ಮದರಂಗಿಯ 'ಡಾರ್ಲಿಂಗ್' ಕೃಷ್ಣ ಈಗ ಚಾರ್ಲಿಯಾಗಿ ತೆರೆಗೆ
ಖಾಸಗಿ ಚಾನಲ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೃಷ್ಣ-ರುಕ್ಮಿಣಿ' ಅನ್ನೋ ಫೇಮಸ್ ಧಾರಾವಾಹಿ ನಿಮಗೆ ನೆನಪಿರಬಹುದಲ್ಲ ಅಂದಹಾಗೆ ಆ ಸೀರಿಯಲ್ ನಲ್ಲಿ ನಟಿಸುತ್ತಿದ್ದ, ಎತ್ತರವಾಗಿ ಅಜಾನುಬಾಹು ವ್ಯಕ್ತಿತ್ವವನ್ನು ನೆನಪಿಸುವ ಕೃಷ್ಣ ನಿಮಗೆ ನೆನಪಿರಬಹುದಲ್ವ.
ಹೌದು ಅದೇ ಕೃಷ್ಣ ಅಲಿಯಾಸ್ ಸುನೀಲ್ ನಾಗಪ್ಪ ಅವರು 'ಮದರಂಗಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟು ಚಿತ್ರರಂಗದಲ್ಲಿ ತಮ್ಮ ಭವಿಷ್ಯ ರೂಪಿಸಲು ಮುಂದಾಗಿದ್ದು, ತದನಂತರ 'ನಮ್ ದುನಿಯಾ ನಮ್ ಸ್ಟೈಲ್', 'ಜಾಲಿ ಬಾರು ಮತ್ತು ಪೋಲಿ ಗೆಳೆಯರು', ಹಾಗು 'ರುದ್ರತಾಂಡವ', ಚಿತ್ರದ ಮೂಲಕ ತಮ್ಮ ಅಭಿನಯವನ್ನು ತೋರಿಸಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದರೂ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಂತೆ ಅಂತಹ ವಿಶೇಷ ಸಾಧನೆ ಏನು ಮಾಡಲಿಲ್ಲ.
ಇದೀಗ ಬಹುನಿರೀಕ್ಷಿತ ಚಿತ್ರ 'ಚಾರ್ಲಿ' ಮೂಲಕ ಡಾರ್ಲಿಂಗ್ ಕೃಷ್ಣ ಅವರು ಚಂದನವನ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲು ರೆಡಿಯಾಗಿದ್ದಾರೆ.
ಡಾರ್ಲಿಂಗ್ ಕೃಷ್ಣ ಅಲಿಯಾಸ್ ಸುನೀಲ್ ನಾಗಪ್ಪ ಅವರ 'ಚಾರ್ಲಿ' ಚಿತ್ರ ಇದೇ ಗೌರಿ-ಗಣೇಶ ಹಬ್ಬಕ್ಕೆ ತೆರೆ ಮೇಲೆ ಅಪ್ಪಳಿಸಲಿದೆ. ಆಕ್ಷನ್ ಕಮ್ ರೋಮ್ಯಾಂಟಿಕ್ ಚಿತ್ರಕ್ಕೆ ನಿರ್ದೇಶಕ ಚಾರ್ಲಿ ಶಿವ ಅವರು ಆಕ್ಷನ್-ಕಟ್ ಹೇಳಿದ್ದಾರೆ.
ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರು ಇಬ್ಬರು ನಾಯಕಿಯರಾದ ವೈಶಾಲಿ ದೀಪಕ್, ಹಾಗು ಮಿಲನಾ ನಾಗರಾಜ್ ಅವರೊಂದಿಗೆ ರೋಮ್ಯಾಂಟಿಕ್ ಡ್ಯುಯೆಟ್ ಹಾಡಲಿದ್ದಾರೆ. ಜೊತೆಗೆ ಭರ್ಜರಿ ಆಕ್ಷನ್ ಸೀನ್ ಗಾಗಿ ಖಳ ನಟರ ಪಾತ್ರದಲ್ಲಿ ಶರತ್ ಲೋಹಿತಾಶ್ವ ಹಾಗೂ ರಾಘವ ಉದಯ್ ಅವರು ಮಿಂಚಿದ್ದಾರೆ.
ಎಲ್.ವೈ.ಎಮ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಮಂಜು ಎಲ್.ವೈ.ಎಮ್ ಅವರು ಬಂಡವಾಳ ಹೂಡಿದ್ದಾರೆ. ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರ ಮ್ಯೂಸಿಕ್ ಕಂಪೋಸಿಷನ್ 'ಚಾರ್ಲಿ' ಗಿದೆ.
ಇನ್ನೇನು ಸೆಪ್ಟೆಂಬರ್ 17 ಗೌರಿ-ಗಣೇಶ ಹಬ್ಬದಂದು ಕೃಷ್ಣ ಅಲಿಯಾಸ್ ಸುನೀಲ್ ನಾಗಪ್ಪ ಅವರು ಪ್ರೇಕ್ಷಕರು ಹಾಗೂ ಅಭಿಮಾನಿ ವರ್ಗದ ಮುಂದೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ. ಸದ್ಯ ಇನ್ನಾದರೂ ಕೃಷ್ಣ ಅವರಿಗೆ 'ಚಾರ್ಲಿ' ಕೈ ಹಿಡಿಯುತ್ತಾನ ಅನ್ನೋದನ್ನ ನೋಡಲು ಚಿತ್ರ ತೆರೆಗೆ ಬರುವವರೆಗೂ ನೀವು ತಾಳ್ಮೆಯಿಂದ ಕಾಯಲೇ ಬೇಕು.


Click it and Unblock the Notifications













