ಹೊಸಬರ ಕನ್ನಡ ಸಿನಿಮಾಕ್ಕೆ ಇಂಗ್ಲೆಂಡ್ ನಲ್ಲಿ ಪ್ರಶಸ್ತಿಯ ಗರಿ
ಕನ್ನಡದ ಕೆಲ ನಿರ್ದೇಶಕರ ಸಿನಿಮಾಗಳಷ್ಟೆ ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಗಳಿಸುವ, ಗುರುತಿಸಿಕೊಳ್ಳುವ ಕಾಲವೊಂದಿತ್ತು. ಆದರೆ ಈಗ ಹಾಗಿಲ್ಲ, ಕನ್ನಡದ ಹಲವು ಪ್ರತಿಭಾವಂತ ನಿರ್ದೇಶಕರ ಸಿನಿಮಾಗಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಬಾಚಿಕೊಳ್ಳುತ್ತಿವೆ.
ಹೊಸಬರ ತಂಡವೇ ಸೇರಿ ಮಾಡಿದ್ದ ಸಿನಿಮಾ ಮನರೂಪ 2019 ರ ನವೆಂಬರ್ನಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾ ಈಗಾಗಲೇ ಹಲವು ರಾಷ್ಟ್ರೀಯ ಅಂತರರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿಕೊಂಡಿದೆ. ಇದೀಗ ಇಂಗ್ಲೆಂಡ್ನ ಔಟ್ ಆಫ್ ದಿ ಕ್ಯಾನ್ ಸಿನಿಮೋತ್ಸವದಲ್ಲಿ ಪ್ರಶಸ್ತಿ ಗಳಿಸಿ ಮುಕುಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದೆ.
ಕಿರಣ್ ಹೆಗಡೆ ನಿರ್ದೇಶನದ ಮೊದಲ ಸಿನಿಮಾ ಆದ ಮನರೂಪಕ್ಕೆ ಇಂಗ್ಲೆಂಡ್ನ ಔಟ್ ಆಫ್ ದಿ ಕ್ಯಾನ್ ಸಿನಿಮೋತ್ಸವದಲ್ಲಿ ಅತ್ಯುತ್ತಮ ಥ್ರಿಲ್ಲರ್ ಕತೆಯುಳ್ಳ ಸಿನಿಮಾ ಎಂಬ ವಿಭಾಗದಲ್ಲಿ ಪ್ರಶಸ್ತಿ ಬಂದಿದೆ. ಸಿನಿಮಾ ಮಾಡಿದ್ದೇ ಪುಳಕವಾಗಿದ್ದರೆ, ಸಿನಿಮಾಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವುದು ಮತ್ತೂ ಸಂತಸ ತಂದಿದೆ ಸಿನಿಮಾ ತಂಡಕ್ಕೆ.

ಸಿನಿಮೋತ್ಸವದಲ್ಲಿ 5000 ಸಿನಿಮಾಗಳು ಭಾಗವಹಿಸಿದ್ದರು: ಕಿರಣ್ ಹೆಗಡೆ
ಫಿಲ್ಮೀಬೀಟ್ ಕನ್ನಡ ಸಿನಿಮಾದ ಜೊತೆ ಮಾತನಾಡಿದ ಮನುರೂಪ ಸಿನಿಮಾದ ನಿರ್ದೇಶಕ ಕಿರಣ್ ಹೆಗಡೆ, 'ವರ್ಚ್ಯುಲ್ ಆಗಿ ನಡೆದ ಔಟ್ ಆಫ್ ದಿ ಕ್ಯಾನ್ ಸಿನಿಮೋತ್ಸವದಲ್ಲಿ 5000 ಸಿನಿಮಾಗಳು ಪಾಲ್ಗೊಂಡಿದ್ದವು. ಅವುಗಳಲ್ಲಿ 26 ಸಿನಿಮಾಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಲಾಗಿತ್ತು. ಮೂರು ಸಿನಿಮಾಗಳು ಥ್ರಿಲ್ಲರ್ ವಿಭಾಗದಲ್ಲಿದ್ದವು, ನಮ್ಮ ಸಿನಿಮಾ 'ಮನುರೂಪ' ಅತ್ಯುತ್ತಮ ಥ್ರಿಲ್ಲರ್ ಸಿನಿಮಾ ಆಗಿ ಆಯ್ಕೆಯಾಗಿದೆ ಎಂದರು.

ಪ್ರೇಕ್ಷಕರನ್ನು ಸೆಳೆದಿರಲಿಲ್ಲ ಸಿನಿಮಾ
ಕಳೆದ ನವೆಂಬರ್ನಲ್ಲಿ ಸಿನಿಮಾ ಬಿಡುಗಡೆ ಆದಾಗ ಪ್ರೇಕ್ಷಕರ ಗಮನವನ್ನು ಅಷ್ಟಾಗಿ ಸೆಳೆದಿರಲಿಲ್ಲ. ನಾವು ಪ್ರಯೋಗಾತ್ಮಕವಾಗಿ ಸಿನಿಮಾ ಮಾಡಿದ್ದೆವು, ಸಾಮಾನ್ಯ ಜಾನರ್ ಸಿನಿಮಾಗಳಿಗಿಂತಲೂ ಬಹುವಾಗಿ ಭಿನ್ನವಾಗಿತ್ತು ನಮ್ಮ ಸಿನಿಮಾ ಹಾಗಾಗಿ ಜನರಿಗೆ ಇಷ್ಟವಾಗಿರಲಿಕ್ಕಿಲ್ಲ, ನಾವು ಪ್ರೇಕ್ಷಕರನ್ನು ಆಯ್ಕೆ ಮಾಡಿಕೊಳ್ಳುವಲ್ಲೂ ಎಡವಿದೆವನೋ ಎಂದರು ಕಿರಣ್ ಹೆಗಡೆ.
Recommended Video

ನಾನು ಹವ್ಯಾಸಿ ಸಿನಿಮಾ ನಿರ್ದೇಶಕನಷ್ಟೆ: ಕಿರಣ್ ಹೆಗಡೆ
ಹೊಸಬರೇ ಸೇರಿಕೊಂಡು ಹವ್ಯಾಸಕ್ಕಾಗಿ ಮಾಡಿದ ಸಿನಿಮಾಕ್ಕೆ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಈವರೆಗೆ 10 ಪ್ರಶಸ್ತಿ ಬಂದಿದೆ ಎಂದ ಕಿರಣ್ ಹೆಗಡೆ, ನಾನು ಹವ್ಯಾಸಿ ಸಿನಿಮಾ ನಿರ್ದೇಶಕ, ಇದು ನನ್ನ ವೃತ್ತಿಯಲ್ಲ, ಆದರೆ ಕೊರೊನಾ ಎಲ್ಲಾ ಮುಗಿದ ಬಳಿಕ ಮತ್ತೊಂದು ಸಿನಿಮಾ ಮಾಡುವ ಯೋಚನೆ ಇದೆ ಎಂದರು ಕಿರಣ್ ಹೆಗಡೆ.


Click it and Unblock the Notifications











