನೆಮಾ ಮಾಡಿ, ಅದುವೇ ಕನ್ನಡ ಇನ್ನುಳಿದದ್ದು ಲೆಕ್ಕಕ್ಕಿಲ್ಲ ಅನ್ನುವಂತೆ ಇರುವ ಪ್ರತಿಭೆಗಳು ಕನ್ನಡದಲ್ಲಿದ್ದಾರೆ. ಅವರ ಕೊಡುಗೆಯೂ ಕನ್ನಡಕ್ಕೆ ಬೇಕು. ಆದರೆ ಅವರಿಗೆ ಸರಿಯಾದ ಒಂದು ಗ್ರೌಂಡಿಂಗ್ ಇಲ್ಲದ ಕಾರಣ ಜನರೊಡನೆ ಒಂದು ಭಾವನಾತ್ಮಕ ನೆಂಟು ಇಲ್ಲ. ಹೀಗಾಗಿ ಅವರಿಗೆ ಏನಾದರೂ ತೊಂದರೆ ಆದಾಗ ಅವರ ಜೊತೆ ನಿಲ್ಲಲು ಯಾರೂ ಇರಲ್ಲ''
''ನಮಗೆ ಕನ್ನಡದ ಜೊತೆ ಆಳವಾದ ನೆಂಟಿರುವ, ಹೊಸ ಜಗತ್ತಿನ ತುಡಿತಗಳನ್ನು ಅರಿತಿರುವ, ಗ್ಲೋಬಲ್ ಆದರೂ ಲೋಕಲ್ ಇರುವ ಗ್ಲೋಕಲ್ ಕನ್ನಡಿಗ ಪ್ರತಿಭೆಗಳು ಈಗ ಇನ್ನಷ್ಟು ಬೇಕಿದ್ದಾರೆ. ತಮಿಳಿನಲ್ಲಿ ಅಂತಹದೊಂದು ಪ್ರತಿಭೆಗಳ ದೊಡ್ಡ ಗುಂಪನ್ನೇ ಗುರುತಿಸಬಹುದು'' - ವಸಂತ ಶೆಟ್ಟಿ


Click it and Unblock the Notifications











