'ಮಿಸ್ ಮಲ್ಲಿಗೆ' ಬಗ್ಗೆ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಬೇಡ
ಶೀರ್ಷಿಕೆ ಹಾಗೂ ಕಥೆಯ ವಿಷಯದಲ್ಲಿ ಸಾಕಷ್ಟು ವಿವಾದಗಳಿಗೆ ಗುರಿಯಾಗಿದ್ದ ಚಿತ್ರ 'ಮೈಸೂರು ಮಲ್ಲಿಗೆ'. ಕೊನೆಗೂ ತನ್ನೆಲ್ಲಾ ಸಂಕಷ್ಟಗಳಿಂದ ಹೊರಬಂದಿದೆ. ಚಿತ್ರದ ಶೀರ್ಷಿಕೆಯನ್ನು 'ಮಿಸ್ ಮಲ್ಲಿಗೆ' ಎಂದು ಬದಲಾಯಿಸಿಕೊಂಡಿರುವ ನಿರ್ದೇಶಕ ಆಸ್ಕರ್ ಕೃಷ್ಣ ಮಾಧ್ಯಮಗಳ ಮುಂದೆ ಬಂದು ಚಿತ್ರದ ಕಥೆಯನ್ನು ಸಂಕ್ಷಿಪ್ತವಾಗಿ ವಿವರಿಸುವುದರ ಮೂಲಕ ಊಹಾಪೋಹಗಳಿಗೆಲ್ಲ ತೆರೆ ಎಳೆದರು.
'ಗಾಲಿ' ಚಿತ್ರದಲ್ಲಿ ನೇರ ಹಾಗೂ ದ್ವಂದ್ವಾರ್ಥದ ಸಂಭಾಷಣೆಗಳನ್ನು ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದ ನಟಿ ರೂಪ ನಟರಾಜ್ ಈ ಚಿತ್ರದ ನಾಯಕಿ. ಇಲ್ಲಿ ಕೂಡ ಕನಿಷ್ಠ ಉಡುಪು ಧರಿಸಿ ಫೋಜ್ ಕೊಟ್ಟಿರುವುದಲ್ಲದೆ ಕೆಲ ದೃಷ್ಯಗಳಲ್ಲಿ ಮೈ ಛಳಿ ಬಿಟ್ಟು ಅಭಿನಯಿಸಿ ಸುದ್ದಿಯಾಗಿದ್ದಾರೆ. ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಎಲ್ಲಾ ವಿಷಯಗಳು ಚರ್ಚೆಗೆ ಬಂದವು.
ವಿಸ್ಮಯ ವಿಜ್ಯುಯಲ್ ಹಾಗೂ ಶ್ರೀಚಾಮುಂಡೇಶ್ವರಿ ಸ್ಟುಡಿಯೋಸ್ ಸೇರಿ ನಿರ್ಮಿಸುತ್ತಿರುವ 'ಮಿಸ್ ಮಲ್ಲಿಗೆ' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವವರು ಆಸ್ಕರ್ ಕೃಷ್ಣ. ಕಳೆದ ವರ್ಷ ಕಥೆ ರೆಡಿಮಾಡಿಕೊಂಡು ಟೈಟಲ್ ರಿಜಿಸ್ಟರ್ ಮಾಡಿಸಿ 6 ತಿಂಗಳ ಹಿಂದೆ ಶೂಟಿಂಗ್ ಮಾಡಿದ್ದೆವು. ಆಗ ಯಾರ ಆಕ್ಷೇಪವೂ ಇರಲಿಲ್ಲ.

ಮೈಸೂರಿನಲ್ಲಿ ವಾಸಿಸುವ ಶೋಷಿತ ಹೆಣ್ಣೊಬ್ಬಳ ಕಥೆ
ಇತ್ತೀಚೆಗೆ ಚಿತ್ರದ ಕೆಲ ಫೋಟೋಗಳು ಪತ್ರಿಕೆಗಳಲ್ಲಿ ಪ್ರಕಟವಾದ ನಂತರ ಇಷ್ಟೆಲ್ಲಾ ಘಟನೆಗಳು ನಡೆದವು. ಬೇರೆಯವರಿಗೆ ತೊಂದರೆ ಕೊಡುವ ಉದ್ದೇಶ ಖಂಡಿತ ನಮಗಿರಲಿಲ್ಲ. ಮೈಸೂರಿನಲ್ಲಿ ವಾಸಿಸುವ ಶೋಷಿತ ಹೆಣ್ಣೊಬ್ಬಳ ಕಥೆ ಇದಾಗಿದ್ದರಿಂದ ಕಥೆಗೆ ಪೂರಕವಾಗಿ 'ಮೈಸೂರು ಮಲ್ಲಿಗೆ' ಎಂದು ಶೀರ್ಷಿಕೆ ಕೊಟ್ಟಿದ್ದೆವು.

ಕೋರ್ಟ್ ಮೆಟ್ಟಿಲೇರಿದ್ದ ನಾಗಾಭರಣ
ಎರಡು ದಶಕಗಳ ಹಿಂದೆ ಬಂದ 'ಮೈಸೂರು ಮಲ್ಲಿಗೆ' ಚಿತ್ರದ ನಿರ್ದೇಶಕರಾದ ನಾಗಾಭರಣ ಅವರು ಅದನ್ನು ತಪ್ಪಾಗಿ ಅರ್ಥೈಸಿಕೊಂಡು ಕೋರ್ಟಿಗೆ ದಾವಾ ಹಾಕಿದ್ದರು. ಈಗ ಎಲ್ಲಾ ಸರಿಹೋಗಿದೆ ಎಂದು ಇದುವರೆಗೆ ನಡೆದ ವಿದ್ಯಮಾನಗಳನ್ನು ನಿರ್ದೇಶಕ ಕೃಷ್ಣ ಹೇಳಿದರು.

ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡುವ ಮಲ್ಲಿಗೆ
ನಂತರ ಚಿತ್ರದ ಬಗ್ಗೆ ಮಾತನಾಡಿ ಮಲ್ಲಿಗೆ ಕಾರ್ಪೊರೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಹೆಣ್ಣು, ಹಿಂದೆ ಆಕೆಯ ಜೀವನದಲ್ಲಿ ನಡೆದ ಅಹಿತರ ಘಟನೆಯೊಂದು ಆಕೆಗೆ ಯಾವ ರೀರಿ ಹಿಂಸೆ ಕೊಡುತ್ತದೆ.

ಮೊಬೈಲ್ ದುರ್ಬಳಕೆ ಕಥಾವಸ್ತುವೂ ಇದೆ
ಸಮಾಜ ಅಂಥವನ್ನು ಯಾವ ದೃಷ್ಟಿಯಿಂದ ನೋಡುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದ್ದು ನಾನು ನೋಡಿದ, ಕೇಳಿದ ಘಟನೆಗಳು, ಮೊಬೈಲ್ ದುರ್ಬಳಕೆ ಮೊದಲಾದ ಮಿಷಯಗಳನ್ನು ಚಿತ್ರದಲ್ಲಿ ತೋರಿಸಿದ್ದೇನೆ.

ಇದು ಪ್ರಯತ್ನವಷ್ಟೇ ಪರಿಹಾರವಲ್ಲ
ಇದು ಸಮಸ್ಯೆಗಳನ್ನು ತೆರೆದಿಡುವ ಪ್ರಯತ್ನ ಅಷ್ಟೇ. ಪರಿಹಾರವಲ್ಲ. ಜನರಲ್ಲಿ ಜಾಗೃತಿ ಮೂಡಿಸಬೇಕೆನ್ನುವುದೂ ನಮ್ಮ ಉದ್ದೇಶಗಳಲ್ಲೊಂದು ಎಂದು ತನ್ನ ಚಿತ್ರವನ್ನು ಆಸ್ಕರ್ ಕೃಷ್ಣ ಸಮರ್ಥಿಸಿಕೊಂಡಿದ್ದಾರೆ.

ಒಂಟಿ ಮಹಿಳೆಯೊಬ್ಬಳ ಜೀವನದಲ್ಲಿ ಗಂಡಸರ ಆಟ
ನಾಯಕಿ ರೂಪಾ ನಟರಾಜ ಮಾತನಾಡಿ, "ಈಗಿನ ಸಮಾಜದಲ್ಲಿ ಹೆಣ್ಣಿನ ಶೋಷಣೆ ಯಾವ ರೀತಿ ನಡೆಯುತ್ತದೆ. ಒಂಟಿ ಮಹಿಳೆಯೊಬ್ಬಳ ಜೀವನದಲ್ಲಿ ಗಂಡಸರು ಹೇಗೆ ಆಟವಾಡುತ್ತಾರೆ ಅನ್ನೋದೇ ಈ ಚಿತ್ರದ ಕಥೆ.

ಇಡೀ ಚಿತ್ರ ನನ್ನ ಪಾತ್ರದ ಮೇಲೆ ಕೇಂದ್ರೀಕೃತ
ಇಡೀ ಚಿತ್ರ ನನ್ನ ಪಾತ್ರದ ಮೇಲೆ ಕೇಂದ್ರೀಕೃತವಾಗಿದೆ. ತುಂಬಾ ಇಷ್ಟಪಟ್ಟು ಎಫರ್ಟ್ ಹಾಕಿ ಅಭಿನಯಿಸಿದ್ದೇನೆ. ನಿಜಕ್ಕೂ ಇದು ಎಲ್ಲಾ ವರ್ಗದ ಜನರಿಗೆ ಇಷ್ಟವಾಗುವಂಥ ಚಿತ್ರ" ಎಂದು ಹೇಳಿಕೊಂಡರು.


Click it and Unblock the Notifications











