ಕರಾವಳಿ ಪ್ರತಿಭೆಗಳಿಂದ ತಯಾರಾಗ್ತಿದೆ 'ಕತ್ತಲೆ ಕೋಣೆ' ಸಿನಿಮಾ
ಕರಾವಳಿ ಕರ್ನಾಟಕದ ಅದರಲ್ಲೂ ಕುಂದಾಪುರ ಈ ಭಾಗದ ಸಾಹಸಿ ತಂಡ ಮೊದಲ ಜಾರಿಗೆ ಕನ್ನಡ ಚಿತ್ರರಂಗಕ್ಕೆ ನೀಡುತ್ತಿರುವ ಚಿತ್ರ 'ಕತ್ತಲೆಕೋಣೆ'. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಸಂದೇಶ ಶೆಟ್ಟಿ ಆಜ್ರಿ ಅವರು ಸುಮಾರು 8 ವರ್ಷಗಳ ಕಾಲ ಸತತ ಪರಿಶ್ರಮವಹಿಸಿ ಕಥೆಯನ್ನು ಬರೆದು, ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.
1993 ರಲ್ಲಿ ಮಲೆನಾಡಿನ ತಪ್ಪಲು ಪ್ರದೇಶದಲ್ಲಿ ನಡೆದ ಒಂದು ನೈಜ ಘಟನೆ ಆಧರಿಸಿದ ಚಲನಚಿತ್ರ. ಮಲೆನಾಡಿನ ತಪ್ಪಲು ಪ್ರದೇಶದಲ್ಲಿನ ಓರ್ವ ಹುಡುಗ ಯೋಧನಾಗಲು ಹೊರಟ ಬಳಿಕ ಪರಿಸ್ಥಿತಿ, ಪರಿಸರ ಆತನನ್ನು ಹೇಗೆ ಸೈಕೋ ಅನ್ನಾಗಿಸುತ್ತದೆ ಎನ್ನುವುದೆ ಕಥೆಯ ಒಂದ ಎಳೆ. ಇದಕ್ಕೆ ಪೂರಕವಾಗಿ ವ್ಯಕ್ತಿಗಳು ಚಿತ್ರಣಗಳು ಒಂದೊಕ್ಕೊಂದು ಬೆಸೆದು 'ಕತ್ತಲೆಕೋಣೆ' ಚಿತ್ರವಾಗಿ ತೆರೆಗೆ ಬರಲು ಸಿದ್ಧವಾಗಿ ನಿಂತಿದೆ.

ನಿರ್ದೇಶಕ ಸಂದೇಶ ಶೆಟ್ಟಿ ಆಜ್ರಿ ಇಲ್ಲಿ ನಾಯಕನಾಗಿದ್ದು, ಮುಂಬೈ ಮಾಡೆಲಿಂಗ್ ಕ್ಷೇತ್ರದ ಹೈನಿಕಾ ರಾವ್ ನಾಯಕಿಯಾಗಿ ನಟಿಸಿದ್ದಾರೆ. ಬಹುತೇಕ 85 ಶೇಕಡ ಚಿತ್ರೀಕರಣವು ರಾತ್ರಿ ವೇಳೆಯಲ್ಲಿಯೇ ನಡೆಸಿದ್ದು, ಹೊಸ ತಂಡದ ಶ್ರಮ ಚಿತ್ರಕ್ಕೆ ಜೀವಾಳವಾಗಿದೆ.
ಮುಂಬೈಯ ಪಿ.ಆರ್.ಅಮೀನ್, ಶ್ರೀನಿವಾಸ ಶಿವಮೊಗ್ಗ ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ಹೊಸ ತಂಡಕ್ಕೆ ಬೆನ್ನೆಲುಬಾಗಿದ್ದಾರೆ. ಉಳಿದಂತೆ ಆರ್ ಕೆ ಮಂಗಳೂರು ಛಾಯಾಗ್ರಹಣ ಮಾಡಿದ್ದು, ಸಹ ನಿದರ್ಶನ ಜೀತ್ ಜೋಸೆಫ್ ಸಾತ್ ನೀಡಿದ್ದಾರೆ. ಅರುಣ್ ರಾಜ್ ಸಂಗೀತ, ಅಶೋಕ್ ನೀಲಾವರ ಮತ್ತು ನಾಗರಾಜ್ ರಾವ್ ರವರ ಸಾಹಿತ್ಯ ಚಿತ್ರಕ್ಕೆ ಜೀವ ನೀಡಿದೆ.

ಮುಖ್ಯ ಭೂಮಿಕೆಯಲ್ಲಿ ಚಂದ್ರ ವಸಂತ, ಚಿತ್ರಕಲಾ ರಾಜೇಶ್, ವೈಶಾಖ್ ಅಮೀನ್, ರತಿಕ್ ಮುರುಡೇಶ್ವರ್, ರಘು ಪಾಂಡೇಶ್ವರ, ಸುನಿಲ್ ಉಪ್ಪುಂದ, ರೋಹಿತ್ ಅಂಪಾರ್, ಅಶ್ವಥ್ ಆಚಾರ್ಯ ಶ್ರೀನಿವಾಸ್ ಪೈ, ಮಂಜುನಾಥ್ ಸಾಲಿಯನ್, ನಾಗರಾಜ್ ರಾವ್ ನಟಿಸಿದ್ದಾರೆ.

ಎಲ್ಲ ಅಂದುಕೊಂಡಂತೆ ಆದ್ರೆ, ಫೆಬ್ರವರಿ ಎರಡನೇ ವಾರ ಚಿತ್ರದ ಹಾಡುಗಳು ಬಿಡುಗಡೆಯಾಗಲಿದ್ದು, ಮುಂದಿನ ವರ್ಷ ಮಾರ್ಚ್ ಅಂತ್ಯಕ್ಕೆ ಚಿತ್ರ ತೆರೆಯ ಮೇಲೆ ಬರಲಿದೆ.


Click it and Unblock the Notifications











