ವರಮಹಾಲಕ್ಷ್ಮೀ ಹಬ್ಬಕ್ಕೆ ತೆರೆಗೆ ನಿಖಿತಾ ಗೌರಿಪುತ್ರ

ಬೆಂಗಳೂರಿನಲ್ಲಿ ಬೆರಳೆಣಿಕೆಯಷ್ಟು ಚಿತ್ರಂದಿರಗಳಲ್ಲಿ ಮಾತ್ರ ಗೌರಿಪುತ್ರ ಬಿಡುಗಡೆಯಾಗುತ್ತಿದೆ. ಬಿಡುಗಡೆ ಸುದ್ದಿಗಿಂತಲೂ ಹೆಚ್ಚಾಗಿ ನಿಖಿತಾ ಸೇರಿದಂತೆ ಉಳಿದ ಕಲಾವಿದರ ಹಾಗೂ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ನಡುವಿನ ವಿವಾದದಿಂದಲೇ ಹೆಚ್ಚು ಸುದ್ದಿಯಲ್ಲಿದೆ ಗೌರಿಪುತ್ರ. ಸಾಮಾನ್ಯವಾಗಿ ಚಿತ್ರ ಬಿಡುಗಡೆಗೆ ಮುನ್ನ ಇರಬೇಕಾದ ಸಂಭ್ರಮ ಹಾಗೂ ಪ್ರಚಾರಕಾರ್ಯ ಈ ಚಿತ್ರತಂಡದಲ್ಲಿ ಇಲ್ಲದಿರುವುದು ಮೇಲ್ನೋಟಕ್ಕೇ ಗೋಚರಿಸುವಂತಿದೆ.
ಮಂಜುನಾಥ್ ಮಸ್ಕಲ್ ಮಟ್ಟಿ ಪ್ರಕಾರ, ಚಿತ್ರದಲ್ಲಿರುವ ಕಲಾವಿದರಾದ ನಿಖಿತಾ ತುಕ್ರಾಲ್, ನಾಗಶೇಖರ್ ಹಾಗೂ ಸ್ಮಿತಾ ಈ ಮೂವರೂ ಮೊದಲು ಒಪ್ಪಿಕೊಂಡ ಪ್ರಕಾರ ಚಿತ್ರದ ಪ್ರಚಾರ ಕಾರ್ಯಕ್ಕೆ ಬರುತ್ತಿಲ್ಲ. ಈ ಬಗ್ಗೆ ಫೋನ್ ಕಾಲ್ ಮೂಲಕ ಸಂಪರ್ಕಿಸಿದರೆ ಭಾರೀ ಬೈಗುಳಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರಂತೆ. ನಿಖಿತಾ, ಸ್ಮಿತಾ ಹಾಗೂ ನಾಗಶೇಖರ್ ಚಿತ್ರದ ಪ್ರಮೋಶನ್ನಿಗೆ ಕೈಕೊಟ್ಟಿದ್ದಾರೆ ಎಂಬುದೀಗ ಮಂಜು ಆರೋಪ.
ಮಂಜು ಪ್ರಚಾರಕ್ಕೆ ಬರುವಂತೆ ಕೇಳಲು ಕರೆ ಮಾಡಿದರೆ "ಸದ್ಯ ಬೇರೆ ಚಿತ್ರದಲ್ಲಿ ಬಿಜಿ, ಬರಲು ಸಾಧ್ಯವಿಲ್ಲ" ಎಂದು ಈ ಮೂವರೂ ಉತ್ತರಿಸುತ್ತಿದ್ದಾರೆ ಎಂಬುದು ಅವರೆಲ್ಲರ ಮೇಲಿರುವ ಮಂಜು ಆರೋಪ. ಇಷ್ಟೇ ಅಲ್ಲ, ತಮಗೆ ಸಿಕ್ಕಾಪಟ್ಟೆ ಬೈಯ್ದುಬಿಟ್ಟಿದ್ದಾರೆ. ಹೀಗಾಗಿ ತಾವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗು ನಿರ್ಮಾಪಕರ ಸಂಘಕ್ಕೆ ದೂರು ನೀಡಿದ್ದಾಗಿ ಮಂಜು ಹೇಳಿಕೊಂಡಿದ್ದಾರೆ.
ಇಲ್ಲಿ ಕುತೂಹಲಕಾರಿ ಅಂಶವೊಂದಿದೆ. ಕೇವಲ ನಿಖಿತಾ ಮಾತ್ರವಲ್ಲ, ಸ್ಮಿತಾ ಹಾಗೂ ನಾಗಶೇಖರ್ ಕೂಡ ಪ್ರಚಾರಕ್ಕೆ ಬರುತ್ತಿಲ್ಲ ಎಂದರೆ ಬೇರೆ ಏನೋ ಕಾರಣ ಇರಲೇಬೇಕು ಎಂಬುದು ತುಂಬಾ ಜನರ ಊಹೆ. ನಿರ್ಮಾಪಕರು ಅಥವಾ ನಿರ್ದೇಶಕರ ಕಡೆಯಿಂದಲೇ ಏನೋ ತೊಂದರೆ ಆಗಿರಬೇಕು. ಅಥವಾ ಸಂಭಾವನೆ ಸೆಟ್ಲ್ ಆಗಿರಲಿಕ್ಕಿಲ್ಲ ಎಂದು ಗಾಂಧಿಗರದಲ್ಲಿ ಗುಲ್ಲಾಗಿದೆ.
ನಿಖಿತಾ ಸದ್ಯಕ್ಕೆ ತಮಿಳಿನಲ್ಲಿ ಕಾರ್ತಿ ಜೊತೆ 'ಅಲೆಕ್ಸ್ ಪಾಂಡ್ಯನ್' ಚಿತ್ರೀಕರಣದಲ್ಲಿ ಬಿಜಿ. ಅವರ ಕನ್ನಡ ಸಿನಿಮಾ ಬಿಡುಗಡೆ ಆಗುತ್ತಿದ್ದರೂ ಅವರು ಪ್ರಚಾರದಲ್ಲಿ ಕಾಣಿಸುತ್ತಿಲ್ಲ. ಅಥವಾ ಇತ್ತೀಚಿಗೆ ಸಿನಿಮಾ ಪ್ರಚಾರ ಬೇರೆ ರೀತಿಯದೇ ಹಾದಿ ಹಿಡಿದಿರುವುದರಿಂದ ಗೌರಿಪುತ್ರ ತಂಡದ್ದು ಈ ರೀತಿಯ ಪ್ರಚಾರ 'ಪ್ಲಾನ್' ಕೂಡ ಆಗಿರಬಹುದೇನೋ! ಚಿತ್ರ ಚೆನ್ನಾಗಿದೆಯೇ ಎಂಬುದಕ್ಕೆ ಉತ್ತರ ಸದ್ಯವೇ ಕಾದಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











