ಕನ್ನಡದ 'ವಿಐಪಿ' ಚಿತ್ರೀಕರಣದ ವೇಳೆ ಸಹ ನಟಿ ಸಾವು!
ಇತ್ತೀಚೆಗೆ ಚಿತ್ರೀಕರಣದ ವೇಳೆ ಅಪಘಾತ, ಅವಘಡಗಳು ಸಂಭವಿಸುವುದು ಹೆಚ್ಚಾಗಿದೆ. 'ಮಾಸ್ತಿಗುಡಿ' ದುರಂತದಲ್ಲಿ ಇಬ್ಬರ ಖಳನಟರು ಸಾವುಗೀಡಾಗಿದ್ದರು. ಇದೀಗ, ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯಿಸುತ್ತಿರುವ ಹೊಸ ಚಿತ್ರದ ಚಿತ್ರೀಕರಣದ ವೇಳೆ ಚಿತ್ರದ ಸಹನಟಿಯೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಿನ್ನೆ (ಜನವರಿ 9) ಯಲಹಂಕ ಸಮೀಪದ ಹಾಲಹಳ್ಳಿಯ, ನಿರ್ಮಾಣ ಹಂತದ ಕಟ್ಟಡದಲ್ಲಿ 'ಕನ್ನಡದ ವಿಐಪಿ' ಚಿತ್ರದ ನಾಯಕನ ಎಂಟ್ರಿ ಸೀನ್ ಶೂಟ್ ಮಾಡಲಾಗುತ್ತಿತ್ತು. ಈ ದೃಶ್ಯದ ಚಿತ್ರೀಕರಣಕ್ಕೆಂದು ಬಂದಿದ್ದ ಸಹನಟಿಯೊಬ್ಬರು ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ.['ಡಿಂಪಲ್ ಕ್ವೀನ್' ರಚಿತಾ ರಾಮ್ ಕಡೆಯಿಂದ ಬಂದ ಸ್ಪೆಷಲ್ ನ್ಯೂಸ್]

ಚಿತ್ರದ ಶೂಟಿಂಗ್ ವೇಳೆ 120 ಜನರು ಹಾಜರಾಗಿದ್ದರು. ಆದ್ರೆ, ಚಿತ್ರೀಕರಣ ಮುಗಿದ ಮೇಲೆ ಸಹ ನಟಿಯೊಬ್ಬರು ನಾಪತ್ತೆಯಾಗಿರುವುದು ತಿಳಿದು ಬಂತು. ತದ ನಂತರ ಹುಡುಕಿದಾಗ ಲಿಫ್ಟ್ ಅಳವಡಿಸುವ ಜಾಗದಲ್ಲಿ ಸಹನಟಿಯ ಶವ ಪತ್ತೆಯಾಗಿತ್ತು. ಮೃತ ನಟಿಯನ್ನ 41 ವರ್ಷದ ಪದ್ಮಾವತಿ ಎಂದು ಗುರುತಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಹೊರವಲಯದ ರಾಜಾನುಕುಂಟೆಯ ಪೊಲೀಸರು ಪ್ರಕರಣ ದಾಖಸಿಕೊಂಡಿದ್ದು, ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ಮೇಲ್ನೋಟಕ್ಕೆ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಶವಪರೀಕ್ಷೆ ವರದಿ ಬಂದ ನಂತರ ಹೆಚ್ಚಿನ ವಿವರ ತಿಳಿಯಲಿದೆ.

ಅಂದ್ಹಾಗೆ, ಕನ್ನಡದ 'ವಿಐಪಿ' ತಮಿಳಿನಲ್ಲಿ ಧನುಷ್ ಅಭಿನಯಿಸಿದ್ದ 'ವಿಐಪಿ' ಚಿತ್ರದ ಕನ್ನಡ ರಿಮೇಕ್. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಈ ಚಿತ್ರದ ನಾಯಕನಾಗಿದ್ದು, ನಂದಕಿಶೋರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನೂ ರಾಕ್ ಲೈನ್ ವೆಂಕಟೇಶ್ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ, ಸಹನಟಿಯ ಸಾವಿನ ಹಿನ್ನೆಲೆಯಲ್ಲಿ 'ವಿಐಪಿ' ಚಿತ್ರದ ಶೂಟಿಂಗ್ ಸ್ಥಗಿತಗೊಂಡಿದ್ದು, ನಾಳೆಯಿಂದ ಯಥಾಪ್ರಕಾರ ಚಿತ್ರೀಕರಣ ನಡೆಯಲಿದೆ ಎಂದು ತಿಳಿದು ಬಂದಿದೆ.


Click it and Unblock the Notifications











