'ಕಾಂತಾರ'-1 ಬಿಡುಗಡೆ ದಿನಾಂಕದ ಬಗ್ಗೆ ಭಾರೀ ಗೊಂದಲ; ರಿಷಬ್ ಶೆಟ್ಟಿ ಪ್ರತಿಕ್ರಿಯೆ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ' ಚಾಪ್ಟರ್-1 ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಮೊದಲ ಭಾಗಕ್ಕಿಂತ 10 ಪಟ್ಟು ದೊಡ್ಡದಾಗಿ ಸಿನಿಮಾ ತೆರೆಗೆ ಬರುತ್ತಿದೆ.
'ಕಾಂತಾರ' ಚಿತ್ರತಂಡ ಸಾಕಷ್ಟು ವಿಘ್ನಗಳನ್ನು ಎದುರಿಸುವಂತಾಗಿದೆ. ವಿನಾಕಾರಣ ಚಿತ್ರತಂಡದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡುವ ಕೆಲಸ ಸಹ ನಡೆಯುತ್ತಿದೆ. ಕೆಲ ದಿನಗಳ ಹಿಂದೆ ಚಿತ್ರೀಕರಣಕ್ಕೆ ಹೊರಟ್ಟಿದ್ದ ಸಹ ಕಲಾವಿದರಿಂದ ಮಿನಿ ಬಸ್ ಪಲ್ಟಿಯಾಗಿತ್ತು. ಕೆಲವರು ಗಾಯಗೊಂಡಿದ್ದರು. ಎರಡು ವಾರದ ಹಿಂದೆ ಜ್ಯೂನಿಯರ್ ಆರ್ಟಿಸ್ಟ್ ಒಬ್ಬ ಸೌಪರ್ಣಿಕಾ ನದಿಯಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದನು. ಇನ್ನು ಚಿತ್ರದಲ್ಲಿ ನಟಿಸಿದ್ದ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ಈ ಅವಘಡಗಳಿಗೂ ರಿಷಬ್ ಶೆಟ್ಟಿಗೆ ದೈವ ಕೊಟ್ಟಿದ್ದ ಎಚ್ಚರಿಕೆಗೂ ಲಿಂಕ್ ಮಾಡಿ ಸುದ್ದಿ ಹರಡಲಾಗುತ್ತಿದೆ. ಅಷ್ಟೇ ಅಲ್ಲ, ಸಾಕಷ್ಟು ಅಪಪ್ರಚಾರ ನಡೀತಿದೆ. ಇದೆಲ್ಲದರ ನಡುವೆ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡುತ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಈಗಾಗಲೇ ಸಿನಿಮಾ ಬಿಡುಗಡೆ ಸಾಕಷ್ಟು ತಡವಾಗುತ್ತಿದೆ. ಇಂತಹ ಸಮಯದಲ್ಲಿ ಮತ್ತೆ ದಿನಾಂಕ ಬದಲಾಗುತ್ತಾ? ಎಂದು ಅಭಿಮಾನಿಗಳು ಬೇಸರಗೊಂಡಿದ್ದರು. ಈ ಬಗ್ಗೆ ಸ್ವತಃ ರಿಷಬ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
'ಕಾಂತಾರ'- ದಿ ಲೆಜೆಂಡ್ ಅಧಿಕೃತ 'X' ಖಾತೆಯಲ್ಲಿ ಸಿನಿಮಾ ರಿಲೀಸ್ ಸಂಬಂಧ ಮೂಡಿರುವ ಗೊಂದಲಕ್ಕೆ ತೆರೆ ಎಳೆದು ಟ್ವೀಟ್ ಮಾಡಿದ್ದಾರೆ. ಇದನ್ನು ರಿಷಬ್ ಶೆಟ್ಟಿ ರೀ-ಟ್ವೀಟ್ ಮಾಡಿದ್ದಾರೆ. "ನಾವು ಸರಿಯಾದ ಟ್ರ್ಯಾಕ್ನಲ್ಲಿ ಇದ್ದೀವಿ. ಎಲ್ಲವೂ ನಾವು ಅಂದುಕೊಂಡಂತೆ ನಡೆಯುತ್ತಿದೆ. ಕಾಂತಾರ ಚಾಪ್ಟರ್-1 ಅಕ್ಟೋಬರ್ 2ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ. ನಮ್ಮನ್ನು ನಂಬಿ. ನಿಮ್ಮೆಲ್ಲರ ಕಾಯುವಿಕೆಗೆ ಸರಿಯಾದ ಸಿನಿಮಾ ಮಾಡುತ್ತಿದ್ದೇವೆ. ಊಹಾಪೋಹಗಳನ್ನು ತಪ್ಪಿಸಲು ಮತ್ತು ಸರಿಯಾದ ಮಾಹಿತಿ ಇಲ್ಲದೇ ಯಾವುದೇ ಸುದ್ದಿಯನ್ನು ಹಂಚಿಕೊಳ್ಳಬೇಡಿ ಎಂದು ನಾವು ಎಲ್ಲರನ್ನೂ ಕೋರುತ್ತೇವೆ" ಎಂದು ಅದರಲ್ಲಿ ಬರೆಯಲಾಗಿದೆ.
2022ರಲ್ಲಿ ದಸರಾ ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ 'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ದೇಶ ವಿದೇಶಗಳಲ್ಲಿ ಸಿನಿಮಾ ಸಕ್ಸಸ್ ಕಂಡಿತ್ತು. ಅದರ ಬೆನ್ನಲ್ಲೇ ಚಿತ್ರದ ಸೀಕ್ವೆಲ್ ಅಥವಾ ಪ್ರೀಕ್ವೆಲ್ ಮಾಡುವ ಬಗ್ಗೆ ಚರ್ಚೆ ಶುರುವಾಗಿತ್ತು. ಅಂತಿಮವಾಗಿ ಪ್ರೀಕ್ವೆಲ್ ಮಾಡುವುದಾಗಿ ಚಿತ್ರತಂಡ ಘೋಷಿಸಿ ಚಿತ್ರೀಕರಣ ಆರಂಭಿಸಿತ್ತು. ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.
ಹಾಲಿವುಡ್ ತಂತ್ರಜ್ಞರು ಕೂಡ 'ಕಾಂತಾರ'-1 ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಪಾತ್ರಕ್ಕಾಗಿ ಕಳರಿ ಪಯಟ್ಟು ಕಲಿತು ರಿಷಬ್ ಶೆಟ್ಟಿ ನಟಿಸುತ್ತಿದ್ದಾರೆ. ಸಿನಿಮಾ ಸೆಟ್ಟೇರಿದ ಸಮಯದಲ್ಲಿ ಬಿಡುಗಡೆಯಾಗಿದ್ದ ಟೀಸರ್ ಸೂಪರ್ ಹಿಟ್ ಆಗಿತ್ತು. ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರೀಕ್ಷೆ ಹುಟ್ಟಾಕ್ಕಿದೆ. ಈ ಬಾರಿ ಏಕಕಾಲಕ್ಕೆ ಇಂಗ್ಲೀಷ್ ಭಾಷೆಯಲ್ಲಿ ಕೂಡ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಚಿತ್ರದ ಪಾತ್ರವರ್ಗದ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಆಸ್ಕರ್ ಸ್ಪರ್ಧೆಗೆ 'ಕಾಂತಾರ-1' ಚಿತ್ರವನ್ನು ಕೊಂಡೊಯ್ಯುವ ಪ್ರಯತ್ನ ಕೂಡ ನಡೀತಿದೆ. ಅದಕ್ಕಾಗಿ ಭರ್ಜರಿ ಪ್ರಚಾರ ನಡೆಸಲು ಚಿತ್ರತಂಡ ತೀರ್ಮಾನಿಸಿದೆ. ಒಟ್ಟಾರೆ ಮೊದಲ ಭಾಗಕ್ಕಾಗಿ ಬಹಳ ಅದ್ಧೂರಿಯಾಗಿ ರೋಚಕವಾಗಿ ಪ್ರೀಕ್ವೆಲ್ ಪ್ರೇಕ್ಷಕರ ಮುಂದೆ ಬರಲಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.


Click it and Unblock the Notifications











