'ಕಬಾಲಿ'ಗೆ ಸೆಡ್ಡು ಹೊಡೆದು ತೆರೆಗೆ ಬರಲು ತಯಾರಾದ 'ಹಾರೋ ಹಕ್ಕಿ'
ಬ್ಲಾಸಮ್ ಎಜುಕೇಷನ್ ಹಾಗೂ ಬ್ರೈನ್ ಶಿಕ್ಷಣ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿರುವ ಡಿ.ಶಶಿಕುಮಾರ್ ಅವರು ಈಗಿನ ಮಕ್ಕಳ ಮನಸ್ಥಿತಿಯನ್ನು ಆಧರಿಸಿ ಚಿತ್ರವೊಂದನ್ನು ನಿರ್ಮಿಸಿದ್ದಾರೆ.
"ಹಾರೋ ಹಕ್ಕಿ" ಗೂಡು ತೊರೆದಾಗ ಎಂಬ ಅಡಿಬರಹದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಜುಲೈ 22ರ, ಶುಕ್ರವಾರದಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ನಾಗರಾಜ ಅರೆಹೊಳ ಅವರು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ.

ಒಬ್ಬ ಹುಡುಗ ತನ್ನ ವಿದ್ಯಾರ್ಥಿ ಜೀವನದಲ್ಲಿ ಮಾಡಿದ ತರಲೆ ಕೆಲಸಗಳಿಂದಾಗಿ ಹಲವಾರು ಸಂಕಷ್ಟಗಳಿಗೆ ಸಿಲುಕುತ್ತಾನೆ. ನಂತರ ಮನೆಯಲ್ಲಿ ತಂದೆ, ತಾಯಿ, ತನ್ನನ್ನು ನಿಂದಿಸುವರೆಂದು ಹೆದರಿ ಮನೆಬಿಟ್ಟು ಹೋದಾಗ ಹೊರ ಜಗತ್ತಿನಲ್ಲಿ ಆತನ ಪರಿಸ್ಥಿತಿ ಏನಾಯಿತು. ಸಮಾಜದ ಕೆಲ ದುಷ್ಟ ವ್ಯಕ್ತಿಗಳ ಜಾಲಕ್ಕೆ ಸಿಲುಕಿ ಯಾವ ರೀತಿ ಆ ಹುಡುಗ ನಲುಗಿದ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ.
ಶಿಕ್ಷಣ ಸಂಸ್ಥೆಗಳ ಮೂಲಕ ಮಕ್ಕಳಿಗೆ ವಿಧ್ಯಾಭ್ಯಾಸ ನೀಡುತ್ತಿರುವ ನಿರ್ಮಾಪಕ ಡಿ.ಶಶಿಕುಮಾರ್ ಅವರು ಈಗ ಸಿನಿಮಾ ಮಾಧ್ಯಮದ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಉತ್ತಮವಾದ ಸಂದೇಶ ನೀಡಲು ಹೊರಟಿದ್ದಾರೆ.

ಮಾ|| ಶೃತಿಧರ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಬೇಬಿ ಶ್ರೇಯಾ, ಮಾ|| ರಂಜಿತ ಕೃಷ್ಣ ತಾರಾಗಣದಲ್ಲಿದ್ದಾರೆ. ಹಿರಿಯ ನಟ ಗಣೇಶ್ ರಾವ್ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಇದು ಸಮಾಜಕ್ಕೆ ಒಳ್ಳೇ ಸಂದೇಶವನ್ನು ನೀಡುವಂಥ ಸಿನಿಮಾ ಮಕ್ಕಳಿಗಾಗಿಯೇ ಒಂದು ಮೆಸೇಜ್ ಈ ಚಿತ್ರದಲ್ಲಿದೆ. ಟ್ಯಾಕ್ಸಿ ನಂ.1 ಚಿತ್ರದ ನಾಯಕ ಪ್ರಭಾಕರ್ ಹಾಗೂ ಕುಲದೀಪ್ ಈ ಚಿತ್ರದಲ್ಲಿ ಖಳ ನಟರಾಗಿ ಕಾಣಿಸಿಕೊಂಡಿದ್ದಾರೆ.

ನಟಿ ರೇಖಾ ಸಾಗರ್ ಮಗನನ್ನು ಕಳೆದುಕೊಂಡು ಕೊರಗುವ ಒಬ್ಬ ತಾಯಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಒಂದು ಶೀರ್ಷಿಕೆ ಗೀತೆ ಮಾತ್ರ ಇದ್ದು ಮಧುರ ನಾಯರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಮಂಗಳೂರು ಮೂಲದ ಸಾಧ್ವಿ ಜೈನ್ ಈ ಹಾಡಿಗೆ ಧ್ವನಿ ನೀಡಿದ್ದಾರೆ.
ಸೆನ್ಸಾರ್ ಮಂಡಳಿಯಿಂದ ಮಕ್ಕಳ ಚಲನಚಿತ್ರ ಎಂದು ಪ್ರಮಾಣಪತ್ರ ಪಡೆದಿರುವ 'ಹಾರೋ ಹಕ್ಕಿ' ನಾಳೆ (ಜುಲೈ 22) ಸೂಪರ್ ಸ್ಟಾರ್ ರಜನಿಕಾಂತ್ 'ಕಬಾಲಿ'ಗೆ ಸೆಡ್ಡು ಹೊಡೆದು ತೆರೆಗೆ ಅಪ್ಪಳಿಸಲು ತಯಾರಾಗಿ ನಿಂತಿದೆ.


Click it and Unblock the Notifications











