'ಬಂಗಾರದ ಮನುಷ್ಯ' ಸಿದ್ಧಲಿಂಗಯ್ಯ ಪುತ್ರನಿಂದ ತಾಯಿಗೆ ಕಿರುಕುಳ? ಮಗನ ವಿರುದ್ಧ ದೂರು ದಾಖಲಿಸಿದ ಹಿರಿಯ ನಟಿ
'ಬಂಗಾರದ ಮನುಷ್ಯ', 'ಬೂತಯ್ಯನ ಮಗ ಅಯ್ಯು', 'ಮೇಯರ್ ಮುತ್ತಣ್ಣ' ಅಂತಹ ಎವರ್ಗ್ರೀನ್ ಸಿನಿಮಾಗಳನ್ನು ನೀಡಿದ್ದ ಕನ್ನಡದ ಲೆಜೆಂಡರಿ ನಿರ್ದೇಶಕ ಸಿದ್ಧಲಿಂಗಯ್ಯ. ಸಮಾಜಕ್ಕೆ ಸಂದೇಶ ನೀಡುವಂತಹ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕನ ಮನೆಯಲ್ಲೊಂದು ಘಟನೆ ನಡೆದಿದೆ.
ನಿರ್ದೇಶಕ ಸಿದ್ಧಲಿಂಗಯ್ಯ ಕನ್ನಡ ಸಿನಿಪ್ರೇಮಿಗಳನ್ನು, ಅಭಿಮಾನಿಗಳನ್ನು ಅಗಲಿ 8 ವರ್ಷಗಳಾಗಿವೆ. ಅವರ ಪತ್ನಿ ಶ್ಯಾಮಲಾ ದೇವಿ ಮಗನೊಂದಿಗೆ ವಾಸವಿದ್ದರು. ಆದ್ರೀಗ ಮಗ ಹಾಗೂ ಸೊಸೆಯಿಂದ ಮಾನಸಿಕ ಕಿರುಕುಳ ಆಗುತ್ತಿದೆ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಅಂದ್ಹಾಗೆ, ಸ್ಯಾಂಡಲ್ವುಡ್ನ ಲೆಜೆಂಡರಿ ನಿರ್ದೇಶಕ ಸಿದ್ದಲಿಂಗಯ್ಯನವರ ಪತ್ನಿ ಶ್ಯಾಮಲಾದೇವಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಹಿರಿಯ ನಟಿಯೀಗ ಸಂಕಷ್ಟಕ್ಕೆ ಸಿಲುಕಿದ್ದು, ಕಳೆದ 5 ವರ್ಷಗಳಿಂದ ತಮ್ಮದೇ ಮನೆಯಲ್ಲಿ ಮಗ-ಸೊಸೆಯಿಂದ ಕಿರುಕುಳ ಅನುಭವಿಸುತ್ತಿದ್ದು, ತಮ್ಮದೇ ಮನೆಯಲ್ಲಿ ಬಂಧಿಯಾಗಿರುವುದಾಗಿ ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾರೆ.
ಹಿರಿಯ ನಟಿ ಶ್ಯಾಮಲಾದೇವಿ ಪ್ರಕಾರ, ಇವರ ಹೆಸರಿನಲ್ಲಿ ಮನೆಯಿದೆ. ಆ ಮನೆಯ ಮೇಲೆ ಮಗ ಹಾಗೂ ಸೊಸೆಯ ಕಣ್ಣು ಬಿದ್ದಿದೆ. ಹೀಗಾಗಿ ತಮ್ಮ ಹೆಸರಿಗೆ ಮಾಡಿಕೊಡುವಂತೆ ದಿನ ನಿತ್ಯ ಕಿರುಕುಳ ನೀಡುತ್ತಿದ್ದಾರೆಂದು ಮಗ ಹಾಗೂ ಸೊಸೆಯ ಮೇಲೆ ಆರೋಪ ಮಾಡಿದ್ದಾರೆ.
ಈ ಹಿಂದೆ ಕೂಡ ಇಂತಹದ್ದೇ ಘಟನೆ ನಡೆದಿತ್ತು. ಶ್ಯಾಮಲಾ ದೇವಿಯವರು ಹಿರಿಯ ನಾಗರಿಕರ ವೇದಿಕೆಗೆ ದೂರು ನೀಡಿದ್ದರು. ಆ ಬಳಿಕ ಮಗ ಸೊಸೆಯನ್ನ ಹೊರಗೆ ಹಾಕಲಾಗಿತ್ತು. ಆದರೆ, ತಪ್ಪೊಪ್ಪಿಕೊಂಡು ಮನೆ ಸೇರಿಕೊಂಡು ತೊಂದರೆ ಕೊಡುತ್ತಿದ್ದಾರೆ ಎಂದು ಮಗ ನಿತಿನ್ ಹಾಗೂ ಸೊಸೆ ಸ್ಮಿತಾ ವಿರುದ್ಧ ದೂರು ದಾಖಲಿಸಿದ್ದಾರೆ. ಅಲ್ಲದೆ ಈ ಕಿರುಕುಳದಿಂದ ಮುಕ್ತಿ ನೀಡುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.
ಶ್ಯಾಮಲಾ ದೇವಿಯವರ ದೂರಿನ ಅನ್ವಯ, ಮಗ ನಿತಿನ್ ಹಾಗೂ ಸೊಸೆಯ ವಿರುದ್ಧ ದೂರು ದಾಖಲಾಗಿದೆ. ಪೊಲೀಸ್ ಕಮಿಷನರ್ ಕಚೇರಿಯಿಂದ ಬಸವನಗುಡಿ ಠಾಣೆಗೆ ದೂರು ವರ್ಗಾವಣೆ ಆಗಿದ್ದು, ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ.


Click it and Unblock the Notifications











