Don't Miss!
- News ಚಾಮರಾಜನಗರ: 12 ವರ್ಷಗೊಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಎಲ್ಲರನ್ನೂ ಬಯ್ಯೋದೇ ವಿಶೇಷ.!-ಬೈಗಳು ಹೇಗಿರುತ್ತವೆ ಗೊತ್ತಾ?
- Automobiles ಭಾರತದ ರಸ್ತೆಯಲ್ಲಿ ಘರ್ಜಿಸಲು ಬಂದ ಪವರ್ಫುಲ್ ಎಪ್ರಿಲಿಯಾ ಬೈಕ್ ವಿತರಣೆ ಮಾಹಿತಿ ಬಹಿರಂಗ
- Finance ಸಾಂಬಾರು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿ, ಇಂದು 276ಕ್ಕೂ ಹೆಚ್ಚು ಚಿನ್ನಾಭರಣ ಮಳಿಗೆಗಳ ಒಡೆಯ!
- Lifestyle ಹಸುವಿನ ಹಾಲಿನಿಂದ ಇಡೀ ವಿಶ್ವಕ್ಕೆ ಇನ್ಸುಲಿನ್..! ಹೊಸ ಅಧ್ಯಯನದಲ್ಲಿ ಬಹಿರಂಗ.!
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Technology Samsung: ಸ್ಯಾಮ್ಸಂಗ್ನ ಮುಂಬರುವ ಫೋಲ್ಡಬಲ್ ಫೋನ್ ನೀವು ಊಹಿಸಲಾಗದ ಅಗ್ಗದ ಬೆಲೆಗೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಡೆಯರ್ ನಿರ್ಮಾಣದ ಮೊದಲ ಸಿನಿಮಾ ಢಾಕಾ ಚಿತ್ರೋತ್ಸವಕ್ಕೆ ಆಯ್ಕೆ
ನಿರ್ದೇಶಕ ಪವನ್ ಒಡೆಯರ್ ನಿರ್ಮಾಣ ಮಾಡಿ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ ಪುತ್ರ ಸಾಗರ್ ಪುರಾಣಿಕ್ ನಿರ್ದೇಶನದ 'ಡೊಳ್ಳು' ಸಿನಿಮಾ ಢಾಕಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತಗೊಳ್ಳಲಿದೆ.
ಸಾಗರ್ ಪುರಾಣಿಕ್ ನಿರ್ದೇಶನದ ಮೊದಲ ಕಿರು ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದಕ್ಕಿತ್ತು. ಈಗ ಸಾಗರ್ ನಿರ್ದೇಶನದ ಮೊದಲ ಫೀಚರ್ ಫಿಲಂಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತು ಲಭಿಸಿದೆ. ಇದು ಪವನ್ ಒಡೆಯರ್ ನಿರ್ಮಾಣದ ಮೊದಲ ಸಿನಿಮಾ, ಹಾಗೂ ಸಾಗರ್ ಪುರಾಣಿಕ್ ನಿರ್ದೇಶನದ ಮೊದಲ ಫೀಚರ್ ಫಿಲಂ.
ಢಾಕಾ ಅಂತರಾಷ್ಟ್ರೀಯ ಸಿನಿಮೋತ್ಸವವು ಕಳೆದ 18 ವರ್ಷಗಳಿಂದಲೂ ಆಯೋಜಿತಗೊಳ್ಳುತ್ತಿದ್ದು, ಕೆಲವು ಅತ್ಯುತ್ತಮ ವಿಶ್ವ ಸಿನಿಮಾಗಳನ್ನು ಪ್ರದರ್ಶಿಸಿದೆ. ಈ ಬಾರಿ ಜನವರಿಯಲ್ಲಿ 19ನೇ ಅಂತರಾಷ್ಟ್ರೀಯ ಸಿನಿಮೋತ್ಸವ ನಡೆಯಲಿದ್ದು, ಸಾಗರ್ ಪುರಾಣಿಕ್ರ 'ಡೊಳ್ಳು' ಸಿನಿಮಾವು ವಿಶ್ವ ಸಿನಿಮಾ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ ಚಿತ್ರತಂಡ.
ಒಡೆಯರ್ ಮೂವೀಸ್ನ ಮೊದಲ ಸಿನಿಮಾ
'ಡೊಳ್ಳು' ಸಿನಿಮಾವು ಜನಪದ ಕಲೆ ಡೊಳ್ಳು ಕುಣಿತದ ಕುರಿತಾದದ್ದಾಗಿದೆ. ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ ಪವನ್ ಒಡೆಯರ್, ''ಸಿನಿಮಾದ ಕತೆ ಮೊದಲ ಬಾರಿ ಕೇಳಿದಾಗ ಬಹಳ ಆಸಕ್ತಿಕರ ಎನಿಸಿತು. ಜನಪದ ಕಲೆಯೊಂದನ್ನು ಜನರಿಗೆ ಮರುಪರಿಚಯ ಮಾಡಿಸುವುದು ಈಗಿನ ಅಗತ್ಯ ಹಾಗಾಗಿ ಇದೇ ಕತೆಯನ್ನು ಸಿನಿಮಾ ಮಾಡಬೇಕೆಂದು ನಾನು ಹಾಗೂ ನನ್ನ ಪತ್ನಿ ಅಪೇಕ್ಷ ನಿಶ್ಚಯಿಸಿ ನಮ್ಮ ಪ್ರೊಡಕ್ಷನ್ ಸಂಸ್ಥೆ 'ಒಡೆಯರ್ ಮೂವೀಸ್'ನ ಮೊದಲ ಸಿನಿಮಾ ಆಗಿ ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದೇವೆ'' ಎಂದರು.
ಮನರಂಜನೆಯೊಂದೇ ಸಿನಿಮಾದ ಉದ್ದೇಶವಲ್ಲ: ಪವನ್ ಒಡೆಯರ್
''ಕೇವಲ ಮನರಂಜನೆ ನೀಡುವುದಷ್ಟೆ ಅಲ್ಲದೆ ಸಿನಿಮಾ ಮೂಲಕ ಸಾಮಾಜಿಕ ಸಂದೇಶ ನೀಡುವ ಕಾರ್ಯವೂ ಆಗಬೇಕು. ಹಾಗಾಗಿಯೇ 'ಡೊಳ್ಳು' ಸಿನಿಮಾದ ನಿರ್ಮಾಣಕ್ಕೆ ಕೈ ಹಾಕಿದೆವು. ಈ ಸಿನಿಮಾದಲ್ಲಿ ಡೊಳ್ಳು ಕುಣಿತ ಕಲೆಯ ಹುಟ್ಟು ಸಾಗಿಬಂದ ರೀತಿ. ಈಗ ಈ ಜನಪದ ಕಲೆ ಎದುರಿಸುತ್ತಿರುವ ಸಮಸ್ಯೆಗಳು, ಕಲಾವಿದರ ಮೇಲೆ ನಗರೀಕರಣದ ಪ್ರಭಾವ, ಕಲೆ ನಂಬಿಕೊಂಡ ಕಲಾವಿದರ ಜೀವನ ಸ್ಥಿತಿ ಇನ್ನಿತರ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ'' ಎಂದು ಒಡೆಯರ್.
ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವ ಯೋಚನೆಯೂ ಇದೆ: ಪವನ್
''ನಮ್ಮ 'ಡೊಳ್ಳು' ಸಿನಿಮಾವು ಪ್ರಸ್ತುತ ಪ್ರತಿಷ್ಠಿತ ಢಾಕಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ. ಇನ್ನಷ್ಟು ಪ್ರತಿಷ್ಠಿತ ಚಿತ್ರೋತ್ಸವಗಳಿಗೆ ಆಯ್ಕೆ ಆಗುವುದಕ್ಕಿದೆ. ಆ ನಂತರ ನಾವು ಸಿನಿಮಾವನ್ನು ದೊಡ್ಡದಾಗಿಯೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇವೆ'' ಎಂದ ಪವನ್ ಒಡೆಯರ್, ''ಸಿನಿಮಾದಲ್ಲಿ ಕಾರ್ತಿಕ್ ಮಹೇಶ್, ಬಾಭು ಹಿರಣಯ್ಯ, ನಿಧಿ ಹೆಗಡೆ ಇನ್ನೂ ಮುಂತಾದವರು ನಟಿಸಿದ್ದಾರೆ. ಅಭಿಲಾಶ್ ಕುಡತಿ ಕ್ಯಾಮೆರಾ, ಅನಂತ್ ಕಾಮತ್ ಸಂಗೀತ ನಿರ್ದೇಶನ ಮಾಡಿದ್ದಾರೆ. 'ತಿಥಿ' ಸಿನಿಮಾಕ್ಕೆ ಸೌಂಡ್ ಡಿಸೈನ್ ಮಾಡಿದ್ದ ನಿತಿನ್ ಲುಕೋಸ್ ಈ ಸಿನಿಮಾಕ್ಕೂ ಸೌಂಡ್ ಡಿಸೈನ್ ಮಾಡಿದ್ದಾರೆ'' ಎಂದರು.
ನಿರ್ದೇಶಕ ಸಾಗರ್ ಪುರಾಣಿಕ್ ಮಾತು
ನಿರ್ದೇಶಕ ಸಾಗರ್ ಪುರಾಣಿಕ್ ಮಾತನಾಡಿ, ''ನಾನೊಂದು ಸರ್ಕಾರಿ ಕಾರ್ಯಕ್ರಮದಲ್ಲಿ ಡೊಳ್ಳು ಕುಣಿತ ನೋಡಿದ್ದೆ. ನನಗೆ ಸಾಕಷ್ಟು ಆಸಕ್ತಿ ಉಂಟಾಯಿತು. ಅದರ ಬಗ್ಗೆ ಅಧ್ಯಯನ ಮಾಡಿ. ಡೊಳ್ಳು ಕುಣಿತದಂತಹಾ ಜನಪದ ಕಲೆಯ ಮೇಲೆ ನಗರೀಕರಣದ ಪ್ರಭಾವ, ನಶಿಸುತ್ತಿರುವ ಜನಪದ ಕಲೆ, ಕಲೆಗಾರರ ಜೀವನದಲ್ಲಿ ಆಗುತ್ತಿರುವ ಬದಲಾವಣೆ, ಅವರ ಮೇಲಾಗುತ್ತಿರುವ ಪ್ರಭಾವಗಳ ಬಗ್ಗೆ ಸಿನಿಮಾ ಮಾಡಲು ನಿಶ್ಚಯಿಸಿ ಪ್ರಾಜೆಕ್ಟ್ ಕೈಗೆತ್ತಿಕೊಂಡೆ'' ಎಂದಿದ್ದಾರೆ.
ಕಿರುಚಿತ್ರ ಮೆಚ್ಚಿದ್ದ ಪವನ್ ಒಡೆಯರ್
'ಡೊಳ್ಳು' ಸಿನಿಮಾಕ್ಕೆ ನಿರ್ದೇಶಕ ಪವನ್ ಒಡೆಯರ್ ಬಂಡವಾಳ ತೊಡಗಿಸಿದ್ದಾರೆ. ''ಪವನ್ ಒಡೆಯರ್ ನನ್ನ ಮೊದಲ ಕಿರು ಚಿತ್ರ 'ಮಹಾನ್ ಹುತಾತ್ಮ' ನೋಡಿ ಮೆಚ್ಚಿಕೊಂಡಿದ್ದರು. ಸಿನಿಮಾ ಒಂದರ ಮೇಲೆ ಬಂಡವಾಳ ತೊಡಗಿಸಲು ಅವರು ಹುಡುಕಾಡುತ್ತಿದ್ದರು. ಅದೇ ಸಮಯದಲ್ಲಿ ಅವರಿಗೆ 'ಡೊಳ್ಳು' ಸಿನಿಮಾದ ಕತೆ ಹೇಳಿದೆ ಅವರಿಗೆ ಅದು ಇಷ್ಟವಾಯಿತು'' ಎಂದಿದ್ದಾರೆ ಸಾಗರ್ ಪುರಾಣಿಕ್.
ಕಾರ್ಯಾಗಾರ ಮಾಡಿ ನಂತರ ಚಿತ್ರೀಕರಣ
''ಸಿನಿಮಾ ಚಿತ್ರೀಕರಣ ಆರಂಭಿಸುವ ಮುನ್ನ ತರಬೇತಿ ಕಾರ್ಯಾಗಾರ ಮಾಡಿದೆವು. ಸಿನಿಮಾದ ನಟರಿಗೆ ಡೊಳ್ಳು ಕಲೆಯ ಬಗ್ಗೆ ಹೇಳಿಕೊಟ್ಟೆವು. ಡೊಳ್ಳು ಕಲಾವಿದರಿಗೆ ನಟನೆ ಬಗ್ಗೆ, ಚಿತ್ರೀಕರಣದ ಬಗ್ಗೆ ಹೇಳಿಕೊಟ್ಟು ನಂತರ ಚಿತ್ರೀಕರಣಕ್ಕೆ ಹೋದೆವು. ಆದರೂ ಚಿತ್ರೀಕರಣ ಸಮಯದಲ್ಲಿ ಕೆಲವು ಅಡ್ಡಿಗಳು ಆಗುತ್ತಿದ್ದವು. ಮೂರು ನಿಮಿಷದ ಡೊಳ್ಳು ಕುಣಿತದ ದೃಶ್ಯವನ್ನು ನಾವು ಎರಡು ದಿನ ಚಿತ್ರೀಕರಿಸಿದ ಉದಾಹರಣೆಯೂ ಇದೆ'' ಎಂದು ಚಿತ್ರೀಕರಣದ ಸಮಯದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ ಸಾಗರ್. ಢಾಕಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ಜನವರಿ 15 ರಿಂದ 23 ರ ವರೆಗೆ ನಡೆಯಲಿದೆ.