ತೆಲುಗಿನಲ್ಲಿ 'ಬದ್ಮಾಶ್' ಆಗ್ತಾರಾ ಅಲ್ಲು ಅರ್ಜುನ್.?
ಧನಂಜಯ್ ಅಭಿನಯದ ಬದ್ಮಾಶ್ ಚಿತ್ರವನ್ನ ತೆಲುಗಿನಲ್ಲಿ ರಿಮೇಕ್ ಮಾಡಲು ನಿರ್ಮಾಣ ಸಂಸ್ಥೆಯೊಂದು ಮುಂದೆ ಬಂದಿದೆ. ಈ ಚಿತ್ರದಲ್ಲಿ ತೆಲುಗಿನ ಸ್ಟಾರ್ ನಟನನ್ನ ಕರೆತರುವ ಯೋಚನೆಯಲ್ಲಿದ್ದಾರೆ. ಅದು ಯಾರು ? ಯಾವ ಸಂಸ್ಥೆ ಅಂತ ಇಲ್ಲಿದೆ ನೋಡಿ...
ಬದ್ಮಾಶ್' ಚಿತ್ರದ ಟೀಸರ್ ನೋಡಿ ಬಾಲಿವುಡ್ ಬಾಕ್ಸ್ ಆಫೀಸ್ 'ಟೈಗರ್' ಸಲ್ಮಾನ್ ಖಾನ್ ಭೇಷ್ ಅಂದಿದ್ದರು. ನಟ ರಣದೀಪ್ ಹೂಡಾ ಮೆಚ್ಚಿಕೊಂಡಿದ್ದರು. ಇಬ್ಬರಿಗೂ 'ಬದ್ಮಾಶ್' ರೀಮೇಕ್ ಮಾಡುವ ಆಸೆ ತೋರಿದ್ದರು.
ಇತ್ತೀಚೆಗಷ್ಟೆ 'ಕರುನಾಡ ಚಕ್ರವರ್ತಿ' ಡಾ.ಶಿವರಾಜ್ ಕುಮಾರ್ ಕೂಡ ಧನಂಜಯ್ ಮತ್ತು ಸಂಚಿತಾ ಶೆಟ್ಟಿ ಜೋಡಿಯಾಗಿ ನಟಿಸಿರುವ 'ಬದ್ಮಾಶ್' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಈಗ ಈ ಚಿತ್ರಕ್ಕೆ ಟಾಲಿವುಡ್ ನಿಂದಲ್ಲೂ ಬಹುಬೇಡಿಕೆ ಬಂದಿದೆ.[ಸ್ಪೆಷಲ್ ವ್ಯಕ್ತಿಯಿಂದ 'ಬದ್ಮಾಶ್' ಸ್ಪೆಷಲ್ ಟ್ರೈಲರ್ ಬಿಡುಗಡೆ ]
ಹೌದು, 'ಬದ್ಮಾಶ್' ಟ್ರೈಲರ್ ಯೂಟ್ಯೂಬ್ ನಲ್ಲಿ 50 ಸಾವಿರಕ್ಕೂ ಹೆಚ್ಚು ಹಿಟ್ಸ್ ಪಡೆದು ಎಲ್ಲರ ಗಮನ ಸೆಳೆದಿದೆ. ಈ ಟ್ರೇಲರ್ ನೋಡಿದ ತೆಲುಗು ನಿರ್ಮಾಪಕರು, 'ಬದ್ಮಾಶ್' ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ರವರಿಗೆ ಫೋನ್ ಹಾಕಿದ್ದಾರೆ. ಮುಂದಿನ ಬೆಳವಣಿಗೆ ಏನಾಯ್ತು ಎಂಬ ವರದಿ ಇಲ್ಲಿದೆ ನೋಡಿ....

ಪಕ್ಕದ ರಾಜ್ಯದಲ್ಲಿ 'ಬದ್ಮಾಶ್'
ಈಗಾಗಲೇ ಬಾಲಿವುಡ್ ಸ್ಟಾರ್ ಗಳ ಮನಗೆದ್ದಿರುವ 'ಬದ್ಮಾಶ್' ಚಿತ್ರ, ಈಗ ಪಕ್ಕದ ತೆಲುಗು ನಾಡಿನಲ್ಲೂ ಭಾರಿ ಸುದ್ದಿ ಮಾಡಲಿದೆ. ತೆಲುಗಿನ ದೊಡ್ಡ ನಿರ್ಮಾಣ ಸಂಸ್ಥೆಯೊಂದು ಕನ್ನಡದ ಈ ಚಿತ್ರವನ್ನ ನೋಡಿ ಫಿದಾ ಆಗಿದೆ. ಅದರ ಪರಿಣಾಮ 'ಬದ್ಮಾಶ್' ತೆಲುಗಿಗೆ ರೀಮೇಕ್ ಆಗಲಿದೆ.

ಮೆಚ್ಚಿಕೊಂಡ ಪಿ.ವಿ.ಪಿ ಪ್ರೊಡಕ್ಷನ್ಸ್
'ವಿಶ್ವರೂಪಂ', 'ಬ್ರಹ್ಮೋತ್ಸವಂ' ನಂತಹ ಅದ್ದೂರಿ ಚಿತ್ರಗಳನ್ನು ನೀಡಿದ ಪಿ.ವಿ.ಪಿ ಪ್ರೊಡಕ್ಷನ್ಸ್ ನ ಪ್ರಸಾದ್ ಪೋಟ್ಲೂರಿ ರವರಿಗೆ, 'ಬದ್ಮಾಶ್' ಚಿತ್ರದ ಟ್ರೇಲರ್ ನೋಡಿದ್ಮೇಲೆ, ಪೂರ್ತಿ ಸಿನಿಮಾ ನೋಡುವ ಬಯಕೆ ಆಗಿದೆ. ಈ ವಿಚಾರ ನಿರ್ದೇಶಕ ಆಕಾಶ್ ಶ್ರೀವತ್ಸ ರವರಿಗೆ ತಿಳಿದ ಕೂಡಲೆ ಹೈದರಾಬಾದಿನಲ್ಲಿ ಪ್ರಸಾದ್ ಪೋಟ್ಲೂರಿ ರವರಿಗೊಂದು ಸ್ಪೆಷಲ್ ಶೋ ಆರೇಂಜ್ ಮಾಡಲಾಯ್ತು. 'ಬದ್ಮಾಶ್' ಕಣ್ತುಂಬಿಕೊಂಡ ಮೇಲೆ ಚಿತ್ರವನ್ನ ತೆಲುಗಿಗೆ ರೀಮೇಕ್ ಮಾಡಲು ಸಂಸ್ಥೆ ಮುಂದಾಗಿದೆ.

'ಬದ್ಮಾಶ್' ನೋಡಿದ ಮೇಲೆ ಹೊಗಳಿಕೆ
'ಬದ್ಮಾಶ್' ಚಿತ್ರವನ್ನ ನೋಡಿದ ಬಳಿಕ ಪಿ.ವಿ.ಪಿ ಪ್ರೊಡಕ್ಷನ್ಸ್ ಅವರು ನಟ ಧನಂಜಯ ನಟನೆ, ಚಿತ್ರದ ಸಂಭಾಷಣೆ, ಕಥೆ, ಕಥಾವಸ್ತು, ಫ಼ೈಟ್ಸ್ ಎಲ್ಲವನ್ನ ಹೊಗಳಿದ್ದಾರಂತೆ.

ತೆಲುಗಿನ ಬದ್ಮಾಶ್ ಯಾರು?
'ಬದ್ಮಾಶ್' ಚಿತ್ರವನ್ನ ನೋಡಿ ಮೆಚ್ಚಿಕೊಂಡಿರುವ ಪಿ.ವಿ.ಪಿ ಪ್ರೊಡಕ್ಷನ್ಸ್ ಟಾಲಿವುಡ್ ನ ಸ್ಟಾರ್ ನಟರಿಗೆ ಸಿನಿಮಾ ತೋರಿಸುವ ಉದ್ದೇಶ ಹೊಂದಿದೆ. ಮೂಲಗಳ ಪ್ರಕಾರ, ಅಲ್ಲು ಅರ್ಜುನ್ ಅಥವಾ ರಾಮ್ ಚರಣ್ ತೇಜಾ ಅವರನ್ನ ತೆಲುಗಿನ 'ಬದ್ಮಾಶ್' ರೀಮೇಕ್ ಗೆ ಅಪ್ರೋಚ್ ಮಾಡಲಿದ್ದಾರೆ.

ಅಲ್ಲು ಅರ್ಜುನ್ ರಿಮೇಕ್ ಮಾಡ್ತಾರಾ?
'ಬದ್ಮಾಶ್' ಚಿತ್ರದ ನಿರ್ದೇಶಕ ಈ ಬಗ್ಗೆ ಪಿ.ವಿ.ಪಿ ಪ್ರೊಡಕ್ಷನ್ಸ್ ಜೊತೆ ಮಾತುಕತೆ ಕೂಡ ನಡೆಸಿದ್ದು, ತೆಲುಗಿನಲ್ಲಿ ಅಲ್ಲು ಅರ್ಜುನ್ ಸೂಕ್ತ ಎಂಬ ಅಭಿಪ್ರಾಯವನ್ನ ಕೂಡ ವ್ಯಕ್ತಪಡಿಸಿದ್ದಾರಂತೆ. ಹೀಗಾಗಿ ಅಲ್ಲು ಅರ್ಜುನ್ ತೆಲುಗಿನ 'ಬದ್ಮಾಶ್' ಆಗ್ತಾರಾ ಎನ್ನುವ ಕುತೂಹಲ ಹುಟ್ಟಿಕೊಂಡಿದೆ.

ನವೆಂಬರ್ ಗೆ ಹೋದ ಬದ್ಮಾಶ್
'ಬದ್ಮಾಶ್' ಚಿತ್ರವನ್ನು ದಸರಾ ಹಬ್ಬಕ್ಕೆ ಬಿಡುಗಡೆ ಮಾಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿತ್ತು. ಆದರೆ ಚಿತ್ರಮಂದಿರಗಳ ಕೊರತೆಯಿಂದ ಬಿಡುಗಡೆ ದಿನಾಂಕವನ್ನ ಮುಂದೂಡಲಾಗಿದೆ. ಈಗಾಗಲೇ ಸೆನ್ಸಾರ್ ಬೋರ್ಡ್ ನಿಂದ 'ಯು' ಸರ್ಟಿಫಿಕೇಟ್ ಪಡೆದಿರುವ 'ಬದ್ಮಾಶ್' ನವೆಂಬರ್ ತಿಂಗಳಲ್ಲಿ ಚಿತ್ರಮಂದಿರಗಳಿಗೆ ಬರಲಿದೆಯಂತೆ.


Click it and Unblock the Notifications











