ಸಂಕಷ್ಟಗಳ ಸಂಕೋಲೆಯಲ್ಲಿ 'ಸೈಕೋ' ಧನುಷ್ 'ಖೈದಿ'
ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಈ ವಾರ 'ಖೈದಿ' ಸಿನಿಮಾ ತೆರೆಗೆ ಬರಬೇಕಿತ್ತು. ಅದಾಗಲೇ ಸೆನ್ಸಾರ್ ಆಗಿ, ಸೆನ್ಸಾರ್ ಮಂಡಳಿಯಿಂದ ಪ್ರಶಂಸೆ ಪಡೆದು ಬಿಡುಗಡೆಯಾಗುವುದಕ್ಕೆ ಸಿದ್ಧವಾಗಿರುವ 'ಖೈದಿ' ಚಿತ್ರ ಏಪ್ರಿಲ್ 3 ರಂದು ರಿಲೀಸ್ ಆಗಲಿದೆ ಅಂತ ಈ ಹಿಂದೆ ಸುದ್ದಿಯಾಗಿತ್ತು.
ಆದ್ರೆ, ಈ ವಾರ 'ಖೈದಿ' ಚಿತ್ರ ತೆರೆ ಕಾಣುತ್ತಿಲ್ಲ. ಇದಕ್ಕೆ ಕಾರಣ ಥಿಯೇಟರ್ ಗಳ ಕೊರತೆ. ಯೋಗರಾಜ್ ಭಟ್ ನಿರ್ದೇಶನದ 'ವಾಸ್ತುಪ್ರಕಾರ' ಇದೇ ಗುರುವಾರ ರಾಜ್ಯದಾದ್ಯಂತ ರಿಲೀಸ್ ಆಗುತ್ತಿದೆ.

ಕರ್ನಾಟಕದ ಮೂಲೆ ಮೂಲೆಯಲ್ಲೂ 100ಕ್ಕೂ ಹೆಚ್ಚು ಚಿತ್ರಮಂದಿರಗಳು 'ವಾಸ್ತುಪ್ರಕಾರ'ಗಾಗಿ ಬುಕ್ ಆಗಿವೆ. ಇದರೊಂದಿಗೆ 'ಜಸ್ಟ್ ಮದ್ವೇಲಿ' ಕೂಡ ರಿಲೀಸ್ ಆಗುತ್ತಿದೆ. ಯುಗಾದಿ ಹಬ್ಬದ ಪ್ರಯುಕ್ತ ರಿಲೀಸ್ ಆದ 'ಕೃಷ್ಣಲೀಲಾ' ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. [ಏಪ್ರಿಲ್ 3 ರಿಂದ ಹೊಸ 'ಖೈದಿ' ಆಟ ಶುರು..!]
ಹೀಗಾಗಿ 'ಖೈದಿ' ಚಿತ್ರಕ್ಕೆ ಥಿಯೇಟರ್ ಗಳ ಕೊರತೆ ಕಾಡುತ್ತಿದೆ. ಯಾವ ನಿರ್ಮಾಪಕರಾಗಲಿ, ವಿತರಕರಾಗಲಿ ಚಿತ್ರಮಂದಿರಗಳನ್ನ ಬಿಟ್ಟುಕೊಡುವುದಕ್ಕೆ ರೆಡಿಯಿಲ್ಲ. ಅಲ್ಲದೇ, 'ರಣವಿಕ್ರಮ' ಸಿನಿಮಾ ಏಪ್ರಿಲ್ 10 ರಂದು ಬಿಡುಗಡೆ ಮಾಡುವ ಸಾಧ್ಯತೆ ಕೂಡ ಇದ್ಯಂತೆ. [ಸೈಕೊ ಚಿತ್ರವನ್ನು ಕರುಣದಿ ಕಾಯೋ ಮಹದೇಶ್ವರ]

'ರಣವಿಕ್ರಮ' ತೆರೆಗೆ ಬಂದ್ರೆ, ಕನಿಷ್ಟ ಅಂದ್ರೂ 150 ಥಿಯೇಟರ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ. ಹಾಗಾದರೆ, ಒಂದೇ ವಾರದಲ್ಲಿ, ಬಹುತೇಕ ಚಿತ್ರಮಂದಿರಗಳಲ್ಲಿ ಈ ವಾರ ರಿಲೀಸ್ ಆಗುವ ಚಿತ್ರಗಳು ಎತ್ತಂಗಡಿಯಾಗುವುದು ಖಚಿತ. [ಗಾಂಧಿನಗರದ ಹೊಸ 'ಖೈದಿ'ಯ ಆಟ ನೋಡಿರಣ್ಣ]
ಈ ಕಾರಣದಿಂದ ''ಏಪ್ರಿಲ್ 17 ರಂದು ನಾವು ಬರುತ್ತೀವಿ'' ಅಂತ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಗುರುದತ್ ಹೇಳಿದ್ರು. 'ಸೈಕೋ' ಖ್ಯಾತಿಯ ಧನುಷ್ ಮತ್ತು ಚಾಂದಿನಿ ನಟಿಸಿರುವ ಸಿನಿಮಾ 'ಖೈದಿ'. ಹಲವು ವಿಶೇಷತೆಗಳಿಂದ ಈಗಾಗಲೇ ಸಖತ್ ಸುದ್ದಿ ಮಾಡಿರುವ 'ಖೈದಿ' ಆಟ ಇನ್ನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











