ಪಾಕ್ ನಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರ
ಬಾಲಿವುಡ್ ಚಿತ್ರಗಳು ಪಾಕಿಸ್ತಾನದಲ್ಲಿ ಪ್ರದರ್ಶನಗೊಳ್ಳುವುದು ಸರ್ವೇಸಾಧಾರಣ ಸಂಗತಿ. ಆದರೆ ಇದೇ ಮೊದಲ ಬಾರಿಗೆ ಕನ್ನಡ ಚಿತ್ರ ಪಾಕಿಸ್ತಾನದಲ್ಲಿ ಪ್ರದರ್ಶನಗೊಂಡು ಮೆಚ್ಚುಗೆಗೂ ಪಾತ್ರವಾಗಿದೆ. ಈಗಾಗಲೆ ಹಲವಾರು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿರುವ 'ಲೂಸಿಯಾ' ಇದೀಗ ಈ ಹೊಸ ಗರಿಮೆಯನ್ನು ತನ್ನದಾಗಿಸಿಕೊಂಡಿದೆ.
ರೋಚಕ ಕಥೆಯ ಜೊತೆಗೆ ಮನೋವೈಜ್ಞಾನಿಕ ಸತ್ಯವುಳ್ಳ ಈ ಚಿತ್ರಕ್ಕೆ ಪವನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದರು. ಈ ಚಿತ್ರದ ತಮಿಳು ಭಾಷೆಯಲ್ಲೂ 'ಎನಕ್ಕುಲ್ ಒರುವನ್' ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. ಇದೀಗ ಪಾಕಿಸ್ತಾನಿ ಜನರನ್ನು ರಂಜಿಸುತ್ತಿದೆ. [ಲೂಸಿಯಾ ಚಿತ್ರ ವಿಮರ್ಶೆ]

ಇದೇ ಏಪ್ರಿಲ್ 17ರಂದು ಪಾಕ್ ನಲ್ಲಿ ಬಿಡುಗಡೆಯಾಗಿರುವ 'ಲೂಸಿಯಾ' ಚಿತ್ರಕ್ಕೆ ಪಾಕ್ ಪ್ರಜೆಗಳು ಫಿದಾ ಆಗಿದ್ದಾರೆ. ಈ ಬಗ್ಗೆ ಸಹಜವಾಗಿ ಪವನ್ ಕುಮಾರ್ ಅವರು ಖುಷಿಯಾಗಿದ್ದಾರೆ. ಲೂಸಿಯಾ ಚಿತ್ರ ಈಗಾಗಲೆ ಲಂಡನ್, ಝೂರಿಚ್, ಪ್ಯಾರಿಸ್, ಯುಎಸ್ಎ, ಸಿಂಗಪುರ, ಆಸ್ಟ್ರೇಲಿಯಾ ಮುಂತಾದ ಕಡೆ ಪ್ರದರ್ಶನಗೊಂಡಿದೆ.
ನಿದ್ರಾಹೀನತೆಯಿಂದ ಬಳಲುವ ನಿಕ್ಕಿ (ಸತೀಶ್ ನೀನಾಸಂ) ಸುತ್ತ ಸುತ್ತುವ ಮನೋವೈಜ್ಞಾನಿಕ ಕಥಾ ಹಂದರವನ್ನು ಚಿತ್ರ ಒಳಗೊಂಡಿದೆ. ಆಡಿಯನ್ಸ್ ಫಿಲಂಸ್ & ಹೋಮ್ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ 'ಲೂಸಿಯಾ'. ಪವನ್ ಕುಮಾರ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸಿದ್ಧಾರ್ಥ್ ನುನಿ ಅವರ ಛಾಯಾಗ್ರಹಣವಿದೆ. [ಕನ್ನಡ ಚಿತ್ರದ ವಿಮರ್ಶೆ ಪಾಕ್ ವೆಬ್ ಸೈಟ್ ನಲ್ಲಿ!]
ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ, ಸನತ್ ಸುರೇಶ್ ಮತ್ತು ಪವನ್ ಕುಮಾರ್ ಸಂಕಲನ, ಹರ್ಷ, ಮುರಳಿ, ಸೌಮ್ಯ ಜಗನ್ ಮೂರ್ತಿ ನೃತ್ಯ ನಿರ್ದೇಶನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಎಂ.ಕೆ.ಸುಬ್ರಹ್ಮಣ್ಯ. ನೀನಾಸಂ ಸತೀಶ್, ಶ್ರುತಿ ಹರಿಹರನ್, ಹಾರ್ದಿಕಾ ಶೆಟ್ಟಿ, ಅಚ್ಯುತಕುಮಾರ್, ಸಂಜಯ್, ಕೃಷ್ಣ, ರಿಷಬ್, ಬಾಲಾಜಿ ಮನೋಹರ್, ಆರ್ಯನ್, ಪೂರ್ಣಚಂದ್ರ, ಪ್ರಶಾಂತ್, ಭರತ್, ಮಹದೇವ್, ವಸುಧಾ, ಪವನ್ ಕುಮಾರ್, ಪ್ರಸಾದ್, ಅರಸು, ನಾರಾಯಣಭಟ್, ಗೌರೀಶ್, ಮಹೇಶ್, ಸತೀಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಸರಿಸುಮಾರು 110 ಜನ ಬಂಡವಾಳ ಹೂಡಿ ನಿರ್ಮಿಸಿರುವ ಚಿತ್ರ ಇದಾಗಿದೆ. ಮಂಗಳೂರಿನ ಹಾರ್ದಿಕ ಶೆಟ್ಟಿ, ಕೇರಳದ ಶ್ರುತಿ ಹರಿಹರನ್ ಚಿತ್ರದ ನಾಯಕಿಯರು. ಚಿತ್ರದ ಆಡಿಯೋಗೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು ಗೊತ್ತೇ ಇದೆ. "ನೀ ತೊರೆದ ಘಳಿಗೆಯಲಿ ನನ್ನ ಎದೆಯ ತುಂಬಾ ನಿನ್ನ ಗುರುತು", "ತಿನ್ಬೇಡಕಮ್ಮಿ ತಿನ್ ತಿನ್ಬೇಡಕಮ್ಮಿ" ಮತ್ತು "ಬಾನಲಿತ್ತು ಮುರಿದೊದ್ ಚಂದ್ರ" ಹಾಡುಗಳು ಸೂಪರ್ ಆಗಿವೆ. (ಏಜೆನ್ಸೀಸ್)


Click it and Unblock the Notifications











