'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ
ಭಾಗ್ಯರಾಜ್ ಸಿನಿಮಾ ಮೂಲಕ ವಿಭಿನ್ನವಾದ ಕಥೆಯನ್ನ ಪ್ರೇಕ್ಷಕರ ಮುಂದಿಟ್ಟ ನಿರ್ದೇಶಕ ದೀಪಕ್ ಮಧುವನ ಹಳ್ಳಿ ಈ ಬಾರಿ ಮತ್ತೊಂದು ವಿಶೇಷ ಎನ್ನಿಸುವ ಕಥೆಯನ್ನ ಸಿನಿಮಾವನ್ನಾಗಿ ಮಾಡಿದ್ದಾರೆ. ಅನುಷ್ ಶೆಟ್ಟಿ ಬರೆದಿರುವ 'ಕಳ್ಬೆಟ್ಟದ ದರೋಡೆಕೋರರು' ಕಾದಂಬರಿಗೆ ಸಿನಿಮಾ ರೂಪ ನೀಡಿರುವ ದೀಪಕ್ ಚಿತ್ರೀಕರಣ ಮುಗಿಸಿ ಪ್ರೇಕ್ಷಕರ ಕುತೂಹಲ ಕೆರಳಿಸುವಂತಹ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಕಳ್ಬೆಟ್ಟದ ದರೋಡೆಕೋರರು ಎನ್ನುವ ಟೈಟಲ್ ನಂತೆಯೇ ಪೋಸ್ಟರ್ ಕೂಡ ನೋಡುಗರಲ್ಲಿ ಕೌತುಕವನ್ನು ಹುಟ್ಟುಹಾಕುತ್ತಿದೆ. ಗಣೇಶನ ಮೂರ್ತಿಗೆ ಮದ್ದು ಗುಂಡಿನ ಸರವನ್ನ ಹಾರದಂತೆ ಹಾಕಿದ್ದು, ಗಣೇಶನಿಗೆ ದರೋಡೆಕೋರ ನ ಲುಕ್ ಕೊಡಲಾಗಿದೆ. ಸಿನಿಮಾ ಕಥೆಯಲ್ಲಿ ಮುಖ್ಯ ತಿರುವು ನೀಡುವ ಪಾತ್ರ ಗಣೇಶನದ್ದು ಇರಬಹುದು ಎನ್ನುವುದು ಪ್ರೇಕ್ಷಕರ ಅಭಿಪ್ರಾಯ.
ಸದ್ಯ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿದೆ. ಈ ಬಾರಿ ದೀಪಕ್ ಮಧುವನ ಹಳ್ಳಿ ಜೊತೆ ಆಗಿರುವುದು 'ರಾಮಾ ರಾಮಾ ರೇ' ಸಿನಿಮಾದ ನಾಯಕ ನಟರಾಜ್. ಇನ್ನು ಕಿರುತೆರೆಯಲ್ಲಿ 'ರಾಧಾ ರಮಣ' ಧಾರಾವಾಹಿ ಮೂಲಕ ಹೆಸರು ಗಳಿಸಿರುವ ಶ್ವೇತಾ ಪ್ರಸಾದ್ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಬ್ರಿಡ್ಜ್ ಫಿಲ್ಮ್ಸ್ ಹಾಗೂ ಜೆ ಪಿ ಮ್ಯೂಸಿಕ್ ಜಂಟಿಯಾಗಿ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದು ಕಿರಣ್ ಹಂಪಾಪುರ, ಲವಿತ್, ಪ್ರದೀಪ್ ಪದ್ಮಕುಮಾರ್ ಸಿನಿಮಾಗೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ನಟರಾಜ್ ಹಾಗೂ ಶ್ವೇತಾ ಸೇರಿದಂತೆ ಸಿನಿಮಾದಲ್ಲಿ ಅನೇಕ ಕಲಾವಿದರ ದಂಡೇ ಇದ್ದು ಪೊಸ್ಟರ್ ನಿಂದ ಕೌತುಕ ಮೂಡಿಸಿರುವ ನಿರ್ದೇಶಕ ದೀಪಕ್, ಪ್ರೇಕ್ಷಕರಿಗೆ ಡಿಫ್ರೆಂಟ್ ಆಗಿರುವ ಸಿನಿಮಾ ನೀಡುವುದು ಕಾತರಿ ಆಗಿದೆ.


Click it and Unblock the Notifications











