ನೈಜ ಕಥೆ ಹೇಳಲು ಬರ್ತಿದೆ 'ಕನ್ನೇರಿ'!
ನೈಜ ಕಥೆಯೊಂದಿಗೆ ಕನ್ನಡದಲ್ಲಿ 'ಕನ್ನೇರಿ' ಸಿನಿಮಾ ಬರ್ತಿದೆ. ಕೊಡಗಿನಲ್ಲಿ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟದ ಕಥನವನ್ನು ತೆರೆಯ ಮೇಲೆ ತರುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದೆ. ಮಹಿಳಾ ಪ್ರಧಾನ ಚಿತ್ರ 'ಕನ್ನೇರಿ' ಗೆ ನೀನಾಸಂ ಮಂಜು ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಪೋಸ್ಟರ್, ಟ್ರೇಲರ್, ಹಾಡುಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದಿದೆ.
ಕಾಡಿನ ಜನರನ್ನು ಒಕ್ಕಲೆಬ್ಬಿಸಿದ ಮೇಲೆ ಅವರ ಮೇಲೆ ನಡೆಯುವ ದೌರ್ಜನ್ಯ ಸೇರಿದಂತೆ ವಿವಿಧ ವಿಷಯಗಳನ್ನು ಎಳೆಎಳೆಯಾಗಿ ಸಿನಿಮಾದಲ್ಲಿ ಬಿಚ್ಚಿಡಲಾಗಿದೆ. ಆಧುನೀಕರಣದ ಹೆಸರಲ್ಲಿ ಪರಿಸರನಾಶ, ಹುಲಿ ಸಂರಕ್ಷಣೆ ಸೇರಿದಂತೆ, ಕಾಡು ಜನರನ್ನು ಒಕ್ಕಲೆಬ್ಬಿಸುವುದ ಹಿಂದೆ ಭೂಮಾಫಿಯಾ, ಟಿಂಬರ್ ಮಾಫಿಯಾಗಳಂತಹ ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ.
ನೀನಾಸಂ ಮಂಜು ನಿರ್ದೇಶನದಲ್ಲಿ ಮೂಡಿ ಬಂದಿರುವ ನೈಜ ಘಟನೆ ಆಧಾರಿತ 'ಕನ್ನೇರಿ' ಮಾರ್ಚ್ 4ರಂದು ಬಿಡುಗಡೆಯಾಗುತ್ತಿದೆ. ಕೊಡಗಿನಲ್ಲಿ ಭಾರೀ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ ಮತ್ತು ಕ್ಷೀರಸಾಗರ ಅವರ 'ಜೇನು: ಆಕಾಶದ ಅರಮನೆ' ಕಾದಂಬರಿ ಎಳೆಯನ್ನು ಚಿತ್ರದಲ್ಲಿ ಬಳಸಿಕೊಂಡು ಕಥೆ ಹೆಣೆಯಲಾಗಿದೆ. ಪ್ರಕೃತಿಯ ಮಡಿಲಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನಾಂಗವನ್ನು ಒಕ್ಕಲೆಬ್ಬಿಸಿದ ನಂತರ ಏನಾಯಿತು. ಅಲ್ಲಿನ ಹೆಣ್ಣು ಮಕ್ಕಳು ಹೇಗೆ ದೌರ್ಜನ್ಯಕ್ಕೆ ಒಳಗಾಗುತ್ತಾರೆ, ಅವರ ಬದುಕು ಯಾವೆಲ್ಲ ತಿರುವು ಪಡೆಯುತ್ತೆ ಎಂಬ ಹೋರಾಟದ ಕಥೆ ಹೊಂದಿರುವ ಈ ಚಿತ್ರದಲ್ಲಿ ಅರ್ಚನಾ ಮಧುಸೂಧನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಕೋಟಿಗಾನಹಳ್ಳಿ ರಾಮಯ್ಯ ಈ ಚಿತ್ರದ ಕಥೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಚಿತ್ರಕಥೆ ಹಾಗೂ ನಿರ್ದೇಶನದ ಸಾರಥ್ಯವನ್ನು ನೀಸಾಸಂ ಮಂಜು ವಹಿಸಿಕೊಂಡಿದ್ದಾರೆ. ಚಿತ್ರದ ತಾರಾಗಣದಲ್ಲಿ ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ.ಮಠ್, ಕರಿಸುಬ್ಬು ಒಳಗೊಂಡಂತೆ ಹಲವು ಪ್ರತಿಭಾನ್ವಿತರು ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಗಣೇಶ್ ಹೆಗ್ಡೆ ಕ್ಯಾಮೆರಾ, ಮಣಿಕಾಂತ್ ಕದ್ರಿ ಸಂಗೀತವಿದೆ. ಚಿತ್ರಕ್ಕೆ ಪಿಪಿ ಹೆಬ್ಬಾರ್ ಮತ್ತು ಚಂದ್ರಶೇಖರ್ ಬಂಡವಾಳ ಹಾಕಿದ್ದಾರೆ. 4ರಂದು ರಾಜ್ಯಾದ್ಯಂತ ಎಲ್ಲರ ಮನಸೆಳೆಯಲು ಥಿಯೇಟರ್ಗೆ ಎಂಟ್ರಿಕೊಡ್ತಿದೆ. ಸಿನಿಮಾ ರಿಲೀಸ್ ಬಳಿಕ ಪ್ರೇಕ್ಷಕ ಪ್ರಭು ಏನಾಂತಾರೆ ಅನ್ನೋದು ನೋಡಬೇಕು.


Click it and Unblock the Notifications











