'ಪಂಗನಾಮ' ಎರಡು ವೈಟು ಒಂದು ರೆಡ್ಡು ವಿವಾದ
ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಶೀರ್ಷಿಕೆ ವಿವಾದ ತಲೆ ಎತ್ತಿದೆ. ಮೂರು ವರ್ಷಗಳ ಹಿಂದೆ ಸೆಟ್ಟೇರಿದ್ದ 'ಪಂಗನಾಮ' ಎಂಬ ಚಿತ್ರದ ಶೀರ್ಷಿಕೆಗೆ ವಿವಿಧ ಧಾರ್ಮಿಕ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ರೀತಿಯ ಶೀರ್ಷಿಕೆ ಇಟ್ಟು ಧಾರ್ಮಿಕ ಭಾವನೆಗಳನ್ನು ಕೆಣಕುತ್ತ್ತಿದ್ದಾರೆ ಎಂಬ ಆರೋಪ ಶೀರ್ಷಿಕೆ ವಿರುದ್ಧ ಕೇಳಿಬಂದಿದೆ.
'ಪಂಗನಾಮ' ಎಂದರೆ ಎರಡು ಬಿಳಿ ಹಾಗೂ ಮಧ್ಯದಲ್ಲಿ ಕೆಂಪು ನಾಮ ಇರುವ ಧಾರ್ಮಿಕ ಲಾಂಛನ. ತಿರುಮಣ್ ಎಂಬ ಶ್ರೇಷ್ಠವಾದ ಮಣ್ಣನ್ನು ಬಳಸಿ ಈ ನಾಮವನ್ನು ಧರಿಸಲಾಗುತ್ತದೆ. ಮಧ್ಯದಲ್ಲಿರುವ ಕೆಂಪು ನಾಮ ಸಾಕ್ಷಾತ್ ಲಕ್ಷ್ಮಿಯ ಸಂಕೇತ. [ಪಂಗನಾಮ ಗ್ಯಾಲರಿ]
ತಿರುಪತಿ ತಿಮ್ಮಪ್ಪ, ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ಹಣೆಯ ಮೇಲೆ ಸೇರಿದಂತೆ ನಾನಾ ದೇವಾಲಯಗಳಲ್ಲಿ ಈ ನಾಮವನ್ನು ಬಳಸಲಾಗುತ್ತಿದೆ. ಇದು ದೇವರ ಪಾದದ ಸಂಕೇತ. ಇದನ್ನು ಧರಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ಮೇಲುಕೋಟೆ ದೇವಸ್ಥಾನದ 4ನೇ ಸ್ಥಾನಿಕ ಶ್ರೀನಿವಾಸನ್. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಕೃಷ್ಣದೇವರಾಯ ಕಾಲದಲ್ಲೂ ಪಂಗನಾಮ ಬಳಕೆಯಲ್ಲಿತ್ತು
ಎರಡು ಯುಗಗಳಿಂದ ಬಂದಂತಂಹ ಸಂಪ್ರದಾಯ ಇದು. ಕೃಷ್ಣದೇವರಾಯ ಕಾಲದಲ್ಲೂ ಬಳಸಲಾಗುತ್ತಿತ್ತು. ವಿಷಯ ಹೀಗಿರುವಾಗ ಈ ನಾಮ ಹಾಕಿದವರೆಲ್ಲಾ ಮೋಸ ಮಾಡಿದ್ದರೆ? ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬೇಡಿ ಎಂದು ಶ್ರೀನಿವಾಸನ್ ವಿನಂತಿಸಿಕೊಂಡಿದ್ದಾರೆ.

ಯಾಮಾರಿದರೆ ಎರಡು ವೈಟು ಒಂದು ರೆಡ್ಡು...
ಆದರೆ 'ಪಂಗನಾಮ' ಎಂಬ ಶೀರ್ಷಿಕೆಯನ್ನು ಬೇರೆ ಅರ್ಥದಲ್ಲಿ, ಅಂದರೆ ಮೋಸ ಮಾಡಿದವನು ಎಂಬರ್ಥದಲಿ ಬಳಸಲಾಗುತ್ತಿದೆ. ಇನ್ನು ಚಿತ್ರದ ಅಡಿಬರಹ 'ಯಾಮಾರಿದರೆ ಎರಡು ವೈಟು ಒಂದು ರೆಡ್ಡು...' ಎಂಬುದು ಇದಕ್ಕೆ ಪೂರಕವಾಗಿರುವುದು ಇನ್ನಷ್ಟು ವಾದಕ್ಕೆ ಎಡೆ ಮಾಡಿಕೊಡುವಂತಿದೆ.

ಚಿತ್ರದ ಶೀರ್ಷಿಕೆ ಬದಲಿಸಲು ಸೂಚನೆ
ಚಿತ್ರದ ಶೀರ್ಷಿಕೆ ಬದಲಿಸುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ. ಚಿತ್ರದ ಶೀರ್ಷಿಕೆಯನ್ನು ಬದಲಿಸುವಂತೆ ಪಂಗನಾಮ ಚಿತ್ರದ ನಿರ್ದೇಶಕ ಗುರುರಾಜ್ ಅವರಿಗೆ ಸೂಚಿಸಿದೆ. ಆದರೆ ಶೀರ್ಷಿಕೆಯನ್ನು ಬದಲಿಸಲು ನಿರ್ದೇಶಕರು ಸುತಾರಾಂ ಒಪ್ಪುತ್ತಿಲ್ಲ.

ಪಂಗನಾಮ ಟೈಟಲ್ ನಾನು ಹುಟ್ಟುಹಾಕಿದ್ದಲ್ಲ
ಈ ಸಂಬಂಧ ಗುರುರಾಜ್ ಮಾತನಾಡುತ್ತಾ, "ಪಂಗನಾಮ ಎಂಬ ಟೈಟಲ್ ನಾನು ಹುಟ್ಟುಹಾಕಿದ್ದಲ್ಲ. ಇದು ಜನರ ಆಡುಮಾತಿನಲ್ಲೇ ಇದೆ. 2011ರಲ್ಲಿ ಚಿತ್ರ ಆರಂಭವಾದಾಗ ಯಾರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಎರಡು ಬಾರಿ ರೀ ರಿಜಿಸ್ಟರ್ ಮಾಡಿಸಿದ್ದೇನೆ ಆಗಲೂ ವಿವಾದ ತಲೆ ಎತ್ತಿರಲಿಲ್ಲ" ಎನ್ನುತ್ತಾರೆ.

ಯಾವುದೇ ಧರ್ಮಕ್ಕೆ, ಜನಾಂಗಕ್ಕೆ ಅಪಮಾನ ಮಾಡಿಲ್ಲ
"ನಮಗೂ ಯಾವುದೇ ವಿವಾದ ಮಾಡಿಕೊಳ್ಳಬೇಕೆಂಬ ಉದ್ದೇಶವಿಲ್ಲ. ಜೂನ್ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡಬೇಕೆಂದಿದ್ದೇವೆ. ಚಿತ್ರದಲ್ಲಿ ಯಾವುದೇ ಧರ್ಮಕ್ಕೆ, ಜನಾಂಗಕ್ಕೆ ಅಪಮಾನ ಮಾಡಿಲ್ಲ. ಚಿತ್ರ ನೋಡಿ ಆಕ್ಷೇಪಗಳೇನಾದರೂ ಇದ್ದರೆ ಆಮೇಲೆ ಮಾತಾಡಿ ಈಗಲೇ ವಿವಾದ ಮಾಡುವುದು ಸರಿಯಲ್ಲ" ಎಂದಿದ್ದಾರೆ ಚಿತ್ರದ ನಿರ್ದೇಶಕ ಗುರುರಾಜ್.

ಚಿತ್ರದ ನಿರ್ದೇಶಕರು ಬಿ.ಇ. ಕಂಪ್ಯೂಟರ್ ಸೈನ್ಸ್ ಪದವೀಧರರು
ಇನ್ನು ಚಿತ್ರದ ನಿರ್ದೇಶಕ ಗುರುರಾಜ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ ಇದು. ಬಿ.ಇ ಕಂಪ್ಯೂಟರ್ ಸೈನ್ಸ್ ಪದವೀಧರರಾಗಿರುವ ಅವರು 12 ವರ್ಷಗಳ ಕಾಲ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿ ಇದೀಗ ಗಾಂಧಿನಗರಕ್ಕೆ ಕಾಮಿಡಿ ಚಿತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ.

ರಜಾ ದಿನಗಳಲ್ಲಿ ಚಿತ್ರ ಮಾಡಿದ ಗುರುರಾಜ್
ಕಂಪನಿಯಲ್ಲಿ ಕೆಲಸ ಮಾಡುತ್ತಾ ರಜಾ ದಿನಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಿರುವುದು ವಿಶೇಷ. ಈ ಹಿಂದೆ ಅವರು ತಮಾಷೆಗಾಗಿ, ಯಕ್ಷ, ದೇವನಹಳ್ಳಿ ಎಂಬ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನೂ ಪೋಷಿಸಿದ್ದಾರೆ. ಇದೀಗ ಆಕ್ಷನ್ ಕಟ್ ಹೇಳುತ್ತಿರುವ ಪಂಗನಾಮ ಚಿತ್ರಕ್ಕೆ ಇಬ್ಬರು ನಿರ್ಮಾಪಕರು ದೇವರಾಜ್ ಬಾನಗೆರೆ ಹಾಗೂ ಜಾನವಿ ಬಸವರಾಜ್.

ಪಾತ್ರವರ್ಗದಲ್ಲಿ ಸಾಧು ಕೋಕಿಲ, ದೊಡ್ಡಣ್ಣ
ನಿರ್ದೇಶನದ ಜೊತೆಗೆ ಈ ಚಿತ್ರದಲ್ಲಿ ಬಣ್ಣವನ್ನೂ ಹಚ್ಚಿದ್ದಾರೆ ಗುರುರಾಜ್. ಚಿತ್ರದಲ್ಲಿ ಸಾಧು ಕೋಕಿಲ ಅವರದು ಪೊಲೀಸ್ ಪಾತ್ರ. ಅಕ್ಷತಾ ರಾವ್, ಸುಂದರ್ ರಾಜ್, ದೊಡ್ಡಣ್ಣ ಉಳಿದವರು ಚಿತ್ರದ ಪಾತ್ರವರ್ಗದಲ್ಲಿದ್ದಾರೆ. ಈ ಚಿತ್ರದ ನಾಯಕಿ ಸಂಜನಾ ಪ್ರಕಾಶ್.


Click it and Unblock the Notifications











