'ಬೆಳ್ಳಿ ಸಿನಿಮಾ ಬೆಳ್ಳಿ ಮಾತು' ಕಾರ್ಯಕ್ರಮದಲ್ಲಿ 'ಕೌದಿ' ಪ್ರದರ್ಶನ
ಈ ಶನಿವಾರ(ಜುಲೈ 15) 'ಬೆಳ್ಳಿ ಸಿನಿಮಾ ಬೆಳ್ಳಿ ಮಾತು' ಕಾರ್ಯಕ್ರಮದಲ್ಲಿ 'ಕೌದಿ' ಚಿತ್ರ ಪ್ರದರ್ಶನ ನಡೆಯಲಿದೆ.
ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿ ಪ್ರತೀ ಶನಿವಾರ 'ಬೆಳ್ಳಿ ಸಿನಿಮಾ ಬೆಳ್ಳಿ ಮಾತು' ಎಂಬ ಕಾರ್ಯಕ್ರಮ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದಿರುವ ಚಲನಚಿತ್ರಗಳ ಪ್ರದರ್ಶನ ಮತ್ತು ಸಂವಾದವು ಜರುಗುತ್ತದೆ. ಅಂತೆಯೇ ಈ ಬಾರಿ ಶ್ರೀ ರವೀಂದ್ರನಾಥ ಸಿರಿವರ ನಿರ್ದೇಶನದ 'ಕೌದಿ' ಚಿತ್ರವು ಪ್ರದರ್ಶನಕ್ಕೆ ಆಯ್ಕೆ ಆಗಿದ್ದು, ಜುಲೈ 15 ರಂದು ಬೆಂಗಳೂರಿನ ಮಿಲ್ಲರ್ ರಸ್ತೆಯಲ್ಲಿರುವ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಸಂಜೆ 4 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಚಿಂದಿ ಬಟ್ಟೆಗಳನ್ನು ಸೇರಿಸಿ ಹೊಲೆಯಲಾಗುವ ಹೊದಿಕೆಯೇ ಕೌದಿ. ಇದನ್ನೇ ವೃತ್ತಿಯಾಗಿಸಿಕೊಂಡಿರುವ ಗೊಂದಲಿಗರ ಸಂಸ್ಕೃತಿ, ಕಲೆ, ಆಚಾರ, ವಿಚಾರ, ಸಂಪ್ರದಾಯಗಳನ್ನು ವಿಶಿಷ್ಟ ರೀತಿಯಲ್ಲಿ ತೆರೆದಿಡುವ ಸಿನಿಮಾವೇ 'ಕೌದಿ'. ಈ ಚಿತ್ರದಲ್ಲಿನ ಗೀತೆ ರಚನೆಗೆ 2014 ರಲ್ಲಿ ಹುಲಿಕುಂಟೆ ಅವರಿಗೆ ಅತ್ಯುತ್ತಮ ಗೀತೆ ರಚನಾಕಾರ ಮತ್ತು ಪದ್ಮಶ್ರೀ ಡಾ. ಬಿ.ಜಯಶ್ರೀ ಅವರ ಅಭಿನಯಕ್ಕೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಲಭಿಸಿದೆ.

ಜುಲೈ 15 ರಂದು ಜರುಗಲಿರುವ 'ಬೆಳ್ಳಿ ಸಿನಿಮಾ ಬೆಳ್ಳಿ ಮಾತು' ಕಾರ್ಯಕ್ರಮದಲ್ಲಿ ಡಾ. ಬಿ. ಜಯಶ್ರೀ ರವರು, ಪ್ರೊ.ಎಸ್.ಜಿ. ಸಿದ್ದರಾಮಯ್ಯ(ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ), ಡಾ. ಹಂಸಲೇಖ ರವರು ಮತ್ತು 'ಕೌದಿ' ಚಿತ್ರತಂಡ ಆಗಮಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿಗಾಗಿ 080 2213 3410 ಗೆ ಕರೆಮಾಡಿ.


Click it and Unblock the Notifications











